Vande Bharat Express ರೈಲಿನ ಮೇಲೆ ಮುಂದುವರಿದ ಕಲ್ಲು ತೂರಾಟ: ದ್ವೇಷ ರಾಜಕೀಯದ ನೆರಳು?
ಕೋಲ್ಕತ್ತ, ಡಿಸೆಂಬರ್ 04: ಹೌರಾ-ನ್ಯೂ ಜಲ್ಪೈಗುರಿ ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ನ ಎರಡು ಕೋಚ್ಗಳ ಕಿಟಕಿ ಗಾಜುಗಳು ಮಂಗಳವಾರ ಹಾನಿಗೊಳಗಾಗಿವೆ. ಇಪ್ಪತ್ನಾಲ್ಕು ಗಂಟೆಯೊಳಗೆ ಕಲ್ಲು ತೂರಾಟದ ಎರಡನೇ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲ್ಡಾ ನಂತರ, ಈ ಬಾರಿ ಕಲ್ಲು ತೂರಾಟದ ಘಟನೆ ನ್ಯೂ ಜಲ್ಪೈಗುರಿಯಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ 1:20 ರ ಸುಮಾರಿಗೆ ನ್ಯೂ ಜಲ್ಪೈಗುರಿಗೆ ಹೋಗುವ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ನ ಸಿ-3 ಮತ್ತು ಸಿ-6 ಕೋಚ್ಗಳ ಗಾಜುಗಳಿಗೆ ಹಾನಿಯಾಗಿದೆ. ರೈಲ್ವೆ ಮೂಲಗಳ ಪ್ರಕಾರ, ಮಂಗಳವಾರ ಸಂಜೆ ಹೌರಾಕ್ಕೆ ಹೋಗುವ ರೈಲು ಮಾಲ್ಡಾ ಟೌನ್ ನಿಲ್ದಾಣವನ್ನು ಪ್ರವೇಶಿಸಿದಾಗ ಕಿಟಕಿಯ ಮೇಲೆ ಬಿರುಕುಗಳು ಕಂಡುಬಂದಿವೆ. ಆರ್ಪಿಎಫ್ನ ಸಾಮ್ಸಿ ಪೋಸ್ಟ್ನಲ್ಲಿ ದೂರು ದಾಖಲಾಗಿದೆ. ನ್ಯೂ ಜಲ್ಪೈಗುರಿ ಕಾರ್ ಶೆಡ್ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಜನವರಿ 3 ರಂದು ಸಂಜೆ 5.57 ರ ಸುಮಾರಿಗೆ, ರೈಲು ನಂ.22302 ಮಾಲ್ಡಾ ಟೌನ್ಗೆ ಆಗಮಿಸಿತು. ಪರಿಶೀಲಿಸಿದಾಗ ಕೋಚ್ ನಂ. C-3 ಮತ್ತು C-6 ರ ಗಾಜಿನ ಮೇಲ್ಮೈಯಲ್ಲಿ ಕಲ್ಲು ತೂರಾಟದ ಗುರುತು ಕಂಡುಬಂದಿತು. ಬೆಳಗಿನ ಜಾವ ಸುಮಾರು 13.20 ಗಂಟೆಯ ಸಮಯದಲ್ಲಿ ರೈಲು ಎನ್ಜೆಪಿ ಕಡೆಗೆ ಹೋಗುತ್ತಿದ್ದಾಗ, ಯಾರ್ಡ್ ಪ್ರದೇಶಕ್ಕೆ ತಲುಪುವ ಮೊದಲು ಸಿ-3 ಮತ್ತು ಸಿ-6 ಕೋಚ್ಗಳಲ್ಲಿ ಕಲ್ಲು ತೂರಾಟದ ಘಟನೆ ಸಂಭವಿಸಿದೆ. ನಿನ್ನೆ ಅಂದರೆ 02.01.2023 ರಂದು ಕುಮಾರ್ಗಂಜ್ ಸ್ಟೇಷನ್ನಲ್ಲಿ ಕಲ್ಲು ತೂರಾಟ ನಡೆದಿದೆ. ಇದರ ಪರಿಣಾಮವಾಗಿ ಪ್ರಕರಣವನ್ನು ದಾಖಲಿಸಲಾಗಿದೆ' ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಘಟನೆಯ ತನಿಖೆಯನ್ನು ರಾಜ್ಯ ಪೊಲೀಸರೊಂದಿಗೆ ಆರ್ಪಿಎಫ್ ನಡೆಸುತ್ತಿದೆ. ಕಲ್ಲು ತೂರಾಟ ಪ್ರಕರಣಗಳನ್ನು ತಡೆಯಲು ಆರ್ಪಿಎಫ್ ಕೆಲವು ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳನ್ನು ಸಹ ಪ್ರಾರಂಭಿಸಿದೆ ಎಂದು ಈಶಾನ್ಯ ಗಡಿ ರೈಲ್ವೆಯ ಸಿಪಿಆರ್ಒ ಸಬ್ಯಸಾಚಿ ಡಿ ಹೇಳಿದರು.
'ಜನವರಿ 3 ರಂದು ಮಧ್ಯಾಹ್ನ 1.30 ರ ಸುಮಾರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನ್ಯೂ ಜಲ್ಪೈಗುರಿಯತ್ತ ಚಲಿಸುತ್ತಿದ್ದಾಗ ಸಿ3 ಮತ್ತು ಸಿ 6 ಕೋಚ್ಗಳ ಗಾಜುಗಳು ಒಡೆದಿರುವುದು ಕಂಡು ಬಂದಿದ್ದು, ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ರೈಲ್ವೆ ಕಾಯಿದೆಯ ಸೆಕ್ಷನ್ 154 ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ' ಎಂದು ಅವರು ತಿಳಿಸಿದರು.
ನ್ಯೂ ಜಲ್ಪೈಗುರಿಯಿಂದ ಹೊರಟಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಸೋಮವಾರ ಇದೇ ರೀತಿ ಕಲ್ಲು ಹೊಡೆಯಲಾಗಿದೆ. ಕಲ್ಲು ತೂರಾಟದಿಂದಾಗಿ ಕೋಚ್ನ ಬಾಗಿಲಿನ ಗಾಜಿನ ಫಲಕವು ಬಿರುಕು ಬಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೌರಾ-ಹೊಸ ಜಲ್ಪೈಗುರಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಉದ್ಘಾಟಿಸಿದರು ಮತ್ತು ಸೇವೆಗಳು ಜನವರಿ ಒಂದರಿಂದ ಪ್ರಾರಂಭವಾಯಿತು.
ಕಲ್ಲು ತೂರಾಟದ ಘಟನೆಗೆ ಬಿಜೆಪಿ ಕಿಡಿ
ಈ ಘಟನೆಯ ಕುರಿತು ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿ, 'ಜೈ ಶ್ರೀರಾಮ್' ಘೋಷಣೆಗೆ ಇದು ಪ್ರತಿಕಾರವೇ ಎಂದು ಪ್ರಶ್ನಿಸಿದ್ದರು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಉದ್ಘಾಟನೆ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಿದ್ದರು. ಇದು ವಿವಾದಕ್ಕೆ ಗುರಿಯಾಗಿತ್ತು.