ಸರ್ಕಾರಿ ಹೈಸ್ಕೂಲ್ ಮಕ್ಳು ಇಂಗ್ಲಿಷ್ ಮೇಷ್ಟ್ರಿಗಾಗಿ ಕಣ್ಣೀರಿಟ್ಟರು!
Recommended Video

ಬೆಂಗಳೂರು, ಜೂನ್ 22: ಶಿಕ್ಷಕರೊಬ್ಬರು ವರ್ಗಾವಣೆಗೊಂಡ ವೇಳೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸುವುದು ಶಾಲೆಗಳಲ್ಲಿ ವಾಡಿಕೆ. ಆದರೆ ಮಕ್ಕಳು ಶಿಕ್ಷಕರ ಸುತ್ತುವರೆದು ಶಾಲೆಯಿಂದ ಬೇರೆಡೆಗೆ ವರ್ಗಾವಣೆಗೊಂಡು ಹೋಗಬೇಡಿ ಎಂದು ಅಂಗಲಾಚಿದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಇಂಗ್ಲಿಷ್ ಭಾಷೆಯ ಶಿಕ್ಷಕ ಜಿ. ಭಗವಾನ್ ಎಂಬುವವರು ವರ್ಗಾವಣೆಗೊಂಡಾಗ ಇಡೀ ಶಾಲೆಯ ಮಕ್ಕಳು ಕಣ್ಣೀರು ಹಾಕಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ತಿರುವಳ್ಳೂರು ಸಮೀಪದ ವೆಲಿಯಾಗರಂ ಎಂಬ ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ಜಿ. ಭಗವಾನ್ ಅವರಿಗೆ ವರ್ಗಾವಣೆಯಾಗಿದ್ದು ಆ ಶಿಕ್ಷಕರನ್ನು ಬಿಟ್ಟುಕೊಡಲು ಶಾಲೆ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.
ಇಡೀ ಶಾಲೆಯ ಮಕ್ಕಳು, ಶಿಕ್ಷಕರನ್ನು ತಬ್ಬಿ ಕಣ್ಣೀರು ಹಾಕಿದ್ದಾರೆ. ಅಷ್ಟೇ ಅಲ್ಲ ತಮ್ಮ ಶಾಲೆಯಿಂದ ಬೇರೆಡೆಗೆ ಹೋಗಕೂಡದು ಎಂದು ತಾಕೀತು ಮಾಡಿದ್ದಾರೆ. ಮಕ್ಕಳ ಪ್ರೀತಿಗೆ ಮನಸೋತ ಶಿಕ್ಷಕ ಕೂಡ ಕಣ್ಣೀರು ಹಾಕಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.

28 ವರ್ಷ ಭಗವಾನ್ ವಿದ್ಯಾರ್ಥಿಗಳಿಗೆ ಕೇವಲ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಮಾತ್ರವಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ಹಿನ್ನೆಲೆ ಅವರ ಆರ್ಥಿಕ ಸ್ಥಿತಿ, ಮಕ್ಕಳ ಮಾನಸಿಕ ಸ್ಥಿಮಿತತೆ ಹಾಗೂ ಅವರ ವೈಯಕ್ತಿಕ ದೌರ್ಬಲ್ಯ ಹಾಗೂ ಶಕ್ತಿಯನ್ನು ಅಧ್ಯಯನ ಮಾಡುವ ಮೂಲಕ ಮಕ್ಕಳಿಗೆ ಕಥೆಯನ್ನೂ ಹೇಳುವ ಮೂಲಕ ಪಾಠ ಮಾಡಿ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ.

ಅಷ್ಟೇ ಅಲ್ಲ ಪ್ರೌಢಶಾಲೆಯಲ್ಲಿ ಪ್ರಾಜೆಕ್ಟರ್ ಮೂಲಕ ಪ್ರತಿಯೊಂದು ವಿಷಯವನ್ನು ವಿವರಿಸಿ ಮಕ್ಕಳಿಗೆ ಮನದಟ್ಟು ಮಾಡುವ ವಿಶಿಷ್ಟ ಪ್ರಯತ್ನ ಮಾಡಿರುವುದು ಮಕ್ಕಳ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಮಕ್ಕಳು ಶಿಕ್ಷಕರನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಈ ಘಟನೆ ಇದೀಗ ಶಿಕ್ಷಕರ ವರ್ಗದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಉತ್ತಮ ಶಿಕ್ಷಕರಿಗೆ ಮಕ್ಕಳು ಕೊಡಬಹುದಾದ ಅತಿ ದೊಡ್ಡ ಗೌರವ ಇದಾಗಿದೆ ಎಂದು ಸಾಮಾಜಿಕ ಜಾಲಾತಾಣದದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.












Click it and Unblock the Notifications