Snake Bite: ತನ್ನನ್ನು ಕಚ್ಚಿದ ಹಾವಿಗೆ ತಿರುಗಿ ಎರಡು ಬಾರಿ ಕಚ್ಚಿದ ವ್ಯಕ್ತಿ: ಬಳಿಕ ಆಗಿದ್ದೇನು?
ಹಾವನ್ನು ಕಂಡರೆ ಭಯ ಪಡುವವರೇ ಹೆಚ್ಚು. ಎಲ್ಲಾದರೂ ಆಕಸ್ಮಿಕವಾಗಿ ಹಾವು ಕಂಡರೆ ಹೆದರಿ ಓಡುತ್ತಾರೆ. ಇನ್ನು ಹಾವು ಕಚ್ಚಿದರಂತೂ ಮುಗಿದೇ ಹೋಯ್ತು, ಕೆಲವರು ಆ ಭಯದಲ್ಲೇ ಪ್ರಾಣ ಬಿಡುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ತನಗೆ ಕಚ್ಚಿದ ಹಾವಿಗೆ ಯಮಲೋಕದ ದಾರಿ ತೋರಿಸಿದ್ದಾರೆ.
ತನಗೆ ಹಾವು ಕಚ್ಚುತ್ತಿದ್ದಂತೆ ವಿಷದ ಪರಿಣಾಮ ಕಡಿಮೆಯಾಗುತ್ತದೆ ಎನ್ನುವ ನಂಬಿಕೆಯಲ್ಲಿ ಹಾವನ್ನೇ ತಿರುಗಿ ಎರಡು ಕಚ್ಚಿರುವ ವಿಚಿತ್ರ ಘಟನೆ ಬಿಹಾರದಲ್ಲಿ ವರದಿಯಾಗಿದೆ.

ವ್ಯಕ್ತಿಯಿಂದ ಎರಡು ಬಾರಿ ಕಚ್ಚಿಸಿಕೊಂಡ ಹಾವು ಸಾವನ್ನಪ್ಪಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಬದುಕುಳಿದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಸಲಿಗೆ ಆಗಿದ್ದೇನು?
ರೈಲ್ವೇ ಉದ್ಯೋಗಿ ಸಂತೋಷ್ ಲೋಹರ್ ಬಿಹಾರದ ರಜೌಲಿಯ ದಟ್ಟ ಅರಣ್ಯ ಪ್ರದೇಶದಲ್ಲಿ ರೈಲು ಹಳಿಗಳನ್ನು ಹಾಕುವ ತಂಡದ ಭಾಗವಾಗಿದ್ದರು. ಮಂಗಳವಾರ ರಾತ್ರಿ, ಪೂರ್ಣ ದಿನದ ಕೆಲಸದ ನಂತರ, ನಿದ್ದೆ ಮಾಡುತ್ತಿರುವಾಗ ಹಾವು ಕಚ್ಚಿತು.
ಲೋಹರ್ ಅವರು ಹಾವನ್ನು ಹಿಡಿದುಕೊಂಡು ಅದನ್ನು ಎರಡು ಬಾರಿ ಕಚ್ಚಿದ್ದಾರೆ. ತನ್ನನ್ನು ಕಚ್ಚಿದ ಹಾವಿಗೆ ಮರಳಿ ಕಚ್ಚಿದರೆ ಜೀವ ಯಉಳಿಯುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ದೇಶದ ಕೆಲವು ಭಾಗಗಳಲ್ಲಿ, ಹಾವಿನಿಂದ ಕಚ್ಚಿಸಿಕೊಂಡವರು ಮರಳಿ ಹಾವಿಗೆ ಕಚ್ಚಿದಾಗ ವಿಷವು ಮತ್ತೆ ಹಾವಿಗೆ ವರ್ಗಾವಣೆಯಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ.
ಅದೃಷ್ಟವಶಾತ್ ಲೋಹರ್ ಅವರ ಜೊತೆ ಸಹೋದ್ಯೋಗಿಗಳು ಇದ್ದ ಕಾರಣ ತಕ್ಷಣ ಅವರನ್ನು ರಾಜೌಲಿ ಉಪವಿಭಾಗದ ಆಸ್ಪತ್ರೆಗೆ ಸಾಗಿಸಿದರು. ಡಾ.ಸತೀಶ್ ಚಂದ್ರ ಸಿನ್ಹಾ ಅವರು ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ರಾತ್ರಿಯಿಡೀ ಆಸ್ಪತ್ರೆಯಲ್ಲಿ ಇರಿಸಲಾಯಿತು ಮತ್ತು ಮರುದಿನ ಬಿಡುಗಡೆ ಮಾಡಲಾಗಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಡಾ.ಸಿನ್ಹಾ ಹೇಳಿದ್ದಾರೆ. ರೈಲ್ವೆ ನೌಕರನ ಮೇಲೆ ಯಾವ ರೀತಿಯ ಹಾವು ದಾಳಿ ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ.
ಹಾವು ಕಚ್ಚಿ ಪ್ರತಿ ವರ್ಷ 50 ಸಾವಿರ ಸಾವು
ಭಾರತದಲ್ಲಿ, ಹಾವು ಕಡಿತದಿಂದ ಪ್ರತಿ ವರ್ಷ ಸುಮಾರು 50,000 ಜನರು ಸಾಯುತ್ತಾರೆ. 30-40 ಲಕ್ಷ ಹಾವು ಕಡಿತ ಘಟನೆಗಳು ನಡೆಯುತ್ತವೆ. ಆದರೂ ಎಲ್ಲಾ ಘಟನೆಗಳಲ್ಲಿ ವಿಷದ ಹಾವುಗಳು ಕಚ್ಚದೆ ಇರುವುದರಿಂದ ಸಾವಿನ ಪ್ರಮಾಣ ಕಡಿಮೆ ಇದೆ. ಉತ್ತರ ಭಾರತದ ಹಲವು ಕಡೆಗಳಲ್ಲಿ ಹಾವಿಗೆ ಮರಳಿ ಕಡಿದರೆ ಬದುಕುಳಿಯುತ್ತಾರೆ ಎನ್ನುವ ನಂಬಿಕೆ ಇದೆ.












Click it and Unblock the Notifications