ಕಾವೇರಿ ನೀರು ಸ್ಕೀಂ: ರಾಜ್ಯಗಳ ಅಭಿಪ್ರಾಯ ಪಡೆಯಲು ಸುಪ್ರೀಂ ನಿರ್ಧಾರ
ನವದೆಹಲಿ, ಮೇ 17: ಕಾವೇರಿ ನೀರು ಸ್ಕೀಂ ಅನ್ನು ಅಂತಿಮಗೊಳಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಎಲ್ಲ ರಾಜ್ಯಗಳ ಸಲಹೆಗಳನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ದಕ್ಷಿಣ ಭಾರತದ ಕಾವೇರಿ ನೀರು ಫಲಾನುಭವಿ ರಾಜ್ಯಗಳ ನಡುವೆ ನೀರು ಹಂಚಿಕೆ ಸೂತ್ರವನ್ನು ವಿವಾದಗಳಿಲ್ಲದಂತೆ ನಿರ್ವಹಿಸುವ ಸಲುವಾಗಿ ಸ್ಕೀಂ ಅಂತಿಮಗೊಳಿಸುವ ಕುರಿತ ತನ್ನ ಹಿಂದಿನ ಆದೇಶವನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಬದಲಿಸಿದೆ.
ಎಲ್ಲ ಸಂಬಂಧಿತ ರಾಜ್ಯಗಳ ಸಲಹೆಯನ್ನು ಪರಿಗಣಿಸಿ ಸ್ಕೀಂಅನ್ನು ಅಂತಿಮಗೊಳಿಸುವುದಾಗಿ ನ್ಯಾಯಪೀಠ ಹೇಳಿತು. ನಾವು ತೀರ್ಪನ್ನು ನಾಳೆ (ಮೇ 18) ಪ್ರಕಟಿಸಲಿದ್ದೇವೆ. ಅದು ಸಾಧ್ಯವಾಗದಿದ್ದರೆ ಮೇ 22 ಅಥವಾ 23ರಂದು ಪ್ರಕಟಿಸಲಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡಿರುವ ಪೀಠ ತಿಳಿಸಿತು.

ರಾಜ್ಯದ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ವಿವಾದ ನ್ಯಾಯಮಂಡಳಿಯು ನೀರಿನ ಸ್ಥಿರ ಹರಿವನ್ನು ನಿಭಾಯಿಸಲು ಜಲಾಶಯದಲ್ಲಿ ಕನಿಷ್ಠ ಮಟ್ಟದ ನೀರು ಉಳಿಸಿಕೊಳ್ಳಲು ಅವಕಾಶ ನೀಡಿತ್ತು. ಆದರೆ, ಈ ವಿಚಾರದ ಬಗ್ಗೆ ಕರಡಿನಲ್ಲಿ ಪ್ರಸ್ತಾಪವೇ ಇಲ್ಲ ಎಂದು ತಿಳಿಸಿದರು.
ನ್ಯಾಯಪೀಠದ ಸೂಚನೆಯಂತೆ ಕಾಲಕಾಲಕ್ಕೆ ನೀರು ಹಂಚಿಕೆಯ ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ತಾನೇ ಪಡೆದುಕೊಳ್ಳುವಂತೆ ಕರಡನ್ನು ಮಾರ್ಪಾಡು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಪೀಠಕ್ಕೆ ಮಾಹಿತಿ ನೀಡಿದರು.












Click it and Unblock the Notifications