ನಾಪತ್ತೆಯಾಗಿದ್ದ ಮಾವೋವಾದಿ ನಾಯಕ ಅಕ್ಕಿರಾಜು ಬಸ್ತಾರ್ ಅರಣ್ಯದಲ್ಲಿ ಸಾವು
ರಾಯ್ಪುರ, ಅಕ್ಟೋಬರ್ 16: ಮಾವೋವಾದಿ ನಾಯಕ ಅಕ್ಕಿರಾಜು ಬಸ್ತಾರ್ ಅರಣ್ಯದಲ್ಲಿ ಸಾವನ್ನಪ್ಪಿದ್ದಾನೆ. ಕಿಡ್ನಿ ವೈಫಲ್ಯದಿಂದ ನಕ್ಸಲ್ ಮುಖಂಡ ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ರಾಮಕೃಷ್ಣ (58) ಸಾವನ್ನಪ್ಪಿರುವುದಾಗಿ ಮಾವೋವಾದಿ ಸಂಘಟನೆ ದೃಢಪಡಿಸಿದೆ.
ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯನಾಗಿದ್ದ ಈತ, ನಿಷೇಧಿತ ಸಂಘಟನೆಯೊಂದರ ಆಂಧ್ರ - ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದವು.
ಛತ್ತೀಸ್ಗಢದ ಬಸ್ತಾರ್ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಅಕ್ಕಿರಾಜು ದೀರ್ಘಕಾಲದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂತ್ರಪಿಂಡ ವೈಫಲ್ಯದಿಂದ ಡಯಾಲಿಸಿಸ್ಗೆ ಒಳಗಾಗುವ ವೇಳೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಕ್ಕಿರಾಜು, ವೈಎಸ್ ರಾಜಶೇಖರ್ ರೆಡ್ಡಿ ನೇತೃತ್ವದ ಅಂದಿನ ಆಂಧ್ರ ಸರ್ಕಾರದೊಂದಿಗೆ ಶಾಂತಿ ಮಾತುಕತೆಗಳನ್ನು ಆರಂಭಿಸಲು ಮಾವೋವಾದಿ ಸಂಘಟನೆಯನ್ನು ಮುನ್ನಡೆಸಿದ್ದರು. ಕಳೆದ 4 ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ.
2004ರಲ್ಲಿ ಆಂಧ್ರಪ್ರದೇಶ ಸರ್ಕಾರದ ಜತೆ ಶಾಂತಿ ಮಾತುಕತೆಗೆ ಕಾರಣಕರ್ತನಾಗಿದ್ದ ಅಕ್ಕಿರಾಜು ಶವ ಅರಣ್ಯದಲ್ಲಿ ದೊರೆತಿದೆ. ಮಾವೋವಾದಿ ಸಂಘಟನೆಯಲ್ಲಿ ಪ್ರಮುಖ ವಿಚಾರವಾದಿಯಾಗಿದ್ದ ಅಕ್ಕಿರಾಜು ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಆರ್ಕೆ ಬಗ್ಗೆ ಮಾಹಿತಿ ಕೊಟ್ಟವರಿಗೆ 97 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.
ಮಾವೋವಾದಿ ಉನ್ನತ ನಾಯಕನ ನಿಧನದ ಸುದ್ದಿಯನ್ನು ಚತ್ತೀಸ್ಗಢ ಪೊಲೀಸರು ಖಚಿತಪಡಿಸಿದ್ದಾರೆ. ಗುಪ್ತಚರ ಇಲಾಖೆ ಕೂಡ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ. ಸಿಪಿಐ ಆರ್ಕೆ ಸಾವಿನ ಬಗ್ಗೆ ಯಾವುದೇ ಪ್ರಕಟಣೆ ನೀಡಿಲ್ಲ.
2016ರ ಅಕ್ಟೋಬರ್ನಲ್ಲಿ ಒಡಿಶಾ ಮಲ್ಕಾರ್ ಗಿರಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರ್ಕೆ ಗಾಯಗೊಂಡಿದ್ದು, ಈ ಸಂದರ್ಭದಲ್ಲಿ ನಡೆದ ಎನ್ಕೌಂಟರ್ನಲ್ಲಿ 30 ಮಾವೋವಾದಿಗಳು ಸಾವನ್ನಪ್ಪಿದ್ದರು. ಅಂದು ಪ್ರಾಥಮಿಕ ವರದಿ ಪ್ರಕಾರ ಆರ್ಕೆ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು.
ಮಾವೋವಾದಿ ಪರ ಸಹಾನುಭೂತಿ ಹೊಂದಿದ ಗುಂಪು ಹಾಗೂ ಮಾನವ ಹಕ್ಕು ಹೋರಾಟಗಾರರು ಆರ್ಕೆ ವಶದಲ್ಲಿದ್ದಾರೆ ಎಂದು ಹೇಳಲಾಗಿತ್ತು, ಆರ್ಕೆ ಪತ್ನಿ ಶಿರೀಷಾ ಹೈದರಾಬಾದ್ ಹೈಕೋರ್ಟ್ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿದ್ದರು, ಕೊನೆಗೆ ಮಾವೋವಾದಿ ಸಂಘಟನೆ ಆರ್ಕೆ ಸುರಕ್ಷಿತವಾಗಿ ಇರುವುದಾಗಿ ಪ್ರಕಟಣೆ ಹೊರಡಿಸಿತ್ತು.