ಆದೇಶ ಪಾಲಿಸುವಂತೆ ಸಿದ್ದರಾಮಯ್ಯಗೆ ಹೇಳಿ : ಸುಪ್ರೀಂ
ನವದೆಹಲಿ, ಸೆಪ್ಟೆಂಬರ್ 27 : ಕಾವೇರಿ ನೀರನ್ನು ಕರ್ನಾಟಕದ ಜನತೆಯ ಕುಡಿಯುವ ಅವಶ್ಯಕತೆಗಾಗಿ ಮಾತ್ರ ಬಳಸಲಾಗುವುದು ಎಂಬ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ವಿಶೇಷ ಜಂಟಿ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಪಾಲಿಸುವುದಿಲ್ಲ ಎಂದು ಒಕ್ಕೂಟ ವ್ಯವಸ್ಥೆಯಲ್ಲಿರುವ ಯಾವ ರಾಜ್ಯವೂ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿರುವುದು ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಪರಿಹಾರವಲ್ಲ ಎಂದು ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ಅವರಿದ್ದ ಪೀಠ ಕರ್ನಾಟಕದ ಕಿವಿ ಹಿಂಡಿದೆ.
ಕರ್ನಾಟಕ ಸಲ್ಲಿಸಿದ್ದ ತಿದ್ದುಪಡಿ ಅರ್ಜಿ ವಿಚಾರಣೆಗೆ ಬಂದಾಗ, ಜಂಟಿ ಸದನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ತಿಳಿಸಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಆದೇಶ ಪಾಲಿಸದಿರುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ, ಪ್ರಾಮಾಣಿಕತೆ ತೋರಿಸಿ, ಮೊದಲು ನೀರು ಬಿಡಿ ಎಂದು ಖಂಡತುಂಡವಾಗಿ ಆದೇಶ ನೀಡಿತು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮುಂದಿನ ಮೂರು ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಲೇಬೇಕಾದ ಸಂದಿಗ್ಧಕ್ಕೆ ಕರ್ನಾಟಕ ಒಳಗಾಗಿದೆ. ಸರ್ವ ಪಕ್ಷಗಳೊಂದಿಗೆ ಚರ್ಚಿಸಿ ಮುಂದೆ ಏನು ಮಾಡಬೇಕೆಂಬ ನಿರ್ಣಯಕ್ಕೆ ಸರಕಾರ ಬರಲಿದೆ.
ಕರ್ನಾಟಕ ಜಂಟಿ ಸದನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡುವುದಿಲ್ಲ. ಈ ಸಂಗತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿ, ಸುಪ್ರೀಂ ಕೋರ್ಟ್ ಆದೇಶ ಪಾಲಿಸುವಂತೆ ಬುದ್ಧಿಮಾತು ಹೇಳಿ ಎಂದು ಫಾಲಿ ನಾರಿಮನ್ ಅವರಿಗೆ ನ್ಯಾಯಮೂರ್ತಿಗಳು ಆದೇಶಿಸಿದರು.
ದಶಕಗಳಿಂದ ಮುಗಿಯದ ಕಾವೇರಿ ಕದನದಿಂದ ಸಾಕಾಗಿಹೋಗಿದೆ. ಕರ್ನಾಟಕದ ಹಠಮಾರಿ ಧೋರಣೆಯಿಂದಾಗಿ ಮೇಲಿಂದ ಮೇಲೆ ಇಂತಹ ಪರಿಸ್ಥಿತಿ ಬರುತ್ತಿದೆ ಎಂದು ತಮಿಳುನಾಡಿನ ಪರ ವಕೀಲರು ಸುಪ್ರೀಂ ಕೋರ್ಟಿನ ಮುಂದೆ ಅಳಲು ತೋಡಿಕೊಂಡರು.
ವಾದಪ್ರತಿವಾದಗಳ ನಡುವೆ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು, ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಲು ಯತ್ನಿಸಲಿದೆ ಎಂದು ಭಾರತದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಆಶ್ವಾಸನೆ ನೀಡಿದರು.