ರೈಲ್ವೆ ಪ್ರಯಾಣ ದರ ಏರಿಕೆ?; ಸಚಿವರ ಸ್ಪಷ್ಟನೆ
ನವದೆಹಲಿ, ಆಗಸ್ಟ್ 07; ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಭಾರತೀಯ ರೈಲ್ವೆ ಪಾಲಿಗೆ ಇದೊಂದು ಐತಿಹಾಸಿಕ ಯೋಜನೆಯಾಗಿದೆ.
'ಅಮೃತ ರೈಲು ನಿಲ್ದಾಣ' ಹೆಸರಿನ ಈ ಯೋಜನೆಯ ವೆಚ್ಚ 24,470 ಕೋಟಿ ರೂ.ಗಿಂತ ಹೆಚ್ಚು. 508 ನಿಲ್ದಾಣಗಳನ್ನು ಮರು ಅಭಿವೃದ್ಧಿ ಯೋಜನೆ ಘೋಷಣೆ ಮಾಡಿದ ರೈಲ್ವೆ ಪ್ರಯಾಣ ದರ ಏರಿಕೆ ಮಾಡಲಿದೆಯೇ? ಎಂಬ ಪ್ರಶ್ನೆ ಎದ್ದಿತ್ತು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾತನಾಡಿದ್ದಾರೆ. "ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಹೆಸರಿನಲ್ಲಿ ರೈಲ್ವೆ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡುವುದಿಲ್ಲ. ಈ ಯೋಜನೆಗಾಗಿಯೇ ಈ ಬಾರಿಯ ಬಜೆಟ್ನಲ್ಲಿ ಅನುದಾನ ಇಟ್ಟಿದ್ದೇವೆ" ಎಂದು ಸ್ಪಷ್ಟಪಡಿಸಿದರು.
ಪ್ರಯಾಣಿಕ ಸ್ನೇಹಿ ಅನುಭವ; ಸಚಿವರು ಮಾತನಾಡಿ, "'ಅಮೃತ ರೈಲು ನಿಲ್ದಾಣ ಹೆಸರಿನ ಯೋಜನೆಯ ವೆಚ್ಚ 24,470 ಕೋಟಿ ರೂ.ಗಿಂತ ಹೆಚ್ಚು. 508 ನಿಲ್ದಾಣಗಳನ್ನು ಇದರಡಿ ಮರು ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಅನುದಾನ ಮೀಸಲಿಡಲಾಗಿದೆ. ಈ ಯೋಜನೆ ಬಳಿಕ ರೈಲು ನಿಲ್ದಾಣ ಇನ್ನಷ್ಟು ಜನಸ್ನೇಹಿಯಾಗಲಿದೆ" ಎಂದು ಆಶಯ ವ್ಯಕ್ತಪಡಿಸಿದರು.
"ಜನರ ಜೀವನ ಮಟ್ಟ ಸುಧಾರಣೆಗೆ ನರೇಂದ್ರ ಮೋದಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಯೂ ಇದೇ ಗುರಿಯನ್ನು ಹೊಂದಿದೆ. ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ" ಎಂದು ಸಚಿವರು ವಿವರಣೆ ನೀಡಿದರು.
"ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಹೆಸರಿನಲ್ಲಿ ನಾವು ಪ್ರಯಾಣ ದರ ಏರಿಕೆ ಮಾಡಿಲ್ಲ. ಪ್ಲಾಟ್ ಫಾರಂನಲ್ಲಿಯೂ ನಿಗದಿ ಪಡಿಸಿದ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ" ಎಂದು ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು.
'ಅಮೃತ ರೈಲು ನಿಲ್ದಾಣ' ಯೋಜನೆ ಅನ್ವಯ ಕೇಂದ್ರ ಸರ್ಕಾರ 1,300 ಪ್ರಮುಖ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಿದೆ. ಈ ಯೋಜನೆಯ ಮೊದಲ ಹಂತವಾಗಿ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಿದ ಯೋಜನೆ ಇದಾಗಿದೆ.
ಈ 508 ನಿಲ್ದಾಣಗಳ ಪೈಕಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರ 49, ಮಹಾರಾಷ್ಟ್ರ 44, ಪಶ್ಚಿಮ ಬಂಗಾಳ 37, ಮಧ್ಯಪ್ರದೇಶ 34, ಅಸ್ಸಾಂ 32, ಒಡಿಶಾ 25, ಪಂಜಾಬ್ 22, ಗುಜರಾತ್ ಮತ್ತು ತೆಲಂಗಾಣ ತಲಾ 21, ಜಾರ್ಖಂಡ್ 20, ಆಂಧ್ರಪ್ರದೇಶ ಮತ್ತು ತಮಿಳುನಾಡು ತಲಾ 18, ಹರ್ಯಾಣ 15, ಕರ್ನಾಟಕದಲ್ಲಿ 13 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಯೋಜನೆಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿದ ನರೇಂದ್ರ ಮೋದಿ, "ಇದು ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ. ದೇಶದ ಸುಮಾರು 1,300 ಪ್ರಮುಖ ರೈಲು ನಿಲ್ದಾಣಗಳು ಈಗ ಆಧುನಿಕತೆಯೊಂದಿಗೆ ಅಮೃತ ಭಾರತ ನಿಲ್ದಾಣಗಳಾಗಿ ಮರುಅಭಿವೃದ್ಧಿಯಾಗಲಿವೆ ಮತ್ತು ಹೊಸ ರೂಪ ಪಡೆಯಲಿವೆ" ಎಂದರು.
ರೈಲ್ವೆ ವಲಯದ ವಿಸ್ತರಣೆಯ ಬಗ್ಗೆ ಮಾತನಾಡಿದ ಮೋದಿ, "ಕಳೆದ 9 ವರ್ಷಗಳಲ್ಲಿ, ದಕ್ಷಿಣ ಆಫ್ರಿಕಾ, ಉಕ್ರೇನ್, ಪೋಲೆಂಡ್, ಬ್ರಿಟನ್ ಮತ್ತು ಸ್ವೀಡನ್ನ ಒಟ್ಟು ರೈಲ್ವೆ ಜಾಲಕ್ಕಿಂತ ದೇಶದಲ್ಲಿ ಹಾಕಲಾದ ರೈಲು ಹಳಿಗಳ ಉದ್ದವು ಹೆಚ್ಚು" ಎಂದು ಹೇಳಿದರು.
"ಕಳೆದ ವರ್ಷವೊಂದರಲ್ಲೇ ಭಾರತವು ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚಿನ ರೈಲು ಹಳಿಗಳನ್ನು ಹಾಕಿದೆ. ಇಂದು ರೈಲು ಪ್ರಯಾಣವನ್ನು ಸುಲಭವಾಗಿಸುವ ಜತೆಗೆ ಹಿತಕರವಾಗಿಸಲು ಸರ್ಕಾರ ಶ್ರಮಿಸುತ್ತಿದೆ. ರೈಲಿನಿಂದ ನಿಲ್ದಾಣದವರೆಗೆ ಸಾಧ್ಯವಾದಷ್ಟು ಉತ್ತಮ ಅನುಭವವನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ" ಎಂದು ಮೋದಿ ವಿವರಣೆ ನೀಡಿದರು.












Click it and Unblock the Notifications