ವಿಜ್ಞಾನಿಯಾಗಲು ಬಯಸಿದ್ದ ವಿದ್ಯಾರ್ಥಿ ಶ್ರೀಧರ್ ದುರಂತ ಅಂತ್ಯ
ನೋಯ್ಡಾ, ಮೇ 08: ವಿಜ್ಞಾನಿ ಸ್ಟೀಫನ್ ಹಾಕಿಂಗ್ ರಂತಾಗಬೇಕು, ಗಗನಯಾತ್ರಿಯಾಗಬೇಕು, ರಾಮೇಶ್ವರಂ ಪ್ರವಾಸ ಕೈಗೊಳ್ಳಬೇಕು ಹೀಗೆ ಕನಸಿನ ಮೂಟೆ ಹೊತ್ತುಕೊಂಡಿದ್ದ ವಿದ್ಯಾರ್ಥಿ ವಿನಾಯಕ್ ಶ್ರೀಧರ್ ಗೆ ಸಿಬಿಎಸ್ಇ ಕ್ಲಾಸ್ 10 ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸುವ ಉತ್ಸಾಹದಲ್ಲಿದ್ದ.
ಆದರೆ, ವಿಧಿಯಾಟ ಬೇರೆಯದ್ದೇ ಕಥೆ ಬರೆದಿತ್ತು. ಮಾರ್ಚ್ ತಿಂಗಳಿನಲ್ಲಿ ಶ್ರೀಧರ್ ಬರೆಯಲು ಸಾಧ್ಯವಾಗಿದ್ದು ಮೂರು ಪರೀಕ್ಷೆಗಳನ್ನು ಮಾತ್ರ. ಮಿಕ್ಕರೆಡು ಪರೀಕ್ಷೆ ಬರೆಯುವ ಮುನ್ನವೇ ಕೊನೆಯುಸಿರೆಳೆದಿದ್ದ.
ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಷನ್(ಸಿಬಿಎಸ್ ಇ) ಕ್ಲಾಸ್ 10 ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿನಾಯಕ್ ಶ್ರೀಧರ್ ಗೆ ಇಂಗ್ಲೀಷ್ ನಲ್ಲಿ 100, ವಿಜ್ಞಾನದಲ್ಲಿ 96 ಹಾಗೂ ಸಂಸ್ಕೃತದಲ್ಲಿ 97 ಅಂಕಗಳು ಬಂದಿವೆ. ಆದರೆ, ರಿಸಲ್ಟ್ ನೋಡುವ ಭಾಗ್ಯ ವಿನಾಯಕ್ ಗೆ ಇಲ್ಲ.

ಬಾಲ್ಯದಿಂದ ಬೆನ್ನು ಹತ್ತಿದ ಕಾಯಿಲೆ : ಶ್ರೀಧರ್ 2 ವರ್ಷ ವಯಸ್ಸಿನವನಿದ್ದಾಗಲೇ ಮಸ್ಕುಲರ್ ಡಿಟ್ರೋಫಿ Duchenne muscular dystrophy (DMD) ಹೆಸರಿನ ಕಾಯಿಲೆ ಬಾಧಿಸುತ್ತಿತ್ತು. ಅನುವಂಶೀಯ ಕಾಯಿಲೆಯಿಂದಾಗಿ ನರ, ಸ್ನಾಯುಗಳು ಸತತವಾಗಿ ತಮ್ಮ ಕಾರ್ಯ ನಿಲ್ಲಿಸತೊಡಗಿದ್ದವು ಡಿಟ್ರೋಫಿನ್ ಎಂಬ ಪ್ರೋಟಿನ್ ಇಲ್ಲದ ಕಾರಣ ಸ್ನಾಯುಗಳ ಕೋಶಗಳ ಬಿಗಿ ಕಳೆದುಕೊಂಡಿತ್ತು.
ವಿನಾಯಕ್ ನೋಯ್ಡಾದ ಅಮಿಟಿ ಶಾಲೆಯಲ್ಲಿ ಓದುತ್ತಿದ್ದ. ಬ್ರಿಟನ್ನಿನ ಖಭೌತ ಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ರಂತೆ ಗಾಲಿ ಖುರ್ಚಿಯಲ್ಲಿ ಶ್ರೀಧರ್ ಅವರ ಜೀವನ ಸಾಗಿತ್ತು. ಸಂಸ್ಕೃತ ಪರೀಕ್ಷೆಯನ್ನು ತಾನೇ ಬರೆದಿದ್ದ ವಿನಾಯಕ್, ವಿಜ್ಞಾನ ಹಾಗೂ ಇಂಗ್ಲೀಷ್ ಗೆ ಬರಹಗಾರರ ಸಹಾಯ ಪಡೆದಿದ್ದ. ವಿಶೇಷ ಕೆಟಗರಿಯ ಲಾಭ ಪಡೆಯದೇ ಸಾಮಾನ್ಯ ಕೆಟಗರಿ ವಿದ್ಯಾರ್ಥಿಯಂತೆ ಪರೀಕ್ಷೆ ತೆಗೆದುಕೊಂಡಿದ್ದರು.
ವ್ಹೀಲ್ ಚೇರ್ ನಲ್ಲಿ ಕುಳಿತು ಹಾಕಿಂಗ್ಸ್, ಆಕ್ಸ್ ಫರ್ಡ್ ಗೆ ಹೋಗಿ ಕಾಸ್ಮೋಲಾಜಿ ಓದಬಹುದಾದರೆ, ನಾನು ಕೂಡಾ ಆ ರೀತಿ ಸಾಧನೆ ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸುತ್ತಿದ್ದ, ಅವನ ಹುಮ್ಮಸ್ಸು ಕಂಡು ನಮಗೆ ಅಚ್ಚರಿಯಾಗುತ್ತಿತ್ತು ಎಂದು ಶ್ರೀಧರ್ ತಾಯಿ ಮಮತಾ ಪ್ರತಿಕ್ರಿಯಿಸಿದ್ದಾರೆ.
ಶ್ರೀಧರ್ ಆಸೆಯಂತೆ ಆತನ ತಂದೆ ತಾಯಿ ಈಗ ಕನ್ಯಾಕುಮಾರಿ, ರಾಮೇಶ್ವರಂ ಪ್ರವಾಸ ಕೈಗೊಂಡಿದ್ದಾರೆ. ಅವನ ಈಡೇರದ ಆಸೆಯನ್ನು ನಾವು ಈ ರೀತಿ ಪೂರೈಸುತ್ತಿದ್ದೇವೆ, ಪರೀಕ್ಷೆ ಫಲಿತಾಂಶ ಬಂದಾಗ ಮಗನನ್ನು ನೆನದು ತುಂಬಾ ದುಃಖವಾಯಿತು ಎಂದು ಮಮತಾ ಹೇಳಿದರು.












Click it and Unblock the Notifications