ಸುನಂದಾ ಪುಷ್ಕರ್ ಹತ್ಯೆ, ದೆಹಲಿ ಪೊಲೀಸರಿಗೆ ಸುಪ್ರೀಂನಿಂದ ನೋಟಿಸ್
ನವದೆಹಲಿ, ಫೆಬ್ರವರಿ 23: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಆಗ್ರಹಿಸಿ ಬಂದಿರುವ ಮನವಿಯನ್ನು ಕೊನೆಗೂ ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಈ ಕುರಿತಂತೆ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಅಕ್ಟೋಬರ್ 26, 2017ರಂದು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು.
ಸುನಂದಾ ಪುಷ್ಕರ್ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಹಾಗೂ ಮಾಹಿತಿಯನ್ನು ಬಚ್ಚಿಡಲಾಗಿದೆ. ಹೀಗಾಗಿ, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಸಲು ಪೊಲೀಸರಿಗೆ ಸಾಧ್ಯವಾಗಿಲ್ಲ, ಇದೊಂದು ರಾಜಕೀಯ ಪ್ರೇರಿತ, ಉದ್ದೇಶಪೂರ್ವಕ ಹತ್ಯೆ ಎಂದು ಸ್ವಾಮಿ ಆರೋಪಿಸಿದ್ದರು. ಈ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿದ್ದರು.
ಆದರೆ, ಹೈಕೋರ್ಟಿನಲ್ಲಿ ಮಾನ್ಯತೆ ಸಿಗದ ಕಾರಣ, ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಸಿಬಿಐ ನಿಗಾ ವಹಿಸುವ ವಿಶೇಷ ತನಿಖಾ ದಳದಿಂದ ತನಿಖೆಗೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿ, ತನಿಖೆ ಗೆ ಆದೇಶಿಸಲು ಸಾಧ್ಯವೇ ಎಂಬುದರ ಬಗ್ಗೆ ದೆಹಲಿ ಪೊಲೀಸರಿಂದ ಮಾಹಿತಿಯನ್ನು ಕೋರಿ ನೋಟಿಸ್ ಕಳಿಸಲಾಗಿದೆ.