ಸೋನಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ವಿರುದ್ದವೇ ಸಿಡಿದೆದ್ದ ಕಾಂಗ್ರೆಸ್ ಸಂಸದರು
ಕಾಂಗ್ರೆಸ್ಸಿನ ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಮಾಡಿರುವ ಸಾಲುಸಾಲು ಟ್ವೀಟ್ ಗಳು ಪಕ್ಷದೊಳಗೆ ಹಿರಿಯರು ಮತ್ತು ಕಿರಿಯರು ಎನ್ನುವ ಜಟಾಪಟಿ ಜೋರಾಗಿ ನಡೆಯುತ್ತಿದೆ ಎನ್ನುವುದನ್ನು ಸಾಬೀತು ಪಡಿಸುತ್ತಿದೆ.
ಕಳೆದ ಗುರುವಾರದಂದು (ಜುಲೈ 30) ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ವರ್ಚುಯಲ್ ಸಭೆಯಲ್ಲಿ, ಯುವ ಕಾಂಗ್ರೆಸ್ ಸಂಸದರು, ಹಿರಿಯ ಮುಖಂಡರ ವಿರುದ್ದ ತಿರುಗಿಬಿದ್ದಿದ್ದಾರೆ ಎಂದು ವರದಿಯಾಗಿದೆ.
ಪಕ್ಷದ ರಾಜ್ಯಸಭಾ ಸಂಸದರ ಸಭೆಯನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡುತ್ತಿದ್ದರು. ಆ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಭಾಗವಹಿಸಿದ್ದರು. ಪಕ್ಷ ಸದ್ಯ ಎದುರಿಸುತ್ತಿರುವ ಹೀನಾಯ ಪರಿಸ್ಥಿತಿಗೆ ಹಿರಿಯ ಮುಖಂಡರೇ ಕಾರಣ ಎಂದು ನೇರವಾಗಿ, ಕೆಲವು ಸಂಸದರು ಆರೋಪಿಸಿದ್ದಾರೆಂದು ಹೇಳಲಾಗುತ್ತಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಾಗ, ಪಕ್ಷದ ಕಿರಿಯ ಮುಖಂಡರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಚಿನ್ ಪೈಲಟ್ ಅವರಿಗೆ ಸಿಎಂ ಹುದ್ದೆ ನೀಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರು. ಆದರೆ, ಹಿರಿಯರ ಒತ್ತಡಕ್ಕೆ ಮಣಿದ ಸೋನಿಯಾ ಗಾಂಧಿ, ಕಮಲ್ ನಾಥ್ ಮತ್ತು ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಪಕ್ಷದೊಳಗೆ ಒಡಕು ಮೂಡಲು, ಇದುವೇ ಪ್ರಮುಖ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಕಿರಿಯರ ಆಕ್ರೋಶ ಯಾರ ವಿರುದ್ದ?

ಎರಡನೇ ಅವಧಿಯಲ್ಲಿ ಇದ್ದವರೇ ಕಾಂಗ್ರೆಸ್ಸಿನ ಇಂದಿನ ಹೀನಾಯ ಸ್ಥಿತಿಗೆ ಕಾರಣ
ಯುಪಿಎ ಎರಡನೇ ಅವಧಿಯಲ್ಲಿ ಇದ್ದವರೇ ಕಾಂಗ್ರೆಸ್ಸಿನ ಇಂದಿನ ಹೀನಾಯ ಸ್ಥಿತಿಗೆ ಕಾರಣ ಎನ್ನುವುದು ಯುವ ನಾಯಕರ ಆಪಾದನೆ. ಆ ವೇಳೆ, ಸಿಂಗ್ ಸರಕಾರದ ಭಾಗವಾಗಿದ್ದ ಸಚಿವರು ಮತ್ತು ಯುವ ನಾಯಕರ ನಡುವೆ ವಾಕ್ಸಮರವೇ ನಡೆದು ಹೋಗಿತ್ತು ಎಂದು ವರದಿಯಾಗಿದೆ.

ರಾಹುಲ್ ಗಾಂಧಿಯನ್ನು ಪಕ್ಷದ ಸಾರಥಿಯನ್ನಾಗಿ ಮಾಡಿ
"ಮೋದಿ ನೇತೃತ್ವದ ಸರಕಾರ ಹಲವು ವಿಚಾರಗಳಲ್ಲಿ ವೈಫಲ್ಯತೆಯನ್ನು ಎದುರಿಸುತ್ತಿದೆ. ಆದರೂ, ಕಾಂಗ್ರೆಸ್ ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದಿನದಿಂದ ದಿನಕ್ಕೆ ದುರ್ಬಲವಾಗುತ್ತಿರುವ ಪಕ್ಷಕ್ಕೆ ನವಚೇತನ ನೀಡಬೇಕಿದೆ. ರಾಹುಲ್ ಗಾಂಧಿಯನ್ನು ಪಕ್ಷದ ಸಾರಥಿಯನ್ನಾಗಿ ಮಾಡಿ" ಎಂದು ರಾಜೀವ್ ಸತಾವ್ ನೇರವಾಗಿ ಕಿಡಿಕಾರಿದ್ದರು. ಇದಕ್ಕೆ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಧ್ವನಿಗೂಡಿಸಿದ್ದರು.

ಮನಮೋಹನ್ ಸಿಂಗ್ ದಿವ್ಯ ಮೌನಕ್ಕೆ ಶರಣು
ವರ್ಚುಯಲ್ ಸಭೆಯಲ್ಲಿ ಇಷ್ಟೊಂದು ಟೀಕೆ ವ್ಯಕ್ತವಾಗುತ್ತಿದ್ದರೂ, ಸಭೆಯ ಭಾಗವಾಗಿದ್ದ ಮನಮೋಹನ್ ಸಿಂಗ್ ದಿವ್ಯ ಮೌನಕ್ಕೆ ಶರಣಾಗಿದ್ದರು. ತಮ್ಮ ಅವಧಿಯಲ್ಲಿನ ನೆಗೆಟೀವ್ ಅಂಶಗಳನ್ನೇ ಯುವ ನಾಯಕರು ಬೊಟ್ಟು ಮಾಡಿ ತೋರಿಸುತ್ತಿದ್ದರೂ, ಸಿಂಗ್ ತುಟಿ ಪಿಟಿಕ್ ಅಂದಿರಲಿಲ್ಲ.
|
ಆನಂದ್ ಶರ್ಮಾ ಟ್ವೀಟ್
ಈಗ, ಮನಮೋಹನ್ ಸಿಂಗ್ ರಕ್ಷಣೆಗೆ ಹಿರಿಯ ಮುಖಂಡರಾದ ಆನಂದ್ ಶರ್ಮಾ, ಶಶಿ ತರೂರ್, ಮನೀಶ್ ತಿವಾರಿ ಮುಂತಾದವರು ಬಂದಿದ್ದಾರೆ. "ಬಿಜೆಪಿಯ ಅಪಪ್ರಚಾರದಿಂದ ನಮಗೆ ಸೋಲಾಯಿತು. ಸಿಂಗ್ ಅವರನ್ನು ದೂಷಿಸುವುದು ಸರಿಯಲ್ಲ"ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ. "ಸಿಂಗ್ ಮಾಡಿದ ಸಾಧನೆ ಪ್ರತೀ ಕಾಂಗ್ರೆಸ್ ಹೆಮ್ಮೆ ಪಡುವಂತದ್ದು. ಇದನ್ನು ನಮ್ಮವರು ಗೌರವಿಸ ಬೇಕೇ ಹೊರತು ಮರೆಯಬಾರದು"ಎಂದು ಆನಂದ್ ಶರ್ಮಾ ಹೇಳಿದ್ದಾರೆ. ಒಟ್ಟಿನಲ್ಲಿ ಹಿರಿಯರು-ಕಿರಿಯರು ಎನ್ನುವ ಜಟಾಪಟಿ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯುತ್ತಿದೆ.












Click it and Unblock the Notifications