'ಮೋದಿ ಪ್ರಧಾನಿಯಾಗುವುದು ಮೈತ್ರಿಕೂಟದಲ್ಲೇ ಕೆಲವರಿಗೆ ಇಷ್ಟವಿಲ್ಲ'
ಪಾಟ್ನಾ, ಆಗಸ್ಟ್ 31: ಎನ್ ಡಿಎ ಮೈತ್ರಿಕೂಟದಲ್ಲೇ ಹಲವರಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗುವುದು ಇಷ್ಟವಿಲ್ಲ ಎನ್ನುವ ಮೂಲಕ ಬಿಜೆಪಿ ಮೈತ್ರಿ ಪಕ್ಷಗಳಲ್ಲಿ ಒಂದಾದ ರಾಷ್ಟ್ರೀಯ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಷವಾ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿದ್ದಾರೆ ಉಪೇಂದ್ರ ಕುಷವಾ. ಈಚೆಗೆ ಅವರು ನೀಡಿದ್ದ ಹೇಳಿಕೆ ಬಿಹಾರದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಯಾದವರ ಮನೆಯ ಹಾಲು ಮತ್ತು ಕುಷವಾರ ಮನೆಯ ಅನ್ನದಿಂದ ರುಚಿಯಾದ ಖೀರನ್ನು ಸಿದ್ಧಪಡಿಸಬಹುದು ಎಂಬ ಉಪೇಂದ್ರರ ಹೇಳಿಕೆ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು.
ಎನ್ ಡಿಎ ಮೈತ್ರಿಕೂಟದಲ್ಲಿ ಕೆಲವರಿಗೆ ಮೋದಿ ಜೀ ಮತ್ತೆ ಪ್ರಧಾನಿ ಆಗುವುದು ಬೇಕಾಗಿಲ್ಲ. ಅಂಥವರೇ ಮೈತ್ರಿಕೂಟದ ಒಳಗೆ ವದಂತಿಗಳನ್ನು ಹಬ್ಬಿಸಿ, ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದು, ತಮ್ಮ ಪಕ್ಷವು ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಎಂದು ಬಯಸುವುದಾಗಿ ತಿಳಿಸಿದ್ದಾರೆ. ಆದರೆ ಯಾರಿಗೆ ಮೋದಿ ಪ್ರಧಾನಿ ಆಗುವುದು ಬೇಕಿಲ್ಲ ಎಂಬ ಬಗ್ಗೆ ಏನನ್ನೂ ಹೇಳಿಲ್ಲ.

ಕಳೆದ ವಾರ ಉಪೇಂದ್ರ ಕುಷವಾ ಮಾತನಾಡಿ, ಬ್ರಾಹ್ಮಣರ ಮನೆಯಿಂದ ಸಕ್ಕರೆಯನ್ನು, ಚೌದ್ರೀಜಿಯಿಂದ ತುಳಸಿ (ಆರ್ಎಲ್ ಎಸ್ ಪಿ ಬಿಹಾರ ಮುಖ್ಯಸ್ಥ ಭೂದೇವ್ ಚೌಧರಿ) ಮತ್ತು ದಲಿತರು, ದಸ್ತಾರ್ ಖಾನ್ ರಿಂದ ಒಣ ಹಣ್ಣುಗಳನ್ನು ಸೇರಿಸಿ ರುಚಿಯಾದ ಖೀರನ್ನು ಮಾಡುತ್ತೇವೆ ಎಂದು ಹೇಳಿದ್ದರು.












Click it and Unblock the Notifications