ಸೋನಿಯಾ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ
ಭೋಪಾಲ್,ನ. 18 : ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ಸೋಮವಾರ ದಾಖಲಿಸಿದ್ದಾರೆ.
ರಾಜಧಾನಿ ಭೂಪಾಲ್ ನಲ್ಲಿ ದೊಡ್ಡ ಚುನಾವಣಾ ಜಾಹೀರಾತು ಹಾಕಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಆಸೆಬುರುಕ ಕುಟುಂಬವೊಂದು ಕಳೆದ ಹತ್ತು ವರ್ಷಗಳಿಂದ ಲೂಟಿ ಹೊಡೆಯುತ್ತಿದೆ ಎಂದು ಹೇಳಿತ್ತು. ಇದರ ವಿರುದ್ಧ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಪತ್ನಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ತಮ್ಮ ದೂರಿನಲ್ಲಿ ಚೌಹಾಣ್ ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಾಂತಿಲಾಲ್ ಬುರಿಯಾ ಅವರನ್ನು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ತಮ್ಮ ವಿರುದ್ಧ ಮಾಡುತ್ತಿರುವ ಆಧಾರ ರಹಿತ ಅಪಪ್ರಚಾರದಿಂದ ಘನತೆಗೆ ಧಕ್ಕೆ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿರುವ ಚೌಹಾಣ್ 10 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಬೇಕು ಎಂದು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ತಾವು, ಸೈನಿಕನಂತೆ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ನನ್ನ ಮೇಲೆ ಆಧಾರ ರಹಿತವಾಗಿ ಆರೋಪ ಮಾಡುತ್ತಿದೆ. ಆದ್ದರಿಂದ ತಮ್ಮ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಚೌಹಾಣ್ ದೂರಿನಲ್ಲಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಕಾಂಗ್ರೆಸ್ ಮುಖಂಡರು ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದರು, ಬಿಜೆಪಿ ಮಧ್ಯಪ್ರದೇಶ ರಾಜ್ಯದ ಅಭಿವೃದ್ಧಿಗಾಗಿ ಏನು ಮಾಡಿಲ್ಲ? ಎಂದು ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಮತ್ತು ರಾಜ್ಯದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜ್ಯೋತಿರಾಧ್ಯ ಸಿಂಧ್ಯ ಚೌಹಾಣ್ ವಿರುದ್ಧ ಆರೋಪ ಮಾಡಿದ್ದರು. (ಮಧ್ಯಪ್ರದೇಶ ಚುನಾವಣಾ ವೇಳಾಪಟ್ಟಿ)
ಕಾಂಗ್ರೆಸ್ ಪಕ್ಷ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ನೋಡಿದ ಚೌಹಾಣ್ ಆಧಾರ ರಹಿತವಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅಂದಹಾಗೆ ಮಧ್ಯಪ್ರದೇಶದಲ್ಲಿ 231 ಕ್ಷೇತ್ರಗಳಿಗೆ ನ.25ರಂದು ಚುನಾವಣೆ ನಡೆಯಲಿದೆ.












Click it and Unblock the Notifications