ಯಾತ್ರಾರ್ಥಿಗಳ ಗಮನಕ್ಕೆ: ಚಾರ್ಧಾಮ್ ಯಾತ್ರೆಗೆ ಹೊಸ ಮಾರ್ಗಸೂಚಿ
ಡೆಹ್ರಾಡೂನ್, ಅಕ್ಟೋಬರ್ 07: ಹಿಂದುಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಚಾರ್ಧಾಮ್ ಯಾತ್ರೆಗೆ ಹೊಸ ಮಾರ್ಗಸೂಚಿಯನ್ನು ಉತ್ತರಾಖಂಡ್ ಸರ್ಕಾರ ಪ್ರಕಟಿಸಿದೆ. ಕೇದಾರನಾಥ, ಬದರಿನಾಥ, ಗಂಗೋತ್ರಿ ಹಾಗೂ ಯಮುನೋತ್ರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇದೀಗ ಮುಕ್ತವಾಗಿದೆ. ಈ ಮುಂಚೆ ಜೂನ್ ತಿಂಗಳಲ್ಲಿ ಚಮೋಲಿ, ರುದ್ರಪ್ರಯಾಗ ಹಾಗೂ ಉತ್ತರಕಾಶಿಯಲ್ಲಿ ಯಾತ್ರೆಗೆ ಸ್ಥಳೀಯರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
''ಕೋವಿಡ್ ಮೂರನೇ ಅಲೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರ ಮರುಪರಿಶೀಲಿಸಬೇಕು,'' ಎಂದು ಹೈಕೋರ್ಟ್ ಸೂಚಿಸಿತ್ತು.
ಏಪ್ರಿಲ್ನಲ್ಲಿ ನಡೆದ ಕುಂಭಮೇಳದಿಂದಾಗಿ ಕೋವಿಡ್ ಸಾಂಕ್ರಾಮಿಕತೆ ವ್ಯಾಪಿಸಿ, ಅದರಿಂದ ಮೇ ತಿಂಗಳಿನಲ್ಲಿ ಸಾವು ನೋವು ಸಂಭವಿಸಿತ್ತು. ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕುಂಭ ಮೇಳವು ಉತ್ತರಾಖಂಡ ಮಾತ್ರವಲ್ಲದೇ ದೇಶಾದ್ಯಂತ ಸೂಪರ್ ಸ್ಪ್ರೆಡರ್ ಆಗಿ ಮಾರ್ಪಟ್ಟಿತ್ತು ಎಂದು ವರದಿಗಳು ಬಂದಿತ್ತು, ಈ ಬಗ್ಗೆ ಹೈಕೋರ್ಟ್ ಪೀಠವು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೇ.14ರಿಂದ ಆರಂಭವಾಗಬೇಕಿದ್ದ ಚಾರ್ ಧಾಮ್ ಯಾತ್ರೆಯನ್ನು ಈ ಮುಂಚೆ ಕೋವಿಡ್ ಕಾರಣಕ್ಕಾಗಿ ರದ್ದುಗೊಳಿಸಲಾಗಿತ್ತು. ಆದರೆ, ರುದ್ರಪ್ರಯಾಗ ಜಿಲ್ಲೆಯಲ್ಲಿ ಕೇದಾರನಾಥ ದೇಗುಲ, ಚಮೋಲಿಯಲ್ಲಿ ಬದ್ರಿನಾಥ್ ಹಾಗೂ ಉತ್ತರಕಾಶಿಯಲ್ಲಿನ ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿತ್ತು. ಜುಲೈ 1 ಹಾಗೂ ಜುಲೈ 11ರಂದು ಎರಡು ಹಂತದಲ್ಲಿ ದೇವಸ್ಥಾನಕ್ಕೆ ಯಾತ್ರೆ ಕೈಗೊಳ್ಳಲು ಸ್ಥಳೀಯರಿಗೆ ಅನುಮತಿ ಸಿಕ್ಕಿತ್ತು. ಕೊರೊನಾ ನೆಗೆಟಿವ್ ವರದಿ ತರುವುದು ಕಡ್ಡಾಯ ಮಾಡಲಾಗಿತ್ತು. ಕೇದಾರನಾಥಕ್ಕೆ 800 ಮಂದಿ, ಬದರಿನಾಥ 1000, ಗಂಗೋತ್ರಿ 600 ಹಾಗೂ ಯಮುನೋತ್ರಿಗೆ 800 ಮಂದಿಗೆ ಮಾತ್ರ ಪ್ರವೇಶ ಎಂದು ನಿಗದಿ ಮಾಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದರೆ, ಹಿಮಾಲಯದ ತಪ್ಪಲಿನ ಈ ದೇಗುಲಗಳ ಸುಪರ್ದಿಯಲ್ಲಿರುವ ಜಲಾಗರ, ಕೊಳಗಳಲ್ಲಿ ಪವಿತ್ರ ಸ್ನಾನವನ್ನು ನಿರ್ಬಂಧಿಸಲಾಗಿದೆ.
ಹೊಸ ಮಾರ್ಗಸೂಚಿ:
* ಚಾರ್ ಧಾಮ್ ಯಾತ್ರೆ ಮಂಡಳಿ ವೆಬ್ ತಾಣದಲ್ಲಿ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಆದರೆ, ದರ್ಶನಕ್ಕೆ ಯಾತ್ರಾ ಇ-ಪಾಸ್ ಅಗತ್ಯವಿಲ್ಲ.
* ಯಾತ್ರಾರ್ಥಿಗಳು ಸಂಪೂರ್ಣವಾಗಿ ಕೊರೊನಾ ಲಸಿಕೆ ಪಡೆದಿರಬೇಕು ಅಥವಾ ಯಾತ್ರೆಗೂ 72 ಗಂಟೆಗಳ ಮುಂಚಿತವಾಗಿ ಕೊರೊನಾ ನೆಗಟಿವ್ ಪ್ರಮಾಣ ಪತ್ರ ಹೊಂದಿರಬೇಕು.
* ಚಮೋಲಿ, ಉತ್ತರ ಕಾಶಿ ಹಾಗೂ ಪ್ರಯಾಗ್ ಜಿಲ್ಲೆಗಳಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
* ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾನ್ ಹಾಗೂ ನ್ಯಾ. ಅಲೋಕ್ ಕುಮಾರ್ ವರ್ಮಾ ಅವರಿದ್ದ ನ್ಯಾಯಪೀಠವು ಈ ಬಗ್ಗೆ ಸ್ಪಷ್ಟ ಮಾಡಿ ನಿರ್ದೇಶನ ನೀಡಿದ್ದು, ಅದರಂತೆ ಲಸಿಕೆ ಪ್ರಮಾಣ ಪತ್ರ, ಕೊವಿಡ್ 19 ಟೆಸ್ಟ್ ವರದಿ ಕಡ್ಡಾಯ.
* ಹೆಚ್ಚಿನ ವಿವರಗಳಿಗೆ ಉತ್ತರಾಖಂಡ ಸರ್ಕಾರದ ಅಧಿಕೃತ ವೆಬ್ ತಾಣದಲ್ಲಿ ಸಂಪೂರ್ಣವಾಗಿ ಮಾರ್ಗಸೂಚಿ ವಿವರ ಪಡೆದುಕೊಳ್ಳುವಂತೆ ಚಾರ್ ಧಾಮ್ ಯಾತ್ರೆ ಮಂಡಳಿ ಕೋರಿದೆ.
* ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ಕೋವಿಡ್ 19 ಮಾರ್ಗ ಸೂಚಿ ಎಲ್ಲರಿಗೂ ಅನ್ವಯವಾಗಲಿದೆ.












Click it and Unblock the Notifications