ಯಾತ್ರಿಗಳ ಗಮನಕ್ಕೆ : ಮಾನಸ ಸರೋವರಕ್ಕೆ ಹಾದಿ ಸುಗುಮ!
ಗ್ಯಾಂಗ್ ಟಕ್(ಸಿಕ್ಕಿಂ), ನ.30: ಹಿಂದೂಗಳ ಪವಿತ್ರ ಯಾತ್ರಾಕ್ಷೇತ್ರ ಕೈಲಾಸ ಮಾನ ಸರೋವರ ಯಾತ್ರೆ ಹಾದಿ ಈಗ ಸುಗಮಗೊಂಡಿದೆ. ಚೀನಾ ದೇಶದೊಡನೆ ಒಪ್ಪಂದದ ನಂತರ ಸಿಕ್ಕಿಂನ ನಾಥುಲಾ ಪಾಸ್ ಮೂಲ ಭಾರತೀಯರು ಪವಿತ್ರ ಯಾತ್ರೆ ಕೈಗೊಳ್ಳಬಹುದಾಗಿದೆ.
ಚೀನಾ ಆಕ್ರಮಿತ ಟಿಬೇಟ್ ಭಾಗದಲ್ಲಿರುವ ಕೈಲಾಶ ಪರ್ವತವನ್ನು ಪರಿಕ್ರಮ ಮಾಡಲು ಯಾತ್ರಾರ್ಥಿಗಳು ಉತ್ತರ ಖಂಡದ ಲಿಪ್ಲೇಖ್ ಮಾರ್ಗದ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದು ದುರ್ಗಮ ಹಾದಿಯಾಗಿದ್ದು, ಅನೇಕ ಕಡೆ ಯಾತ್ರಾರ್ಥಿಗಳು ಹಲವು ಕಿ.ಮೀ. ಚಾರಣ ನಡೆಸಬೇಕಿದೆ. ಹಾಗಾಗಿ ವಯೋವೃದ್ಧರು ಈ ಹಾದಿಯಲ್ಲಿ ಸಾಗಲು ಸಾಕಷ್ಟು ಪ್ರಯಾಸ ಪಡಬೇಕಿದೆ.

ಮುಂದಿನ ವರ್ಷ ಜೂನ್ ವೇಳೆಗೆ ಮಾನಸ ಸರೋವರಕ್ಕೆ ಸಿಕ್ಕಿಂ ಮೂಲಕ ಮಾರ್ಗ ತೆರೆಯುವ ನಿರೀಕ್ಷೆಯಿದೆ ಎಂದು ಸಿಕ್ಕಿಂನ ಪ್ರವಾಸೋದ್ಯಮ ಇಲಾಖೆ ಹೇಳಿದೆ. ಈ ಸಂಬಂಧ ಭಾರತ ಮತ್ತು ಚೀನಾ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದೆ.
ಹೊಸ ಮಾರ್ಗಕ್ಕೆ ಸಂಬಂಧಿಸಿ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಜೂನ್ ವೇಳೆಗೆ ಭಾರತದಿಂದ ಮೊದಲ ಯಾತ್ರಿಗಳ ತಂಡ ನಾಥುಲಾ ಮಾರ್ಗದ ಮೂಲಕ ಯಾತ್ರೆ ಆರಂಭಿಸಲಿದೆ. ಮೊದಲ ತಂಡದಲ್ಲಿ 1,600 ಮಂದಿ ಇರಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಾಖಂಡ್ ನ ಲಿಪುಲೇಖ್ ಪಾಸ್ ಮಾರ್ಗವೂ ಬಳಕೆಯಲ್ಲಿರಲಿದೆ. ಜೊತೆಗೆ ನಾಥುಲಾ ಪಾಸ್ ಮಾರ್ಗವೂ ಯಾತ್ರಿಗಳಿಗೆ ಲಭ್ಯವಾಗಲಿದೆ. ಸಿಕ್ಕಿಂ ಮಾರ್ಗದಲ್ಲಿ ಹೋಗ ಬಯಸುವ ಯಾತ್ರಿಗಳು ಗ್ಯಾಂಗ್ ಟಕ್ ನಲ್ಲಿ ಎರಡು ದಿನ ತಂಗುವುದು ಕಡ್ಡಾಯಗೊಳಿಸಲಾಗಿದೆ.
ಇಲ್ಲಿನ ವಾತಾವರಣಕ್ಕೆ ಯಾತ್ರಿಗಳು ಹೊಂದಿಕೊಂಡ ನಂತರ ಸೂಕ್ತ ಮಾರ್ಗದರ್ಶಿಗಳ ಜೊತೆ ಮುಂದಕ್ಕೆ ಸಾಗಬಹುದಾಗಿದೆ. 17 ಮೈಲಿಯಲ್ಲಿರುವ ಶೇರಾಥಾಂಗ್ ನಲ್ಲಿ ಮುಂದಿನೆ ನೆಲೆ ಕಾಣಬಹುದಾಗಿದೆ. ಇಲ್ಲದಿದ್ದರೆ ಶಿಗಾತ್ಸೆ ಮೂಲಕ ಕೈಲಾಸ ಮಾನಸ ಸರೋವರ ತಲುಪಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.(ಪಿಟಿಐ)











Click it and Unblock the Notifications