ಲೈಂಗಿಕ ಕಿರುಕುಳ: ಗಂಗೂಲಿ ಕೊನೆಗೂ ರಾಜೀನಾಮೆ

ದಿಲ್ಲಿಯ ಪಂಚತಾರಾ ಹೋಟೆಲೊಂದರಲ್ಲಿ ನ್ಯಾ. ಅಶೋಕ್ ಗಂಗೂಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಜೂನಿಯರ್ ಮಹಿಳಾ ವಕೀಲರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಆರೋಪಿ ನ್ಯಾಯಮೂರ್ತಿಯವರು 'ತಾನೇನು ತಪ್ಪು ಮಾಡಿಲ್ಲ. ನಾನವನಲ್ಲ' ಎಂದು ಸುಮಾರು 2 ತಿಂಗಳಿಂದ ಹಠ ಹಿಡಿದಿದ್ದಾರೆ.
ಈ ಮಧ್ಯೆ, ಆರೋಪದ ಹಿನ್ನೆಲೆಯಲ್ಲಿ ಹುದ್ದೆ ತ್ಯಜಿಸಬೇಕು ಎಂಬ ಬಗ್ಗೆ ಎಷ್ಟೇ ಒತ್ತಾಯ/ಬೇಡಿಕೆ ಬಂದರೂ ತಲೆಕೆಡಿಸಿಕೊಳ್ಳದೇ ಆ ಪದವಿಯಲ್ಲಿ ಮುಂದುವರಿದಿದ್ದ ಗಂಗೂಲಿ ಅವರು, ಸೋಮವಾರ ಸಂಜೆ ಪಶ್ಚಿಮ ಬಂಗಾಳ ರಾಜ್ಯಪಾಲ ಎಂಕೆ ನಾರಾಯಣನ್ ಅವರನ್ನು ಭೇಟಿ ಮಾಡಿ ದಿಢೀರನೆ ರಾಜೀನಾಮೆ ಸಲ್ಲಿಸಿದ್ದಾರೆ. ( 'ಯುವರ್ ಆನರ್! ನೀವು ಮಾಡಿದ್ದು ಲೈಂಗಿಕ ದೌರ್ಜನ್ಯವೇ' )
ಗಂಗೂಲಿ ಅವರ ಪದಚ್ಯುತಿಗೆ ಕೇಂದ್ರ ಸರಕಾರ ಪ್ರಕ್ರಿಯೆ ಆರಂಭಿಸಿದ ಕೆಲವೇ ದಿನಗಳ ಅಂತರದಲ್ಲಿ ಈ ಬೆಳವಣಿಗೆ ನಡೆದಿದೆ. ರಾಜೀನಾಮೆ ಸಲ್ಲಿಸಲು ನಿರ್ಧರಿಸಿರುವುದಾಗಿ ನ್ಯಾ. ಗಂಗೂಲಿ ಅವರು ತಮ್ಮೊಂದಿಗೆ ಹೇಳಿಕೊಂಡಿದ್ದಾರೆ ಎಂದು ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರು ನಿನ್ನೆಯಷ್ಟೇ ಹೇಳಿದ್ದರು.
'ಗಂಗೂಲಿ ಅವರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಅವರ ಇದಕ್ಕಿಂತ ಮೊದಲೇ ಅವರು ರಾಜೀನಾಮೆ ನೀಡಬೇಕಿತ್ತು. ಮಾನವ ಹಕ್ಕುಗಳ ಆಯೋಗದ ಗೌರವ ಉಳಿದಿರುವುದಕ್ಕೆ ಸಂತೋಷವಾಗಿದೆ' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ತಿಳಿಸಿದ್ದಾರೆ. ಇಂದಿರಾ ಅವರು ಪ್ರಕರಣದ ತನಿಖೆ ನಡೆಸಲು ನೇಮಕಗೊಂಡಿದ್ದ ಮೂವರು ನ್ಯಾಯಾಧೀಶರ ಸತ್ಯಶೋಧನಾ ಸಮಿತಿ ಅಧ್ಯಕ್ಷರಾಗಿದ್ದರು. ಗಂಗೂಲಿ ತನಗೆ ಯಾವ ರೀತಿಯ ಕಿರುಕುಳ ನೀಡಿದರು ಎಂಬ ಬಗ್ಗೆ ಶೋಷಣೆಗೆ ಒಳಗಾದ ಯುವತಿ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಇಂದಿರಾ ಬಹಿರಂಗಪಡಿಸಿದ್ದರು.
ಈ ಮಧ್ಯೆ ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹುದ್ದೆಯಿಂದ ನ್ಯಾ. ಗಂಗೂಲಿ ಅವರನ್ನು ವಜಾಗೊಳಿಸಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿಗೆ ಈ ಹಿಂದೆಯೇ ಪತ್ರ ಬರೆದಿದ್ದರು. ಮಮತಾ ಪತ್ರ ಆಧರಿಸಿ ಕೇಂದ್ರ ಸರಕಾರವು ಜನವರಿ 2ರಂದು ರಾಷ್ಟ್ರಪತಿಗಳ ಮೂಲಕ ನ್ಯಾ. ಗಂಗೂಲಿ ವಜಾಕ್ಕೆ ಪ್ರಕ್ರಿಯೆ ಆರಂಭಿಸಿತ್ತು.












Click it and Unblock the Notifications