ವೈರಲ್ ಆಯ್ತು ರಾಹುಲ್ ವಿರುದ್ಧ ದನಿ ಎತ್ತಿದ ಶೆಹ್ಜಾದ್ ವಿಡಿಯೋ!
ಕಾಂಗ್ರೆಸ್ ನ ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿರುವ ಶೆಹ್ಜಾದ್ ಪೂನಾವಾಲ ಇದೀಗ ಕಾಂಗ್ರೆಸ್ ನ ರೆಬೆಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಇಷ್ಟು ದಿನ ಟ್ವಿಟ್ಟರ್ ಹೇಳಿಕೆಗಳ ಮೂಲಕ ರಾಹುಲ್ ಗಾಂಧಿಯವರ ಕಾಲೆಳೆಯುತ್ತಿದ್ದ ಶೆಹ್ಜಾದ್, ಇದೀಗ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಾಕಿರುವುದು ಮತ್ತಷ್ಟು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.
ಈ ವಿಡಿಯೋದಲ್ಲಿ, ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ ದಿನವನ್ನು ಕರಾಳ ದಿನ(black day) ವನ್ನಾಗಿ ಆಚರಿಸುವುದಾಗಿ ಅವರು ಹೇಳಿದ್ದಾರೆ. ರಾಹುಲ್ ಗಾಂಧಿಯವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗಲೂ ಕಪ್ಪು ಬಟ್ಟೆ ತೊಟ್ಟು ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಕುಟುಂಬ ರಾಜಕಾರಣದ ವಿರುದ್ಧ ಹಲವು ದಿನಗಳ ಹಿಂದೆ ಪ್ರತಿಭಟನೆ ಆರಂಭಿಸಿರುವ ಅವರು ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವ ರಾಹುಲ್ ಗಾಂಧಿಯವರಿಗೆ ದುಃಸ್ವಪ್ನವಾಗಿದ್ದಾರೆ. ಅದರಲ್ಲೂ ಗುಜರಾತ್ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ ಕಾಂಗ್ರೆಸ್ಸಿನಲ್ಲೇ ರಾಹುಲ್ ಗಾಂಧಿ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಪ್ರಬಲ ದನಿ ಕೇಳಿಬರುತ್ತಿರುವುದು ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವೇ ಸರಿ!
ರಾಹುಲ್ ವಿರುದ್ಧ ಶೆಹ್ಜಾದ್ ಹೇಳಿಕೆಗೆ ಸಹೋದರ ತೆಹ್ಸೀನ್ ಖಾರದ ಪ್ರತಿಕ್ರಿಯೆ
|
ವೀಡಿಯೋದಲ್ಲೇನಿದೆ?
"ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್, ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಈ ಆಯ್ಕೆ ಅಸಾಂವಿಧಾನಿಕ. ಈ ಕುಟುಂಬ ರಾಜಕಾರಣ ತರವಲ್ಲ. ಇದನ್ನು ಬೆಂಬಲಿಸುವವರು ಕಪ್ಪು ಬಟ್ಟೆ ಧರಿಸಿ, ನಿಮ್ಮ ಸಾಮಾಜಿಕ ಮಾಧ್ಯಮದ ಪ್ರೊಫೈಲ್ ಚಿತ್ರಗಳಲ್ಲಿ ಕಪ್ಪು ಬಟ್ಟೆ ಧರಿಸಿರುವ ಚಿತ್ರ ಹಾಕಿ. ಮಹಾತ್ಮಾ ಗಾಂಧೀಜಿ, ಲೋಕಮಾನ್ಯ ಬಾಲಗಂಗಾಧರ್ ತಿಲಕ್ ರಂಥವರು ಮುನ್ನಡೆಸಿದ ಪಕ್ಷದಲ್ಲಿ ಔರಂಗಜೇಬ್ ರಾಜ್ಯ ನಡೆಯುವುದು ಬೇಕಿಲ್ಲ" ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಪತ್ರ ಬರೆದಿದ್ದ ಶೆಹ್ಜಾದ್ ಪೂನಾವಾಲಾ
ಡಿಸೆಂಬರ್ 4 ರಂದು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದ ಕ್ರಮವನ್ನು ಖಂಡಿಸಿದ್ದ ಪೂನಾವಾಲಾ, ನಿಮ್ಮ ಸಾಮರ್ಥ್ಯದಿಂದ ಮುಂದೆ ಬನ್ನಿ, ಸರ್ ನೇಮಿನಿಂದಲ್ಲ ಎಂದು ನೇರವಾಗಿಯೇ ಮಾತಿನ ಛಾಟಿ ನೀಡಿದ್ದರು. ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದುಕೊಂಡಿದ್ದೀರಾ? ನೀವು ನಿಮ್ಮ ಸರ್ ನೇಮ್ ಬಿಟ್ಟು ಬರುವುದಾದರೆ ನಾನೇ ನಿಮ್ಮ ಎದುರು ಚುನಾವಣೆಗೆ ನಿಂತು ಸವಾಲು ಸ್ವೀಕರಿಸಲು ಸಿದ್ದ ಎಂದು ಸವಾಲೆಸೆದಿದ್ದರು.

ನರೇಂದ್ರ ಮೋದಿ ಮೆಚ್ಚುಗೆ
ಕಾಂಗ್ರೆಸ್ ವಿರುದ್ಧ ಸಿಡಿದು ನಿಂತ ಶೆಹ್ಜಾದ್ ಅವರ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದರು. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಏಕಪಕ್ಷೀಯತೆಯನ್ನು ಬಯಲು ಮಾಡಿದ ಶೆಹ್ಜಾದ್ ಅವರ ಧ್ವನಿಯನ್ನು ಅಡಗಿಸಲು ಕಾಂಗ್ರೆಸ್ ಪ್ರಯತ್ನಿಸಿತು. ಇದನ್ನು ಯಾವ ರೀತಿಯ ಸಹಿಷ್ಣುತೆ ಎಂದು ಕರೆಯಬಹುದು ಎಂದು ಮೋದಿ ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದಿರುವಾಗ ಇಂಥವರು ಜನರಿಗೆ ಎಂಥ ಆಡಳಿತ ನೀಡಲು ಸಾಧ್ಯ ಎಂದೂ ಕೇಳಿದ್ದರು.

ಯಾರು ಈ ಶೆಹ್ಜಾದ್ ಪೂನಾವಾಲಾ
ಪುಣೆಯಲ್ಲಿ ರಾಜಕಾರಣಿ, ದೆಹಲಿಯಲ್ಲಿ ವಕೀಲ ಪುಣೆಯ ಶ್ರೀಮಂತ ಕುಟುಂಬದಲ್ಲಿ ಹುಟ್ಟಿರುವ ಶೆಹಜಾದ್ ಪೂನಾವಾಲಾ ಅವರು, ಪುಣೆಯ ಎಂಐಟಿ ಸ್ಕೂಲ್ ಆಫ್ ಗವರ್ನಮೆಂಟ್ ನಲ್ಲಿ ಪದವಿ, ಇಂಡಿಯನ್ ಲಾ ಸ್ಕೂಲ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಪ್ರಸ್ತುತ ದೆಹಲಿಯಲ್ಲಿ ವಕೀಲರಾಗಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅಲ್ಲದೆ, ಅವರು ನಾಗರಿಕ ರಕ್ಷಣಾ ಕಾರ್ಯಕರ್ತರಾಗಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ.












Click it and Unblock the Notifications