ಚಪ್ಪಲಿ ಏಟು ಪ್ರಕರಣ: ಸಂಸದನಿಗೆ ಶಿವಸೇನೆ ನೋಟಿಸ್
ನವದೆಹಲಿಯಲ್ಲಿ ಗುರುವಾರ ಬೆಳಗ್ಗೆ ಸುಮಾರು 10:30ರ ಹೊತ್ತಿಗೆ ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ಜಗಳವಾಡಿದ್ದ ಸಂಸದ ರವೀಂದ್ರ, ಆ ಸಂಸ್ಥೆಯ ಸಿಬ್ಬಂದಿ ಸುಕುಮಾರ್ ಎಂಬುವರಿಗೆ ಚಪ್ಪಲಿಯಿಂದ ಹೊಡೆದಿದ್ದರು.
ಮುಂಬೈ, ಮಾರ್ಚ್ 23: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಸುಕುಮಾರ್ ಎಂಬುವರಿಗೆ ಚಪ್ಪಲಿಯಿಂದ ಹೊಡೆದು ರಂಪಾಟ ಮಾಡಿರುವ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ನೋಟಿಸ್ ನೀಡಿರುವ ಶಿವಸೇನೆ, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.
ಗುರುವಾರ (ಮಾರ್ಚ್ 23) ಬೆಳಗ್ಗೆ ಪುಣೆಯಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ವಾಡ್, ಏರ್ ಇಂಡಿಯಾದಿಂದ ತಮಗಾಗುತ್ತಿರುವ ಕೆಲವಾರು ತೊಂದರೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ಬಿಟ್ಟು ಇಳಿಯದೇ ಪಟ್ಟಾಗಿ ಕುಳಿತಿದ್ದರು.[ಚಪ್ಪಲಿಯೇಟು ಪ್ರಕರಣ: ಶಿವಸೇನಾ ಸಂಸದ ವಿರುದ್ಧ ಎಫ್ಐಆರ್]
ಅವರನ್ನು ಎಬ್ಬಿಸಲು ಬಂದ ಸಿಬ್ಬಂದಿಯೊಡನೆ ವಾಗ್ವಾದ ನಡೆಸಿದ್ದ ಅವರು, ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿದ್ದರು.
ಆನಂತರ ,ಸುದ್ದಿಗಾರರೊಂದಿಗೆ ಮಾತನಾಡಿ, ''ಬಾಯಿಗೆ ಬಂದಂತೆ ಮಾತನಾಡಿದ್ದರಿಂದಾಗಿ ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದೇನೆ'' ಎಂದೂ ಹೇಳಿಕೊಂಡಿದ್ದರು.
ರವೀಂದ್ರ ಈ ನಡೆ ದೇಶದಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದೆ. ಅತ್ತ, ನವದೆಹಲಿಯ ಠಾಣೆಯೊಂದರಲ್ಲಿ ಎಫ್ ಐ ಆರ್ ಕೂಡ ದಾಖಲಾಗಿದೆ. ಇದಲ್ಲದೆ, ಏರ್ ಇಂಡಿಯಾ ಸಂಸ್ಥೆಯು ರವೀಂದ್ರ ಅವರನ್ನು ಪ್ರಯಾಣಿಕರ ಕಪ್ಪುಪಟ್ಟಿಗೆ ಸೇರಿಸಿದೆ.