ಸೋನಾಲ್ ಮಾನ್ಸಿಂಗ್ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
ನವದೆಹಲಿ, ಜುಲೈ 14 : ರಾಜ್ಯಸಭೆಗೆ ನಾಲ್ವರು ಸದಸ್ಯರನ್ನು ನಾಮ ನಿರ್ದೇಶನ ಮಾಡಲು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದರು. ಸೋನಾಲ್ ಮಾನ್ಸಿಂಗ್ ಸೇರಿದಂತೆ ನಾಲ್ವರು ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯ ಕಳುಹಿಸಿದ್ದ ಪ್ರಸ್ತಾವನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ಅಂಕಿತ ಹಾಕಿದ್ದಾರೆ. ರಾಜ್ಯಸಭೆಯಲ್ಲಿ 8 ನಾಮನಿರ್ದೇಶಿತ ಸದಸ್ಯರಿದ್ದಾರೆ. ತೆರವಾಗಿದ್ದ ನಾಲ್ಕು ಸ್ಥಾನಗಳು ಇಂದು ಭರ್ತಿಯಾಗಿವೆ.
ಮಾಜಿ ಸಂಸದ ರಾಮ್ ಶಕಾಲ್, ಆರ್ಎಸ್ಎಸ್ನ ರಾಕೇಶ್ ಸಿನ್ಹಾ, ನೃತ್ಯಪಟು ಸೋನಾಲ್ ಮಾನ್ಸಿಂಗ್ ಮತ್ತು ಕಲಾವಿದ ರಘುನಾಥ್ ಮೋಹಪಾತ್ರ ಅವರನ್ನು ಶನಿವಾರ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.

ರಾಮ್ ಶಕಾಲ್ ಉತ್ತರ ಪ್ರದೇಶ ಮೂಲದವರು. ಮೂರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ದಲಿತರ ಏಳಿಗೆಗಾಗಿ ಅವರು ತಮ್ಮ ಜೀವನನ್ನು ಮುಡುಪಾಗಿಟ್ಟಿದ್ದಾರೆ. ರೈತರು, ಕಾರ್ಮಿಕರ ನಡುವೆ ಉತ್ತಮ ಒಡನಾಟವನ್ನು ರಾಮ್ ಹೊಂದಿದ್ದಾರೆ.
ರಾಕೇಶ್ ಸಿನ್ಹಾ ಆರ್ಎಸ್ಎಸ್ ಹಿನ್ನಲೆ ಉಳ್ಳವರು. ದೆಹಲಿಯ ಥಿಂಕ್ ಟ್ಯಾಂಕ್ ಇಂಡಿಯಾ ಫೌಂಡೇಷನ್ ಸಂಸ್ಥಾಪಕರು. ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ.
ರಘುನಾಥ್ ಮೋಹಪಾತ್ರ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಕಲಾವಿದರು. 1959ರಿಂದ ಅವರು ಕಲ್ಲುಗಳ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಸೋನಾಲ್ ಮಾನ್ಸಿಂಗ್ ಖ್ಯಾತ ನೃತ್ಯಪಟು. ಸುಮಾರು ಆರು ದಶಕಗಳಿಂದ ಅವರು ಭರತನಾಟ್ಯ ಮತ್ತು ಓಡಿಸ್ಸಿ ನೃತ್ಯವನ್ನು ಪ್ರದರ್ಶನ ಮಾಡುತ್ತಿದ್ದಾರೆ. 1977ರಲ್ಲಿ ದೆಹಲಿಯಲ್ಲಿ ಅವರು ಸೆಂಟರ್ ಫಾರ್ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ.
ಸಂವಿಧಾನದ 80 (1)ಎ ನಿಯಮದಡಿ ರಾಷ್ಟ್ರಪತಿಗಳಿಗೆ 12 ಸದಸ್ಯರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಅಧಿಕಾರವಿದೆ. ಸಾಹಿತ್ಯ, ಕಲೆ, ವಿಜ್ಞಾನ, ಸಮಾಜ ಸೇವೆ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ ಗಣ್ಯರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ.












Click it and Unblock the Notifications