3 ದಿನ ಮೊದಲೇ ಅಂಡಮಾನ್ ಮತ್ತು ನಿಕೋಬಾರ್ ಪ್ರವೇಶಿಸಿದ ಮುಂಗಾರು
ನವದೆಹಲಿ, ಮೇ 15 : ವಾಡಿಕೆಗಿಂತ ಮೂರು ದಿನ ಮೊದಲೇ ನೈರುತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಿದ್ದು ಇದರಿಂದ ಈ ಬಾರಿ ಮುಂಗಾರು ಮಳೆ ಬೇಗನೆ ಬರುವ ಲಕ್ಷಣಗಳು ಗೋಚರಿಸಿವೆ.
'ಬಂಗಾಳ ಕೊಲ್ಲಿಯ ಆಗ್ನೇಯ ಭಾಗದ ಕೆಲವು ಕಡೆಗಳಲ್ಲಿ, ನಿಕೋಬಾರ್ ದ್ವೀಪಗಳು, ದಕ್ಷಿಣ ಅಂಡಮಾನ್ ಸಮುದ್ರದ ಪೂರ್ಣ ಭಾಗ ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ನೈರುತ್ಯ ಮುಂಗಾರು ಭಾನುವಾರ ಕಾಲಿಟ್ಟಿದೆ' ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಳೆ ಮಾರುತಗಳನ್ನು ಹೊತ್ತು ತರುವ ಗಾಳಿ ಪ್ರಬಲವಾಗಿರುವುದು, ಮೋಡ ಕವಿದ ವಾತಾವರಣ ಮತ್ತು ಈ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯನ್ನು ಆಧರಿಸಿ ಹವಾಮಾನ ಇಲಾಖೆ ಮುಂಗಾರು ಪ್ರವೇಶಿಸಿರುವುದನ್ನು ಘೋಷಿಸಿದೆ.
ಸಹಜವಾಗಿ ನೈರುತ್ಯ ಮುಂಗಾರು ಮೇ 17ರಂದು ಈ ದ್ವೀಪಗಳ ಸಮೂಹ ಪ್ರವೇಶಿಸುತ್ತದೆ. ಆದರೆ, ಮೂರು ದಿನಗಳ ಮೊದಲೇ ನೈರುತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಿದೆ.
ಈಗಾಗಿ ಮುಂಗಾರು ಜೂನ್ 1ರಂದೇ ಕೇರಳಕ್ಕೆ ಕಾಲಿಡಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಹೇಳಿದೆ.