ಇದೇನು ಪ್ರಕರಣ?: ಓವೈಸಿ ಪ್ರಯಾಣಿಸಿದ್ದ ವಂದೇ ಭಾರತ್ ಮೇಲೆ ಕಲ್ಲು ತೂರಾಟವೇ ಸುಳ್ಳು!
ಗಾಂಧಿನಗರ, ನವೆಂಬರ್ 8: ಗುಜರಾತ್ನಲ್ಲಿ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲುತೂರಾಟ ನಡೆದಿದೆ ಎಂಬ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.
ಎಐಎಂಐಎಂ ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ಮಾತನಾಡಿ, ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಓವೈಸಿ ಸಾರ್ವಜನಿಕ ಮೆರವಣಿಗೆಯಲ್ಲಿ ಭಾಗವಹಿಸಲು ನಿಗದಿಯಾಗಿದ್ದ ರೈಲು ಸೋಮವಾರ ಸಂಜೆ ಸೂರತ್ಗೆ ತಲುಪುವ ಮೊದಲು ಇಂಥದೊಂದು ಘಟನೆ ನಡೆದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು ಸೋಮವಾರದ ಘಟನೆಯನ್ನು ನಿರಾಕರಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಇದರ ಮಧ್ಯೆ ಕಲ್ಲುತೂರಾಟ ನಡೆದಿದೆ ಎಂದು ಹೇಳಲಾಗುವ ಬಗ್ಗೆ ಪಠಾಣ್ ಕೆಲವು ಫೋಟೋಗಳನ್ನು ಸಾದರಪಡಿಸಿದ್ದಾರೆ.
ಗುಜರಾತ್: ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ
"ಅಸಾದುದ್ದೀನ್ ಒವೈಸಿ ಸಾಹೇಬ್, ಸಬೀರ್ ಕಬ್ಲಿವಾಲಾ ಸರ್ ಮತ್ತು ನಾನು ಸೇರಿದಂತೆ ಎಐಎಂಐಎಂ ತಂಡವು ಅಹಮದಾಬಾದ್ನಿಂದ ಸೂರತ್ಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅದರ ಗಾಜು ಒಡೆದಿದ್ದಾರೆ," ಎಂದು ವಾರಿಸ್ ಪಠಾಣ್ ಆರೋಪಿಸಿದ್ದರು.
ರೈಲ್ವೆ ಪೊಲೀಸರು ನೀಡಿದ ಸ್ಪಷ್ಟನೆಯಲ್ಲಿ ಏನಿದೆ?
"ಭರೂಚ್ ಜಿಲ್ಲೆಯ ಅಂಕಲೇಶ್ವರ ಬಳಿ ಹಳಿಯಲ್ಲಿ ನಡೆಯುತ್ತಿರುವ ಇಂಜಿನಿಯರಿಂಗ್ ಕೆಲಸದಿಂದಾಗಿ ರೈಲಿನ ಗಾಜಿನ ಕಿಟಕಿಗೆ ಕೆಲವು "ಗ್ರಿಟ್" ಹೊಡೆದಿದೆ. "ಇದು ಕಲ್ಲು ತೂರಾಟದ ಪ್ರಕರಣವಲ್ಲ. ಈ ಘಟನೆ ನಡೆದ ಸಂದರ್ಭದಲ್ಲಿ ಅಸಾದುದ್ದೀನ್ ಒವೈಸಿ ಕಿಟಕಿಯಿಂದ ದೂರದಲ್ಲಿ ಕುಳಿತಿದ್ದರು," ಎಂದು ಪಶ್ಚಿಮ ರೈಲ್ವೆಯ ಪೊಲೀಸ್ ಅಧೀಕ್ಷಕ ರಾಜೇಶ್ ಪರ್ಮಾರ್ ಮಂಗಳವಾರ ಹೇಳಿದ್ದಾರೆ. ಒಡೆದ ಕಿಟಕಿಯನ್ನು ಬದಲಾಯಿಸಲಾಗಿದ್ದು, ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್ಪಿ) ಮಟ್ಟದ ಅಧಿಕಾರಿ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದರು.
ಎಐಎಂಐಎಂ ವಕ್ತಾರರ ಆರೋಪದಲ್ಲಿ ಏನಿತ್ತು?
ಕಳೆದ ಸೋಮವಾರ ರಾತ್ರಿ ಸೂರತ್ನಲ್ಲಿ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ವಾರಿಸ್ ಪಠಾಣ್, ಒಂದರ ಹಿಂದೆ ಒಂದರಂತೆ ಎರಡು ಕಲ್ಲುಗಳನ್ನು ಎಸೆಯಲಾಗಿದೆ. ಒವೈಸಿಯವರು ತಮ್ಮ ತಂಡದ ಸದಸ್ಯರೊಂದಿಗೆ ಕುಳಿತಿದ್ದ ಗಾಜಿನ ಕಿಟಕಿ ಗಾಜುಗಳನ್ನು ಒಡೆಯುವಷ್ಟು ಕಲ್ಲುಗಳು ಭಾರವಾಗಿದ್ದವು ಎಂದು ಹೇಳಿದ್ದರು. "ಪ್ರಧಾನಿ ಮೋದಿಜಿ ಇಲ್ಲಿ ಏನಾಗುತ್ತಿದೆ? ಕೆಲವೊಮ್ಮೆ ಪ್ರಾಣಿಗಳ ಮೇಲೆ ವಂದೇ ಭಾರತ್ ರೈಲು ಹರಿದು ಹೋಗುತ್ತದೆ. ಈಗ ನಾವು ಸೂರತ್ನಿಂದ 22-25 ಕಿಮೀ ದೂರದಲ್ಲಿದ್ದಾಗ, ರೈಲಿನ ಮೇಲೆ ಒಂದು ಕಲ್ಲು ಬಡಿಯಿತು. ರೈಲಿನ ಕಿಟಕಿಯನ್ನು ಕಲ್ಲಿನಿಂದ ಒಡೆದಾಗ ಒವೈಸಿ ಅಲ್ಲೇ ಕುಳಿತಿದ್ದರು ಎಂದು ಎಐಎಂಐಎಂ ವಕ್ತಾರರು ಹೇಳಿದ್ದರು.
ವಂದೇ ಭಾರತ್ ರೈಲಿನ ಒಡೆದ ಗಾಜಿನ ಫೋಟೋ ಶೇರ್
ಅಸಾದುದ್ದೀನ್ ಒವೈಸಿ ಮತ್ತು ಎಐಎಂಐಎಂನ ಇತರ ಸದಸ್ಯರು ರೈಲಿನಲ್ಲಿ ಕುಳಿತಿರುವ ಬೋಗಿಯ ಕಿಟಕಿಯ ಗಾಜು ಒಡೆದಿರುವ ಫೋಟೋಗಳನ್ನು ವಾರಿಸ್ ಪಠಾಣ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ನೀವು ಕಲ್ಲು ಎಸೆಯಿರಿ, ಬೆಂಕಿ ಹಚ್ಚಿರಿ, ನಮ್ಮ ಹೋರಾಟವು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದು, ಬೇರೆಯದ್ದೇ ಕಾರಣವನ್ನು ಕೊಟ್ಟಿದ್ದಾರೆ.
ವಂದೇ ಭಾರತ್ ರೈಲಿನ ಗಾಜು ಒಡೆದ ಬಗ್ಗೆ ಪೊಲೀಸರ ಸ್ಪಷ್ಟನೆ
ಇದು ಕಲ್ಲು ತೂರಾಟದ ಪ್ರಕರಣವಲ್ಲ ಎಂದು ಎಸ್ಪಿ ಪರ್ಮಾರ್ ಹೇಳಿದ್ದಾರೆ. ಈ ಘಟನೆಯು ಭರೂಚ್ನ ಅಂಕಲೇಶ್ವರ್ನಲ್ಲಿ ಇಂಜಿನಿಯರಿಂಗ್ ಕೆಲಸಗಳು ಟ್ರ್ಯಾಕ್ನಲ್ಲಿ ನಡೆಯುತ್ತಿದ್ದಾಗ ಕಿಟಕಿಗೆ ಏನಾದರೂ ಬಡಿದ ಕಾರಣ ಹಾನಿಯಾಗಿದೆ, ಈಗಾಗಲೇ ಹಾನಿಗೊಳಗಾದ ಕಿಟಕಿಯನ್ನು ಬದಲಾಯಿಸಲಾಗಿದೆ," ಎಂದು ಅವರು ಹೇಳಿದ್ದಾರೆ. ಓವೈಸಿ ಪ್ರಯಾಣಿಸುತ್ತಿದ್ದ ಬೋಗಿಯ ಎಲ್ಲಾ ನಾಲ್ಕು ಬಾಗಿಲುಗಳಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಮತ್ತು ಮೂವರು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಹಾಗೂ ಆರು ಜವಾನರು ಉಪಸ್ಥಿತರಿದ್ದರು. "ಅಲ್ಲಿ ಇಂಜಿನಿಯರಿಂಗ್ ಕೆಲಸ ನಡೆಯುತ್ತಿರುವುದರಿಂದ ರೈಲು ನಿಧಾನವಾಗಿ ಓಡುತ್ತಿತ್ತು. ಕಲ್ಲು ತೂರಾಟವಲ್ಲದಿದ್ದರೂ ಕಿಟಕಿಗೆ ಏನೋ ಬಡಿದಿದ್ದರಿಂದ ಬಿರುಕು ಬಿಟ್ಟಿದೆ," ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.