ರೈಲಿನಲ್ಲಿ ಎಸ್ಸೆಂಎಸ್ ಮಾಡಿ ಊಟ ಪಡೆಯಿರಿ!
ಬೆಂಗಳೂರು, ಸೆ.21: ರೈಲಿನಲ್ಲಿ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ದ ಕೇಂದ್ರ ಸಚಿವ ಸದಾನಂದ ಗೌಡ ಅವರು ಈಗ ಹೊಸದೊಂದು ಯೋಜನೆಗೆ ಚಾಲನೆ ನೀಡಲಿದ್ದಾರೆ. ಮೊಬೈಲಿನಿಂದ ಎಸ್ಎಂಎಸ್ ಮಾಡಿ ಊಟ ಆರ್ಡರ್ ಮಾಡುವ ಯೋಜನೆಗೆ ಚಾಲನೆ ದೊರೆಯಲಿದೆ.
ಈ ಹೊಸ ಯೋಜನೆಯಲ್ಲಿ ನೀವು ಪ್ರಯಾಣಿಸುವಾಗ ನಿಮ್ಮ ಮೊಬೈಲ್ ನಿಂದ ಎಸ್ಎಂಎಸ್ ಮಾಡಿದರೆ ಸಾಕು, ಕ್ಷಣಾರ್ಧದಲ್ಲೇ ಈ ಕ್ಯಾಟರಿಂಗ್ ಸೇವೆ ಮೂಲಕ ನೀವು ಕುಳಿತಿರುವ ಸ್ಥಳಕ್ಕೇ ಹಾಜರಿರುತ್ತದೆ. ಸೆ. 25ರಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು, ಈ ವಿನೂತನ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಐಆರ್ ಸಿಟಿಸಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಪ್ರಯಾಣಿಕರಿಗೆ ಎಸ್ಎಂಎಸ್ ಮೂಲಕ ತಿಂಡಿ-ತಿನಿಸುಗಳನ್ನು ಒದಗಿಸುವ ಸೌಲಭ್ಯ ನೀಡಲಾಗುತ್ತದೆ. ಪ್ರಯಾಣಿಕರು ಯಾವ ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು ಎಂಬುದನ್ನು ಇನ್ನೂ ಪ್ರಕಟಿಸಿಲ್ಲ.

ಅಂದ ಹಾಗೆ, ಈ ಯೋಜನೆ ರೈಲು ಪ್ರಯಾಣಿಕರಿಗೆ ಇಷ್ಟವಾದರೆ, ಅನ್ ಲೈನ್ ಮೂಲಕ ಫುಡ್ ಬುಕ್ಕಿಂಗ್ ಗೂ ಇಲಾಖೆ ಮುಂದಾಗಲಿದೆಯಂತೆ. ಆದರೆ, ಈ ವ್ಯವಸ್ಥೆ ಪ್ರಯಾಣಿಕರಿಗೆ ಹೊಸತೇನಲ್ಲ. ರೈಲ್ವೆ ಇಲಾಖೆಗೆ ಹೊಸತು ಅಷ್ಟೆ. ಈಗಾಗಲೇ ಮುರ್ನಾಲ್ಕು ಕಂಪನಿಗಳು ಆನ್ ಲೈನ್ ಫುಡ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿ ಯಶಸ್ವಿಯಾಗಿದ್ದಾರೆ. [ಈ ಬಗ್ಗೆ ವಿವರ ಇಲ್ಲಿ ಓದಿ]
ಸ್ಥಳೀಯ ಪ್ರದೇಶಗಳಿಗೆ ತಕ್ಕಂತೆ ಈ ತಿಂಡಿಗಳ ಮೆನುವಿನಲ್ಲಿ ಬದಲಾವಣೆ ಮಾಡಲು ರೈಲ್ವೆ ಆಲೋಚಿಸಿದೆ. ದಕ್ಷಿಣ ಭಾರತದಲ್ಲಿ ಉಪ್ಪಿಟ್ಟು, ಇಡ್ಲಿ, ಸಾಂಬಾರ್. ಉತ್ತರ ಭಾರತದಲ್ಲಿ ದಾಲ್, ಸಾಹಿ ಪನ್ನೀರ್ ಸೇರಿದಂತೆ ಇತರ ತಿಂಡಿಗಳನ್ನು ವಿತರಿಸಲು ಚಿಂತನೆ ನಡೆಸಲಾಗಿತ್ತು. ರೆಡಿ ಟು ಈಟ್ ಆಹಾರ ಸೇವೆ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ಹಂತದಲ್ಲೇ ಎಸ್ಎಂಎಸ್ ಮೂಲಕ ಆಹಾರ ಆರ್ಡರ್ ಯೋಜನೆ ಪ್ರಾಯೋಗಿಕವಾಗಿ ಕೆಲವು ಆಯ್ದ ರೈಲು ಮಾರ್ಗಗಳಲ್ಲಿ ಜಾರಿಗೆ ಬರಲಿದೆ.
ರೈಲ್ವೆಯಲ್ಲಿ ಸಿಗುವ ತಿಂಡಿ-ತಿನಿಸುಗಳ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ತಿಂಡಿಯಲ್ಲಿ ಹುಳಿ-ಹುಪ್ಪಟಗಳು, ಕೆಟ್ಟುಹೋದ ನೀರು ಸೇರಿದಂತೆ ನಾನಾ ರೀತಿಯ ದೂರುಗಳ ಸರಮಾಲೆ ಇರುತ್ತಿತ್ತು. ಇದನ್ನು ಮನಗಂಡಿರುವ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವುದಕ್ಕಾಗಿಯೇ ಮೊಬೈಲ್ ಆಧಾರಿತ ಈ ಕ್ಯಾಟರಿಂಗ್ ಸೇವೆ ಜಾರಿ ಮಾಡಲು ತೀರ್ಮಾನಿಸಿದೆ.
ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಅವರು ಬಜೆಟ್ನಲ್ಲಿ ನೀಡಿದ ಈ ಭರವಸೆಯಂತೆ ಮಯ್ಯಾಸ್ ತಿಂಡಿ ಸೆ.11ರಿಂದ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದರು. [ರೈಲಿನಲ್ಲೂ ಸಿಗುತ್ತೆ ಮಯ್ಯಾಸ್ ಉಪ್ಪಿಟ್ಟು, ಇಡ್ಲಿ] (ಪಿಟಿಐ)












Click it and Unblock the Notifications