ಭಾರತದಲ್ಲಿ ಮದ್ಯಪಾನ ಬಿಟ್ಟರೆ ಅತ್ಯಾಚಾರ, ಕೊಲೆ, ಸುಲಿಗೆ ಕಡಿಮೆ ಆಗುತ್ತಾ!?
ನವದೆಹಲಿ, ಜುಲೈ 26: ಭಾರತದಲ್ಲಿ ಗಂಟೆಗೊಂದು ಕ್ರೂರ ಹತ್ಯೆಗಳು, ಅತ್ಯಾಚಾರಗಳು, ಮಹಿಳೆಯರ ಮೇಲಿನ ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಇಂಥ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರು ನೀಡಿರುವ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ.
ದೇಶದಲ್ಲಿ ಅತ್ಯಾಚಾರ ತಪ್ಪಿಸಬೇಕೇ, ಕ್ರೂರ ಕೊಲೆ, ಸುಲಿಗೆ ಅಪರಾಧ ಕೃತ್ಯಗಳನ್ನು ನಿಯಂತ್ರಿಸಬೇಕೇ, ಹಾಗಿದ್ದರೆ ಮದ್ಯಪಾನ ಮಾಡುವುದನ್ನು ಬಿಟ್ಟು ಗಾಂಜಾ ಸೇದುವುದಕ್ಕೆ ಶುರು ಮಾಡಿ ಎಂದು ಛತ್ತೀಸ್ಗಢ ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ವಿವಾದಾತ್ಮಕ ಹೇಳಿಕೊಂದನ್ನು ನೀಡಿದ್ದಾರೆ.
ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!
ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ಪ್ರಕಾರ, ಮದ್ಯಪಾನದಿಂದಲೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆಯಂತೆ. ಅಷ್ಟು ಹೇಳಿದ್ದರೆ ಶಾಸಕರು ಸದ್ದು ಮಾಡುತ್ತಿರಲಿಲ್ಲ, ಸುದ್ದಿ ಆಗುತ್ತಿರಲಿಲ್ಲ. ಆದರೆ ಮದ್ಯಪಾನ ಬಿಟ್ಟು ಗಾಂಜಾ ಮತ್ತಿಗೆ ಮೊರೆ ಹೋಗಿ ಎನ್ನುವ ಶಾಸಕರ ಸಲಹೆಯು ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿ ಶಾಸಕರು ನೀಡಿರುವ ಹೇಳಿಕೆಯಲ್ಲಿ ಏನಿದೆ? ಅವರ ಹೇಳಿಕೆ ಹಿಂದಿನ ಉದ್ದೇಶವೇನಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
"ಎಣ್ಣೆ ಹೊಡೆಯುವುದರಿಂದ ಅಪರಾಧಗಳು ಹೆಚ್ಚು"
"ದೇಶದಲ್ಲಿ ಮದ್ಯಪಾನದಿಂದ ಅತ್ಯಾಚಾರ, ಕೊಲೆ, ಡಕಾಯತಿ ಸೇರಿದಂತೆ ಮುಂತಾದ ಅಪರಾಧಗಳು ಹೆಚ್ಚಾಗುತ್ತಿವೆ. ಇಂಥ ಅಪರಾಧಗಳನ್ನು ತಡೆಯುವುದಕ್ಕೆ ಮದ್ಯಪಾನ ಮಾಡುವುದನ್ನು ಬಿಡಬೇಕು. ಅದರ ಬದಲಿಗೆ ಗಾಂಜಾ ಸೇವನೆ ಮಾಡಬೇಕು. ಗಾಂಜಾ ಸೇವೆನೆಯಿಂದ ಅಪರಾಧಗಳು ಹೆಚ್ಚಾಗುವುದಿಲ್ಲ," ಎಂದು ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಶಾಸಕನ ಹೇಳಿಕೆಯಿಂದ ಕೆರಳಿದ ಕಾಂಗ್ರೆಸ್
ಭಾರತೀಯ ಜನತಾ ಪಕ್ಷದ ಶಾಸಕ ಕೃಷ್ಣಮೂರ್ತಿ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಬಿಜೆಪಿಗನ ಮಾತನ್ನು ಖಂಡಿಸಿರುವ ಕಾಂಗ್ರೆಸ್, ಒಬ್ಬ ಸಾರ್ವಜನಿಕ ಪ್ರತಿನಿಧಿಯಾಗಿ ಗಾಂಜಾ ಮತ್ತು ಸೆಣಬಿನ ರೀತಿ ಪದಾರ್ಥವನ್ನು ಸೇವಿಸುವುದಕ್ಕೆ ಪ್ರಚೋದನೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದೆ.
ವಿಧಾನಸಭೆಯಲ್ಲೂ ಈ ಬಗ್ಗೆ ಮಾತನಾಡಿರುವ ಬಗ್ಗೆ ಹೇಳಿಕೆ
ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಮಾಧ್ಯಮಗಳಿಗೆ ಬಿಜೆಪಿ ಶಾಸಕ ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದ್ದಾರೆ. "ಅದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಬಗ್ಗೆ ಹಿಂದೆ ನಾನು ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆ. ಅತ್ಯಾಚಾರ, ಕೊಲೆ ಮತ್ತು ಜಗಳಕ್ಕೆ ಮದ್ಯಪಾನವೇ ಎಲ್ಲೋ ಕಾರಣ ಎಂದು ನನಗೆ ಅನಿಸುತ್ತದೆ. ಆದರೆ ಭಂಗಿ ಸೇವನೆ ಮಾಡುವ ವ್ಯಕ್ತಿಯಿಂದ ಅತ್ಯಾಚಾರ, ಕೊಲೆ ಮತ್ತು ಡಕಾಯಿತಿ ನಡೆದಿದೆಯೇ ಎಂದು ಪ್ರಶ್ನೆ ಮಾಡಿದ್ದೆನು. ವ್ಯಸನದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಮದ್ಯವನ್ನು ನಿಷೇಧಿಸುವುದಕ್ಕಾಗಿ ರಾಜ್ಯದಲ್ಲಿ ಸಮಿತಿಯನ್ನು ರಚಿಸಲಾಗಿದೆ," ಎಂದು ಹೇಳಿದರು.
"ನಾವು ಭಂಗಿ ಮತ್ತು ಗಾಂಜಾ ಕಡೆಗೆ ಹೇಗೆ ಮುಂದುವರಿಯಬಹುದು ಎಂಬುದರ ಕುರಿತು ಸಮಿತಿಯು ಯೋಚಿಸಬೇಕು. ಜನರು ವ್ಯಸನವನ್ನು ಬಯಸಿದರೆ, ಕೊಲೆ, ಅತ್ಯಾಚಾರ ಮತ್ತು ಇತರ ಅಪರಾಧಗಳಿಗೆ ಕಾರಣವಾಗದ್ದನ್ನು ಅವರಿಗೆ ನೀಡಬೇಕಾಗುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ," ಎಂದು ಬಿಜೆಪಿ ಶಾಸಕ ಕೃಷ್ಣಮೂರ್ತಿ ಬಂಧಿ ಹೇಳಿದ್ದಾರೆ.
ಬಿಜೆಪಿ ಶಾಸಕನ ಹೇಳಿಕೆಯನ್ನು ಟೀಕಿಸಿದ ಸಿಎಂ
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆಯನ್ನು ಟೀಕಿಸಿದ್ದಾರೆ. ಯಾವುದೇ ರೂಪದಲ್ಲಿ ವ್ಯಸನವು ಒಳ್ಳೆಯದಲ್ಲ, ಅದನ್ನು ಪ್ರಚಾರ ಮಾಡುವುದು ಮತ್ತು ಉತ್ತೇಜನ ನೀಡುವುದೂ ಒಳ್ಳೆಯದ್ದಲ್ಲ. ಗಾಂಜಾವನ್ನು ಸಕ್ರಮಗೊಳಿಸಬೇಕಾದರೆ ಕೇಂದ್ರದಿಂದಲೇ ಒತ್ತಾಯಿಸಲಿ ಎಂದು ಬಂಧಿ ವಿರುದ್ಧ ಬಾಘೇಲ್ ವಾಗ್ದಾಳಿ ನಡೆಸಿದರು.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟಾನ್ಸ್ (ಎನ್ಡಿಪಿಎಸ್) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಗಾಂಜಾ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಆದರೆ ಗಾಂಜಾ ಸಸ್ಯದ ಎಲೆಗಳನ್ನು ಬಳಸಿ ತಯಾರಿಸಿದ ಖಾದ್ಯ ಮಿಶ್ರಣವಾದ ಭಾಂಗ್ ಅನ್ನು ಕಾನೂನಿನಡಿಯಲ್ಲಿ ಅನುಮತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.