ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?
ನವದೆಹಲಿ, ಸೆಪ್ಟೆಂಬರ್ 06 : "ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡರೆ ಅದು ಸಾವಿಗೆ ಸಮಾನ" ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಭಿಪ್ರಾಯಪಟ್ಟಿದ್ದು, ದೇಶದ ಸಹಸ್ರ ಸಹಸ್ರ ಸಲಿಂಗ ಕಾಮಿಗಳಿಗೆ ಗುರುವಾರ ಜಯ ದೊರಕಿಸಿಕೊಟ್ಟಿದ್ದಾರೆ.
ಶತಮಾನಗಳಿಂದ ಭಾರೀ ಚರ್ಚೆಗೆ, ಪ್ರತಿಭಟನೆಗೆ, ಅಪಹಾಸ್ಯಕ್ಕೆ, ಅಸಹ್ಯಕ್ಕೆ ಈಡಾಗಿದ್ದ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377, ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಕ ಪೀಠ ಒಕ್ಕೊರಲಿನಿಂದ ನೀಡಿದ ಈ ತೀರ್ಪಿನಿಂದ ಮುಕ್ತಿ ಪಡೆದಿದೆ. ದೇಶದ ಎಲ್ಲೆಲ್ಲೂ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
ಸಲಿಂಗ ಕಾಮಕ್ಕಾಗಿ ಹೋರಾಟ ನಡೆಸುತ್ತಿರುವವರಿಗೆ ಇದು ಸಿಕ್ಕ ಭರ್ಜರಿ ಜಯವಾಗಿದೆ. ಇಡೀ ದೇಶದಾದ್ಯಂತ ಸಲಿಂಗ ಕಾಮವನ್ನು ಬೆಂಬಲಿಸುತ್ತಿರುವವರು ಹರ್ಷದಿಂದ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ತೀರ್ಪನ್ನು ನೀಡಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತಿತರ ನ್ಯಾಯಮೂರ್ತಿಗಳಿಗೆ ಸಮುದಾಯದವರು ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸೇರಿದಂತೆ ಐವರು ನ್ಯಾಯಮೂರ್ತಿಗಳು ಈ ತೀರ್ಪನ್ನು ಓದುತ್ತ ಗಮನಿಸಿರುವ ಸಂಗತಿಗಳು ಉಲ್ಲೇಖಾರ್ಹವಾಗಿವೆ. ಅವು...

ಗುಲಾಬಿಯನ್ನು ಯಾವುದೇ ಹೆಸರಿನಿಂದ ಕರೆಯಿರಿ
ನಾನು ನಾನೇ. ಯಾರೇ ಆಗಲಿ ತಮ್ಮ ವೈಯಕ್ತಿಕತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಖ್ಯಾತ ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ಹೇಳಿದ್ದ, ಗುಲಾಬಿಯನ್ನು ನೀವು ಯಾವುದೇ ಹೆಸರಿನಿಂದ ಕರೆಯಿರಿ, ಅದರ ವಾಸನೆಯೊಂದೇ. ಒಬ್ಬನನ್ನು ಗುರುತಿಸಲು ನಾವು ಯಾವುದೇ ಹೆಸರಿನಿಂದ ಕರೆಯಬಹುದು. ಆದರೆ, ಆ ಗುರುತಿಲ್ಲದೆ, ಮನುಷ್ಯ ಕೇವಲ ವಸ್ತುವಾಗುತ್ತಾನೆ - ನ್ಯಾ. ದೀಪಕ್ ಮಿಶ್ರಾ.

ಸಲಿಂಗ ಕಾಮ ಅಪರಾಧವೆನ್ನುವ ಕಾನೂನಿಗೆ ಕೊಡಲಿ
ಸಲಿಂಗ ಕಾಮ ಅಪರಾಧ ಎನ್ನುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377, ಸಂವಿಧಾನದ ಮೂಲಭೂತ ಹಕ್ಕು ನೀಡುವ ಅನುಚ್ಛೇದ 14ಕ್ಕೆ ವಿರುದ್ಧವಾಗಿದೆ. ಎಲ್ಜಿಪಿಟಿಕ್ಯೂ ಸಮುದಾಯದ ಮೇಲೆ ಮೇಲಿಂದ ಮೇಲೆ ದಬ್ಬಾಳಿಕೆ, ತಾರತಮ್ಯ ನಡೆಯುತ್ತಲೇ ಇತ್ತು. ಸಹಮತದ ಸಲಿಂಗ ಕಾಮ ಅಪರಾಧ ಎನ್ನುವ ಸೆಕ್ಷನ್ 377 ಅನ್ನು ಅಳಿಸಿಹಾಕಲಾಗಿದೆ - ನ್ಯಾ. ದೀಪಕ್ ಮಿಶ್ರಾ.

ಎಲ್ಲ ಹಕ್ಕುಗಳಿಗೆ ಎಲ್ಜಿಬಿಟಿಕ್ಯೂ ಹಕ್ಕುದಾರರು
ಸಂವಿಧಾನದ ಅಡಿಯಲ್ಲಿ ಇತರ ನಾಗರಿಕರಿಗೆ ನೀಡಲಾಗಿರುವ ಹಕ್ಕಿಗೆ ಎಲ್ಜಿಬಿಟಿಕ್ಯೂ ಸಮುದಾಯದವರು ಕೂಡ ಹಕ್ಕುದಾರರಾಗಿರುತ್ತಾರೆ. ಸೆಕ್ಷನ್ 377 ವಿವೇಕರಹಿತ, ಸ್ವೇಚ್ಛಾನುಸಾರವಾಗಿದೆ ಮತ್ತು ಎಲ್ಜಿಬಿಟಿಕ್ಯೂ ಸಮುದಾಯಕ್ಕೆ ನೀಡಬೇಕಾಗಿದ್ದ ಗೌರವ, ಘನೆಯನ್ನು ಕಿತ್ತುಕೊಂಡಿದೆ. ಸಂವಿಧಾನ ಎಲ್ಲರಿಗೂ ಸಮಾನತೆ ನೀಡುತ್ತದೆ. ಘನತೆ ಗೌರವದಿಂದ ಬದುಕುವುದು ಸಾಂವಿಧಾನಿಕ ಹಕ್ಕು - ನ್ಯಾ. ದೀಪಕ್ ಮಿಶ್ರಾ.

ಹಕ್ಕು ಕಿತ್ತುಕೊಂಡರೆ ಸಾವನ್ನು ಕರುಣಿಸಿದಂತೆ
ಎಲ್ಲ ವ್ಯಕ್ತಿಗಳಿಗೆ ಸ್ವಾತಂತ್ರ್ಯ ನೀಡಿದಾಗ ಮಾತ್ರ ನಾವು ಪ್ರಜಾಪ್ರಭುತ್ವವಿರುವ ಸಮಾಜದಲ್ಲಿ ಬದುಕುತ್ತೇವೆ ಎಂದು ಹೇಳಬಹುದು. ನಾವು ಸಾಮಾಜಿಕ ಪೂರ್ವಾಗ್ರಹಗಳಿಂದ ಕೂಡಿದ ಪರಿಕಲ್ಪನೆಗಳಿಗೆ ಗುಡ್ ಬೈ ಹೇಳಬೇಕು. ಎಲ್ಲರಿಗಿರಬೇಕಾದ ಹಕ್ಕು ಎಲ್ಜಿಬಿಟಿಕ್ಯೂ ಸಮುದಾಯಕ್ಕಿದೆ. ಅದನ್ನು ಕಿತ್ತುಕೊಂಡರೆ ಸಾವನ್ನು ಕರುಣಿಸಿದಂತೆ. ತಮ್ಮ ಗುರುತನ್ನು ಕಾಪಾಡಿಕೊಳ್ಳುವುದು, ಗೌಪ್ಯತೆಯನ್ನು ರಕ್ಷಿಸಿಕೊಳ್ಳುವುದು ಸಂವಿಧಾನದ ಪ್ರಮುಖ ಅಂಶಗಳಲ್ಲಿ ಒಂದು - ನ್ಯಾ. ದೀಪಕ್ ಮಿಶ್ರಾ.

ಈ ತೀರ್ಪಿಗೆ ಸರಕಾರ ಪ್ರಚಾರ ನೀಡಬೇಕು
ಈ ತೀರ್ಪಿಗೆ ವ್ಯಾಪಕ ಪ್ರಚಾರ ನೀಡಲು ಸರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಲಿಂಗ ಕಾಮದ ಬಗ್ಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದುಹಾಕಲು ಸರಕಾರ ಪ್ರಯತ್ನಿಸಬೇಕು. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಇಂಟರ್ನೆಟ್ ಮಾಧ್ಯಮ ಮುಂತಾದವುಗಳ ಮೂಲಕ ಸರಕಾರ ಜಾಹೀರಾತುಗಳ ಮೂಲಕ ಸಲಿಂಗ ಕಾಮ ಅಪರಾಧವಲ್ಲ ಎಂಬುದನ್ನು ಪ್ರಚಾರ ಮಾಡಬೇಕು - ನ್ಯಾಯಮೂರ್ತಿ ನಾರಿಮನ್.

ಸಲಿಂಗಕಾಮಿಗಳು ಕೂಡ ಮಾನವರು
2013ರಲ್ಲಿ ಸರ್ವೋಚ್ಚ ನ್ಯಾಯಾಲಯ, ಸುರೇಶ್ ಕೌಶಲ್ ಪ್ರಕರಣದಲ್ಲಿ ನೀಡಿರುವ ತೀರ್ಪು ಸರಿಯಾದುದಲ್ಲ. ಸಲಿಂಗ ಕಾಮವನ್ನು ಕೇಂದ್ರ ಸರಕಾರ ವಿರೋಧಿಸಿಲ್ಲ. ಸಲಿಂಗ ಕಾಮಿಗಳಿಗೆ ಎಲ್ಲ ರೀತಿಯ ಸಾಂವಿಧಾನಕ ಹಕ್ಕುಗಳಿವೆ. ಅಂಥ ಗುಂಪುಗಳು ರಕ್ಷಣೆಗೆ ಅರ್ಹ. ಅಂಥ ಗುಂಪುಗಳನ್ನು ಯಾವುದೇ ತಾರತಮ್ಯ ಮಾಡದೆ, ಅವರನ್ನು ಮಾನವರನ್ನಾಗಿ ಕಾಣಬೇಕು, ಮಾನವೀಯತೆ ತೋರಬೇಕು - ನ್ಯಾಯಮೂರ್ತಿ ನಾರಿಮನ್.

ಎಲ್ಜಿಬಿಟಿಕ್ಯೂ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು
ಎಲ್ಜಿಬಿಟಿಕ್ಯೂ (lesbian, gay, bisexual, transgender, queer) ಸಮುದಾಯಕ್ಕೆ ನಮ್ಮ ಇತಿಹಾಸ ಕ್ಷಮೆ ಯಾಚಿಸಬೇಕು. ಈ ಸಮುದಾಯದವರು ಭೀತಿಯಿಂದ ಬಾಳುವೆ ಮಾಡುವಂತೆ ಮಾಡಲಾಗಿದೆ. ಇದಕ್ಕೆಲ್ಲ ಕಾರಣ ಈ ಸಮುದಾಯದ ಬಗ್ಗೆ ಬಹುಸಂಖ್ಯಾತರಿಗೆ ಇರುವ ನಿರ್ಲಕ್ಷ್ಯವೇ ಕಾರಣ. ಅವರಿಗೆ ಸಂವಿಧಾನದ ಅನುಚ್ಛೇದ 14, 15 ಮತ್ತು 21ರ ಅಡಿಯಲ್ಲಿ ಸಿಗಬೇಕಾದ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಅವರಿಗೆ ಎಲ್ಲರಂತೆ ತಮಗೆ ಬೇಕಾಗಿರುವ ರೀತಿಯಲ್ಲಿ ಬದುಕಲು ಎಲ್ಲ ಹಕ್ಕಿದೆ - ನ್ಯಾಯಮೂರ್ತಿ ಇಂದು ಮಲ್ಹೋತ್ರಾ.

ಲೈಂಗಿಕ ಕ್ರಿಯೆ ವೈಯಕ್ತಿಕ ವಿಚಾರ
ಸಲಿಂಗ ಕಾಮಿ ಸಮುದಾಯಕ್ಕೆ ಸಾಂವಿಧಾನಿಕ ನೈತಿಕತೆಯ ಹಂಗಿರಬೇಕೆ ಹೊರತು ಸಾಮಾಜಿಕ ನೈತಿಕತೆಯ ಹಂಗಿರಬಾರದು. ಸಂಗಾತಿಯ ಆಯ್ಕೆಯಾಗಲಿ, ಲೈಂಗಿಕ ಕ್ರಿಯೆಯ ಇಚ್ಛೆಯಾಗಲಿ ಅವರ ವೈಯಕ್ತಿಕ ವಿಚಾರ, ಇದರಲ್ಲಿ ತಲೆಹಾಕಲು ಅಥವಾ ನಿರ್ಬಂಧ ಹೇರಲು ಯಾವುದೇ ರಾಜ್ಯಕ್ಕಾಗಲಿ, ಕೇಂದ್ರಕ್ಕಾಗಲಿ ಯಾವುದೇ ಅಧಿಕಾರವಿಲ್ಲ. ಇಬ್ಬರು ಸಲಿಂಗಕಾಮಿಗಳು ಸಹಮತದೊಂದಿಗೆ ನಡೆಸುವ ಲೈಂಗಿಕ ಕ್ರಿಯೆ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅಸಾಂವಿಧಾನಿಕವಾಗಿದೆ. ಸುರೇಶ್ ಕೌಶಲ್ ತೀರ್ಪಿನ್ನು ತೊಡೆದುಹಾಕಲಾಗಿದೆ - ನ್ಯಾಯಮೂರ್ತಿ ಧನಂಜಯ ವೈ. ಚಂದ್ರಡೂಡ್.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications