ಶಿವಶಕ್ತಿ ಅಂತ ಹೇಗೆ ಹೆಸರಿಡುತ್ತಾರೆ? ಚಂದ್ರ ಏನು ಬಿಜೆಪಿ ಆಸ್ತಿಯಾ? ಕಾಂಗ್ರೆಸ್ ನಾಯಕ ಸಿಟ್ಟು
ಬೆಂಗಳೂರು, ಆಗಸ್ಟ್ 26: ಚಂದ್ರಯಾನ-3 ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಲ್ಯಾಂಡಿಂಗ್ ಈ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಕರೆಯಲಾಗುವುದು ಎಂಬುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅವರು ಈ ಘೋಷಣೆ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ನಲ್ಲಿ (ISTRAC) ಪ್ರಧಾನಿ ಮೋದಿಯವರು ಇಂದು ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
'ಚಂದ್ರನ ಮೇಲಿನ ಲ್ಯಾಂಡಿಂಗ್ ಸ್ಥಳವನ್ನು ಹೆಸರಿಸುವುದು ಸಂಪ್ರದಾಯವಾಗಿದೆ. ಭಾರತವೂ ಈಗ ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು ಹೆಸರಿಸಲು ನಿರ್ಧರಿಸಿದೆ. ಆ ಸ್ಥಳವನ್ನು ಈಗ 'ಶಿವಶಕ್ತಿ ಪಾಯಿಂಟ್' ಎಂಬುದಾಗಿ ಕರೆಯಲಾಗುವುದು' ಎಂದು ಪ್ರಧಾನಿ ಮೋದಿ ಹೇಳಿದರು.

ಶಿವಶಕ್ತಿ ಹೆಸರಿನಲ್ಲಿರುವ 'ಶಕ್ತಿ' ಮಹಿಳಾ ವಿಜ್ಞಾನಿಗಳ ಕಠಿಣ ಪರಿಶ್ರಮ, ಸ್ಫೂರ್ತಿ ಮತ್ತು ಸಬಲೀಕರಣದಿಂದ ಬಂದಿದೆ ಎಂದು ಮೋದಿ ತಿಳಿಸಿದರು.
ಕಾಂಗ್ರೆಸ್ ನಾಯಕನ ಆಕ್ರೋಶ
ಚಂದ್ರನ ಮೇಲೆ ವಿಕ್ರಂ ಲ್ಯಾಂಡಿಂಗ್ ಆದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಇಂಡಿಯಾ ಟಿವಿಯೊಂದಿಗೆ ಮಾತನಾಡಿರುವ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
'ಇದು ನಗು ತರಿಸುತ್ತದೆ. ಚಂದ್ರನ ಮೇಲೆ ವಿಕ್ರಂ ಲ್ಯಾಂಡ್ ಆದ ಸ್ಥಳವನ್ನು ನಾಮಕರಣ ಮಾಡಲು ಪಿಎಂ ಮೋದಿಗೆ ಯಾರು ಹಕ್ಕನ್ನು ನೀಡಿದ್ದಾರೆ? ಇದೆಲ್ಲವನ್ನು ನೋಡಿ ಜಗತ್ತು ನಗುತ್ತದೆ. ನಾವು ಚಂದ್ರನ ಮಾಲೀಕರಲ್ಲ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಲದರ ಮೇಲೆ ಮಾಲೀಕತ್ವವನ್ನು ಪ್ರದರ್ಶಿಸುವ ಅಭ್ಯಾಸವನ್ನು ಹೊಂದಿದೆ' ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ, ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರನ್ನು ಹೊಗಳಿದ ಅಲ್ವಿ, 'ನೆಹರು ಹೆಸರನ್ನು ಬೇರೆ ಯಾವುದೇ ಹೆಸರಿನೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
'ನೀವು ಜವಾಹರ್ ಲಾಲ್ ನೆಹರೂ ಅವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಇಸ್ರೋ ಇಂದು ಏನೇ ಆಗಿರಲಿ ಅದು ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದ ಮಾತ್ರ' ಎಂದು ಅಲ್ವಿ ತಿಳಿಸಿದ್ದಾರೆ.












Click it and Unblock the Notifications