Delhi Stampede: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಜನ ಸಾವು- ರಾಜಕೀಯ ಗಣ್ಯರಿಂದ ಸಂತಾಪ
ದೆಹಲಿ ಜನವರಿ 16: ಮಹಾಕುಂಭ ಮೇಳಕ್ಕೆಂದು ತೆರಳುತ್ತಿದ್ದ ಜನ ದೆಹಲಿ ರೈಲು ನಿಲ್ದಾಣದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ ಸಾವನ್ನಪ್ಪಿದ ದುರಂತ ಘಟನೆ ಕಳೆದ ದಿನ ರಾತ್ರಿ ಸಂಭವಿಸಿದೆ. ದೆಹಲಿ ರೈಲು ನಿಲ್ದಾಣದಲ್ಲಿ ಮಹಾ ಕುಂಭಮೇಳಕ್ಕೆ ಎರಡು ರೈಲುಗಳು ವಿಳಂಬವಾಗಿದ್ದರಿಂದ ಶನಿವಾರ ರಾತ್ರಿ ಜನದಟ್ಟಣೆ ಉಂಟಾಗಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದಾಗಿ ಪ್ರಧಾನಿ ಮೋದಿ ಸೇರಿದಂತೆ ಇತರ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಹೌದು.. ಘಟನೆಯಲ್ಲಿ 10 ಮಹಿಳೆಯರು, ಮೂವರು ಮಕ್ಕಳು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೇಡಿ ಹಾರ್ಡಿಂಗ್ ಆಸ್ಪತ್ರೆಯಿಂದ ಇನ್ನೂ ಮೂರು ಸಾವುಗಳು ವರದಿಯಾಗಿವೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ?
ಉತ್ತರಪ್ರದೇಶದ ಪ್ರಯಾಗ್ರಾಜ್ ಮಹಾ ಕುಂಭಮೇಳಕ್ಕೆ ಹೋಗಲು ಎರಡು ರೈಲುಗಳು ತಡವಾಗಿ ಬಂದಿವೆ. ಇದರಿಂದಾಗಿ ದೆಹಲಿ ರೈಲು ನಿಲ್ದಾಣದಲ್ಲಿ ಜನ ಸಂಖ್ಯೆ ಹೆಚ್ಚಾಗಿತ್ತು. ವಾರಾಂತ್ಯವಾಗಿದ್ದರಿಂದ ರೈಲು ನಿಲ್ದಾಣದಲ್ಲಿ ಕುಂಭ ಮೇಳಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಪ್ರಯಾಗ್ರಾಜ್ ಮೂಲಕ ಹಾದುಹೋಗುವ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ರೈಲುಗಳು ನಿಲ್ದಾಣಕ್ಕೆ ಬರುವುದು ವಿಳಂಬವಾದೆ. ಈ ರೈಲುಗಳ ಪ್ರಯಾಣಿಕರು 12, 13 ಮತ್ತು 14, 15ನೇ ಪ್ಲಾಟ್ಫಾರ್ಮ್ಗಳಲ್ಲಿ ನಿಂತಿದ್ದರು.

ಆಗ ತಡವಾಗಿ ಪ್ರಯಾಗ್ರಾಜ್ ಎಕ್ಸ್ಪ್ರೆಸ್ ಪ್ಲಾಟ್ಫಾರ್ಮ್ ಸಂಖ್ಯೆ 14ಕ್ಕೆ ಬಂದಾಗ ಅನೇಕ ಜನರು ಅದರಲ್ಲಿ ಹತ್ತಲು ನುಗ್ಗಿದ್ದಾರೆ. ರೈಲು ತಡವಾಗಿ ಬಂದಿದ್ದರಿಂದ ರೈಲು ಹತ್ತಲು ನೂಕುನುಗ್ಗಲಾಗಿದೆ. ಇದರಿಂದಾಗಿ ರಾತ್ರಿ 8 ಗಂಟೆ ಸುಮಾರಿಗೆ ಕಾಲ್ತುಳಿತ ಉಂಟಾಗಿದೆ ಎಂದು ತಿಳಿದು ಬಂದಿದೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ- ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಪ್ರಸ್ತುತ ರೈಲ್ವೆ ನಿಲ್ದಾಣದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ನಾಲ್ಕು ಅಗ್ನಿಶಾಮಕ ವಾಹನಗಳನ್ನು ಸಹ ಸ್ಥಳಕ್ಕೆ ರವಾನಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
"ನವದೆಹಲಿ ರೈಲು ನಿಲ್ದಾಣದಲ್ಲಿ (NDLS) ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೆಹಲಿ ಪೊಲೀಸರು ಮತ್ತು ಆರ್ಪಿಎಫ್ (ರೈಲ್ವೆ ಪೊಲೀಸ್ ಪಡೆ) ಸ್ಥಳಕ್ಕೆ ತಲುಪಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಠಾತ್ ಜನದಟ್ಟಣೆಯನ್ನು ಸ್ಥಳಾಂತರಿಸಲು ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ" ಎಂದು ಸಚಿವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೀವಹಾನಿಯ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿ.ಕೆ. ಸಕ್ಸೇನಾ ಸಂತಾಪ
"ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ ದುರದೃಷ್ಟಕರ ಮತ್ತು ದುರಂತ ಘಟನೆ ನಡೆದಿದೆ. ಈ ದುರಂತದ ಬಲಿಪಶುಗಳ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ತಿಳಿಸುತ್ತೇನೆ. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಸರಿಪಡಿಸಲು ಕೇಳಿದ್ದೇನೆ" ಎಂದು ಸಕ್ಸೇನಾ X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಸಿಎಸ್ಗೆ ಡಿಡಿಎಂಎ (ವಿಪತ್ತು ನಿರ್ವಹಣೆ) ಕ್ರಮಗಳನ್ನು ಕೈಗೊಳ್ಳಲು ಮತ್ತು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಕೇಳಲಾಗಿದೆ. ತುರ್ತು ಪರಿಸ್ಥಿತಿಗಳನ್ನು ಪರಿಹರಿಸಲು ಎಲ್ಲಾ ಆಸ್ಪತ್ರೆಗಳು ಸಿದ್ಧವಾಗಿವೆ. ಸಿಎಸ್ ಮತ್ತು ಸಿಪಿ ಸ್ಥಳದಲ್ಲಿರಲು ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಸೂಚಿಸಿದ್ದೇನೆ. ನಾನು ನಿರಂತರವಾಗಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ" ಎಂದು ಅವರು ಹೇಳಿದರು.
ಸಚಿವ ರಾಜನಾಥ್ ಸಿಂಗ್ ಪೋಸ್ಟ್
ರಕ್ಷಣಾ ಸಚಿವ ಸಿಂಗ್ X ನಲ್ಲಿ ಪೋಸ್ಟ್ ಮಾಡಿ, "ನವದೆಹಲಿ ರೈಲು ನಿಲ್ದಾಣದಲ್ಲಿ ದುರಂತ ಘಟನೆ ನಡೆದಿದೆ. ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಕಾಲ್ತುಳಿತದಿಂದ ಉಂಟಾದ ಜೀವಹಾನಿಯಿಂದ ನನಗೆ ತುಂಬಾ ನೋವಾಗಿದೆ. ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ಮೃತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ತ್ವರಿತವಾಗಿ ಗುಣಮುಖರಾಗಲಿದೆ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದ ಮಾಜಿ ಸಿಎಂ
ನವದೆಹಲಿ ರೈಲು ನಿಲ್ದಾಣದಲ್ಲಿನ ಅವ್ಯವಸ್ಥೆಯ ಬಗ್ಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಂಗಮದಲ್ಲಿ ಸ್ನಾನ ಮಾಡಲು ಆಶಿಸುವ ಭಕ್ತರ ದಟ್ಟಣೆಯನ್ನು ಕಡಿಮೆ ಮಾಡಲು ಮಹಾ ಕುಂಭದ ಅವಧಿಯನ್ನು ವಿಸ್ತರಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದರು.
ಕುಂಭ ಮೇಳ ಸಮಯವನ್ನು ವಿಸ್ತರಿಸಿ- ಅಖಿಲೇಶ್ ಯಾದವ್
"ಈಗಲೂ ಸಹ ಅನೇಕ ಜನರು ಮಹಾ ಕುಂಭಕ್ಕೆ ಹೋಗಲು ಬಯಸುತ್ತಾರೆ ಆದರೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಮಹಾ ಕುಂಭದ ಸಮಯ ಮಿತಿಯನ್ನು ವಿಸ್ತರಿಸಬೇಕು" ಎಂದು ಅಖಿಲೇಶ್ ಯಾದವ್ ಹೇಳಿದರು. ಯಾಕೆಂದರೆ ಮಹಾ ಶಿವರಾತ್ರಿಯ ಫೆಬ್ರವರಿ 26ರಂದು ಮಹಾ ಕುಂಭ ಮೇಳದ ಕೊನೆಯ ದಿನವಾಗಿದೆ. ಇದು ಬೇಗ ಕೊನೆಗೊಂಡರೆ ಅನೇಕ ಜನರಿಗೆ ಇದರಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ'' ಎಂದು ಹೇಳಿದರು.
ರೈಲು ನಿಲ್ದಾಣದ ಸಿಸಿಟಿವಿ ಪರಿಶೀಲನೆ
ಇನ್ನೂ ಘಟನೆ ಬಳಿಕ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಯಿತು. ರೈಲು ಬರುತ್ತಿದ್ದಂತೆ ಪ್ಲಾಟ್ಫಾರ್ಮ್ನಲ್ಲಿ ಭಾರಿ ಜನಸಂದಣಿ ಇರುವುದನ್ನು ವೀಡಿಯೊಗಳು ತೋರಿಸಿವೆ. ರೈಲು ಹತ್ತಲು ಜನದಟ್ಟಣೆ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ಎಲ್ಲರೂ ರೈಲು ಒಳಗೆ ಹೋಗಲು ಸಾಧ್ಯವಾಗುವುದಿಲ್ಲ. ಆದರೂ ಕೂಡ ಪ್ರಯಾಣಿಕರು ಅರಿತುಕೊಂಡಾಗ ನುಗ್ಗಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ. ವೀಡಿಯೊಗಳಲ್ಲಿ ಇಬ್ಬರು ಜನರು ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡುಬಂದಿದೆ. ಇತರರು ಅವರನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.
ಸಂತಾಪ ಸೂಚಿಸಿದ ಪ್ರಧಾನಿ ಮೋದಿ
"ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಕಾಲ್ತುಳಿತದಿಂದ ಹಾನಿಗೊಳಗಾದ ಎಲ್ಲರಿಗೂ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ" ಎಂದು ತಮ್ಮ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಕ್ತರ ದಟ್ಟಣೆ
12 ವರ್ಷಗಳಿಗೊಮ್ಮೆ ಮಾತ್ರ ನಡೆಯುವ ಮಹಾ ಕುಂಭ ಮೇಳ ಫೆಬ್ರವರಿ 26 ರಂದು ಕೊನೆಗೊಳ್ಳಲಿದ್ದು, ಈ ಬಾರಿಯೂ ಸಹ ಹೆಚ್ಚಿನ ಜನಸಂದಣಿ ಕಂಡು ಬಂದಿದೆ. ಈ ವಾರದ ಆರಂಭದಲ್ಲಿ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದ ಕಾರಣ ಪ್ರಯಾಗ್ರಾಜ್ ಮೂಲಕ ದೆಹಲಿಗೆ ಹೋಗುವ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ನ ಗಾಜುಗಳನ್ನು ಒಡೆದರು. ಪ್ರಯಾಗ್ರಾಜ್ಗೆ ಹೋಗುವ ರೈಲುಗಳಿಗೆ ಸಂಬಂಧಿಸಿದ ಇದೇ ರೀತಿಯ ಘಟನೆಗಳು ಬಿಹಾರದ ಇತರ ರೈಲು ನಿಲ್ದಾಣಗಳಿಂದಲೂ ವರದಿಯಾಗಿವೆ ಮತ್ತು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ.












Click it and Unblock the Notifications