ಏರ್ ಪೋರ್ಟಲ್ಲಿ ಮಗನನ್ನ ಅನಾಥವಾಗಿ ಬಿಟ್ಟುಹೋದ ಅಮ್ಮ!
ದಾಬೋಲಿಮ್ (ಗೋವಾ), ಮೇ 11: ಇಂದು ಅಮ್ಮಂದಿರ ದಿನ. ಆದರೆ ನಾಲ್ಕು ದಿನಗಳ ಹಿಂದೆ ನಿರ್ದಯಿ ಅಮ್ಮ ಮತ್ತು ಅಪ್ಪ ತಮ್ಮ 11 ವರ್ಷದ ಮುದ್ದಿನ ಮಗನನ್ನು ದುಬೈಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಅವನ ಜೇಬಿನಲ್ಲಿ 500 ರೂ ತುರುಕಿ, ಏಕಾಂಗಿಯಾಗಿ ಬಿಟ್ಟುಹೋಗಿದ್ದಾರೆ.
ಸಮೀರ ಬಗೋಡಾ ಎಂಬ ದುರ್ದೈವಿ ಬಾಲಕ ಹೆತ್ತಮ್ಮ-ಅಪ್ಪನ ವಂಚನೆಯಿಂದ ಬಳಲಿ ಬೆಂಡಾಗಿದ್ದಾನೆ. ಪೊಲೀಸರ ತನಿಖೆಯ ಪ್ರಕಾರ ಸಮೀರ ಮತ್ತು ಅವನ ಅಪ್ಪ-ಅಮ್ಮ ಮಹಾರಾಷ್ಟ್ರದ ಸತಾರಾ ಪಟ್ಟಣದವರು ಎಂದು ತಿಳಿದುಬಂದಿದೆ. ಸಮೀರನ ಅಪ್ಪ-ಅಮ್ಮ ತಾವು ಮಾತ್ರ ದುಬೈಗೆ ಹಾರಿದ್ದು, ಮಗ ಸಮೀರನನ್ನು ವಾಪಸು ಸತಾರಾಗೆ ಹೋಗಿಬಿಡು ಎಂದು ಹೇಳಿ ಅವನ ಕೈಗೆ ಒಂದಷ್ಟು ದುಡ್ಡು, ಬಟ್ಟೆ ಬರೆ, ತಿನಿಸು ನೀಡಿ ಅವನೊಬ್ಬನನ್ನೇ ಬಿಟ್ಟು ಹೋಗಿದ್ದಾರೆ.

ಪಾಪ ಅವರಿಗೆ ಅಂತಹ ದರ್ದು ಏನಿತ್ತೋ? ಏನು ಅರ್ಜೆಂಟಿತ್ತೋ? ಅಂತೂ ಕಂದಮ್ಮನನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಬಾಲಕ ಒಬ್ಬನೇ ಅಳುತ್ತಾ ನಿಂತಿರುವುದನ್ನು ಕಂಡು ವಿಮಾನ ನಿಲ್ದಾಣದ ಅಧಿಕಾರಿಗಳು ಮೆದು ಮಾತಿನಲ್ಲಿ ವಿಚಾರಿಸಿಕೊಂಡಿದ್ದರು. ಆದರೆ ಭಯಗ್ರಸ್ಥನಾಗಿ ದಿಕ್ಕುತೋಚದಂತೆ ನಿಂತಿದ್ದ ಸಮೀರ ಏನೊಂದೂ ಹೇಳದೆ ಮೌನಕ್ಕೆ ಜಾರಿದ್ದಾನೆ.
ನಂತರ ನಿಧಾನವಾಗಿ ಅವನನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ತನ್ನ ಅಪ್ಪ-ಅಮ್ಮನ ಹೆಸರು ಶಿವಾನಿ ಮತ್ತು ಶೋಭಾ ಬಗೋಡಾ ಎಂದೂ, ಮಂಗಳವಾರ ಮಧ್ಯಾಹ್ನ ವಿಮಾನ ನಿಲ್ದಾಣಕ್ಕೆ ಬಂದಿದ್ದೆವೆಂದೂ ತಿಳಿಸಿದ್ದಾನೆ.
ನನ್ ಅಮ್ಮ ನನ್ನನ್ನೂ ದುಬೈಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದಳು. ನಾನು ದುಬೈಗೆ ಹೋಗುವ ಆಸೆಯಲ್ಲಿದ್ದೆ. ಆದರೆ ಅಮ್ಮ ಹೀಗೇಕೆ ಮಾಡಿದಳೋ ಗೊತ್ತಿಲ್ಲ ಎಂದು ತನ್ನ ವೃತ್ತಾಂತವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ.
ಗೋವಾ ಪೊಲೀಸರು ತಕ್ಷಣ ಸತಾರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಹೆಚ್ಚಿನ ಫಲ ಸಿಕ್ಕಿಲ್ಲ. ಇತ್ತ ವಿಮಾನ ನಿಲ್ದಾನದಲ್ಲಿ ಇದ್ದಬದ್ದ ದಾಖಲೆಗಳನ್ನೆಲ್ಲಾ ನೋಡಿದ್ದಾರೆ. ಏನೂ ಪ್ರಯೋಜನವಾಗಿಲ್ಲ. ಇದರಿಂದ ಬಾಲಕನ ವಿಷಯ ನಿಗೂಢವಾಗಿದೆ. ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ನೋಡಿದರೂ ಸಮೀರನ ಅಪ್ಪ-ಅಮ್ಮ ಕಾಣಿಸಿಕೊಂಡಿಲ್ಲ. ದುಬೈ ವಿಮಾನ ಪ್ರಯಾಣಿಕರ ಪಟ್ಟಿಯಲ್ಲೂ ಆವರುಗಳ ಹೆಸರುಗಳು ಕಾಣಿಸಿಕೊಂಡಿಲ್ಲ. ಹಾಗಾಗಿ ಪ್ರಕರಣ ಗೋಜಲುಗೋಜಲಾಗಿದೆ.
ಇತ್ತ ಮರಗಟ್ಟಿದಂತಾಗಿರುವ ಬಾಲಕ ಸಮೀರನಿಗೆ ಧೈರ್ಯ ತುಂಬಿರುವ ವಾಸ್ಕೋ ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಲಾರೆನ್ಸ್ ಡಿಸೋಜಾ ಅವರು ಸತಾರಾಕ್ಕೆ ತೆರಳಿ ಹೇಗಾದರೂ ಮಾಡಿ ಅವರ ಮನೆಯವರನ್ನು ಪತ್ತೆ ಹಚ್ಚುವ ಪಣ ತೊಟ್ಟಿದ್ದಾರೆ.












Click it and Unblock the Notifications