ಉಗ್ರರ ದಾಳಿ ಸೌದಿ ತೈಲಾಗಾರದ ಮೇಲೆ: ಅದರ ಭಾರೀ ಬೆಲೆ ಏರಿಕೆ ಎಫೆಕ್ಟ್ ಭಾರತದ ಮೇಲೆ?
ಭಾರತಕ್ಕೆ ಎರಡನೇ ಅತಿದೊಡ್ಡ ತೈಲಮೂಲ ಸೌದಿ ಅರೇಬಿಯಾ. ಅಲ್ಲಿನ, ಎರಡು ಬಹುದೊಡ್ಡ ತೈಲ ಸಂಸ್ಕರಣಾ ಘಟಕದ ಮೇಲೆ, ಯೆಮನ್ ಹೌತಿ ಬಂಡುಕೋರರು ಡ್ರೋಣ್ ದಾಳಿ ನಡೆಸಿದ್ದಾರೆ.
ಇರಾಕ್ ನಂತರ, ಭಾರತಕ್ಕೆ ಅತಿಹೆಚ್ಚು ಕಚ್ಚಾತೈಲ ಸರಬರಾಜು ಆಗುತ್ತಿರುವುದು ಸೌದಿಯಿಂದ. ಬಂಡುಕೋರರ ದಾಳಿಯಿಂದ ಅಲ್ಲಿನ ಶೇ. 55ರಷ್ಟು ತೈಲ ಉತ್ಪಾದನೆ ಸದ್ಯ ಬಂದ್ ಆಗಿದೆ. ಇದರ, ಎಫೆಕ್ಟ್, ಬರೀ ಭಾರತಕ್ಕೆ ಅಲ್ಲ, ಇಡೀ ವಿಶ್ವಕ್ಕಾಗುವ ಸಾಧ್ಯತೆಯಿದೆ ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.
ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಅರಾಮ್ಕೋ ತೈಲ ಕಂಪೆನಿಯ ಅಬ್ಕೈಕ್ ಮತ್ತು ಖುರಾಯಿಸ್ ಘಟಕಗಳ ಮೇಲೆ ದಾಳಿ ನಡೆದಿದೆ. ಇದರಿಂದ, ಪ್ರತೀದಿನ 5.7 ಮಿಲಿಯನ್ ಬ್ಯಾರಲ್ ಉತ್ಪಾದನೆ ಸೌದಿಯಲ್ಲಿ ಬಂದ್ ಆಗಿದೆ. ಇದು, ಇಡೀ ವಿಶ್ವಕ್ಕೆ ಸರಬರಾಜು ಆಗುವ ಶೇ. ಐದರಷ್ಟು ತೈಲ ಉತ್ಪಾದನೆ.
ಈ ಘಟಕಗಳ ಮೇಲೆ ದಾಳಿ ನಡೆಯುತ್ತಿದ್ದಂತೆಯೇ, ಭಾರತದ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್, ಸೌದಿ ತೈಲ ಸಂಸ್ಥೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ, ಭಾರತಕ್ಕೆ ಸಿಕ್ಕ ಆಶ್ವಾಸನೆ ಏನು?

ಪ್ರಧಾನ್ ಮಾತುಕತೆ ನಡೆಸಿದ ಬೆನ್ನಲ್ಲೇ ಸೌದಿ ತೈಲ ಸಂಸ್ಥೆಗಳ ಆಶ್ವಾಸನೆ
ಧರ್ಮೇಂದ್ರ ಪ್ರಧಾನ್ ಮಾತುಕತೆ ನಡೆಸಿದ ಬೆನ್ನಲ್ಲೇ ಸೌದಿ ತೈಲ ಸಂಸ್ಥೆಗಳು ಭಾರತಕ್ಕೆ ಆಶ್ವಾಸನೆಯನ್ನು ನೀಡಿದೆ. "ಭಾರತದ ತೈಲ ಸಂಸ್ಕರಣಾ ಘಟಕಗಳಿಗೆ ಯಾವುದೇ ರೀತಿಯಲ್ಲಿ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗುವುದಿಲ್ಲ. ನಮ್ಮ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ" ಎನ್ನುವ ವಚನವನ್ನು ನೀಡಿದೆ.

207.3 ದಶಲಕ್ಷ ಟನ್ ತೈಲ ಆಮದು ಮಾಡಿಕೊಂಡಿತ್ತು
2018-19ರ ಆರ್ಥಿಕ ವರ್ಷದಲ್ಲಿ ಭಾರತ ಒಟ್ಟು 207.3 ದಶಲಕ್ಷ ಟನ್ ತೈಲ ಆಮದು ಮಾಡಿಕೊಂಡಿತ್ತು. ಇದರಲ್ಲಿ, 40.33 ದಶಲಕ್ಷ ಟನ್ ಕಚ್ಚಾ ತೈಲವನ್ನು ಸೌದಿ ಅರೇಬಿಯಾದಿಂದ ಖರೀದಿಸಿತ್ತು, ಸೌದಿ, ತೈಲ ದಾಸ್ತಾನುಗಳಲ್ಲಿ ಶೇಖರಣೆ ಇರುವುದರಿಂದ, ಸದ್ಯಕ್ಕೆ ಜಾಗತಿಕ ತೈಲ ಸರಬರಾಜುಗಳನ್ನು ಸಮರ್ಪಕವಾಗಿ ಪೂರೈಸಬಹುದು. ಆದರೆ, ಕಚ್ಚಾತೈಲ ಬೆಲೆ ನಿಯಂತ್ರಣಕ್ಕೆ ಬರುವುದು, ಸೌದಿಯ ಉತ್ಪಾದನೆ ಸಂಪೂರ್ಣವಾಗಿ ಹಿಡಿತಕ್ಕೆ ಬಂದ ಮೇಲೆ.

ಸೌದಿಯಲ್ಲಿ ತೈಲ ಉತ್ಪಾದನೆ ಮತ್ತೆ ಸರಿದಾರಿಗೆ ಬರಲು ಹಲವು ವಾರ
ಉಗ್ರರ ದಾಳಿಯಿಂದಾಗಿ ಸೌದಿಯಲ್ಲಿ ತೈಲ ಉತ್ಪಾದನೆ ಮತ್ತೆ ಸರಿದಾರಿಗೆ ಬರಲು ಹಲವು ವಾರಗಳು ಆಗಬಹುದು. ತೈಲ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಕಮ್ಮಿಯಿದ್ದರೂ, ಮುಂದಿನ ದಿನಗಳಲ್ಲಿ ತೈಲ ಉತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಸಿಗುವುದು ಕಷ್ಟ. ಹಾಗಾಗಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುವ ಸಾಧ್ಯತೆಯಿಲ್ಲದಿಲ್ಲ.

ಸೋಮವಾರ (ಸೆ 16) ತೈಲ ಬೆಲೆಗಳು ದಾಖಲೆ ಏರಿಕೆಯಾಗಿದೆ
ಹೌತಿ ಬಂಡುಕೋರರ ಡ್ರೋನ್ ದಾಳಿಯ ಎಫೆಕ್ಟ್ ಎರಡೇ ದಿನಗಳಲ್ಲೇ ಕಂಡುಬಂದಿದೆ. ಸೋಮವಾರ (ಸೆ 16) ತೈಲ ಬೆಲೆಗಳು ದಾಖಲೆ ಏರಿಕೆ ಕಂಡಿವೆ. ಇದು 1991ರಿಂದೀಚೆಗೆ ಅತಿದೊಡ್ಡ ಏರಿಕೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇದರ ಪರಿಣಾಮ ಜನಸಾಮಾನ್ಯರಿಗೆ ತಟ್ಟವುದು ಖಚಿತ. ಈಗಾಗಲೇ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವ ಭಾರತಕ್ಕೆ, ಸೌದಿ ತೈಲ ನೆಲೆಗಳ ಮೇಲಿನ ದಾಳಿ, ಮತ್ತಷ್ಟು ದುಷ್ಪರಿಣಾಮವನ್ನು ಬೀರಬಹುದು.

ಇರಾಕ್, ಸೌದಿ ಅರೇಬಿಯಾ, ಇರಾನ್, ಅರಬ್ ಗಣರಾಜ್ಯ ಮತ್ತು ವೆನಿಜುವೆಲಾ
ಇರಾಕ್, ಸೌದಿ ಅರೇಬಿಯಾ, ಇರಾನ್, ಅರಬ್ ಗಣರಾಜ್ಯ ಮತ್ತು ವೆನಿಜುವೆಲಾ, ಭಾರತಕ್ಕೆ ತೈಲ ಸರಬರಾಜು ಮಾಡುವ ಟಾಪ್ 5 ದೇಶಗಳು. ಡ್ರೋಣ್ ದಾಳಿಯನ್ನು ತಡೆಗಟ್ಟುವ ಸೂಕ್ತ ಮಾರ್ಗಗಳನ್ನು ಸೌದಿ ಅರೇಬಿಯಾ ಕಂಡುಕೊಳ್ಳದೇ ಇದಲ್ಲಿ , ಭಾರತದಂತಹ ದೇಶ ಮುಂದಿನ ದಿನಗಳಲ್ಲಿ ಭಾರೀ ತೊಂದರೆ ಎದುರಿಸಬೇಕಾಗುತ್ತದೆ.












Click it and Unblock the Notifications