ಸ್ಯಾಮ್ ಪಿತ್ರೋಡಾ ಹೇಳಿಕೆಗೆ ರಾಹುಲ್ ಕ್ಷಮೆ ಕೇಳಲಿ : ಅಮಿತ್ ಶಾ
ನವದೆಹಲಿ, ಮಾರ್ಚ್ 24 : 'ಮುಂಬೈನಲ್ಲಿ ಭಯೋತ್ಪಾದಕರ ದಾಳಿ ನಡೆದ ಕೂಡಲೇ ಅಂದಿನ ಸರ್ಕಾರ ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಬಹುದಾಗಿತ್ತು. ಆದರೆ ಇಂಥ ಘಟನೆಗಳನ್ನು ನಿಭಾಯಿಸುವ ರೀತಿ ಅದಲ್ಲ. ಬಾಲಾಕೋಟ್ ವಾಯು ದಾಳಿಯ ಬಗ್ಗೆ ಸರ್ಕಾರ ಇನ್ನಷ್ಟು ಮಾಹಿತಿ ಕೊಡಬೇಕು' ಎಂದು ಸ್ಯಾಮ್ ಪಿತ್ರೋಡಾ ಹೇಳಿಕೆ ನೀಡಿದ್ದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತ ಮತ್ತು ಕಾಂಗ್ರೆಸ್ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಾಹುಲ್ ಗಾಂಧಿ ಅವರು ಈ ಹೇಳಿಕೆ ಕುರಿತು ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ನವದೆಹಲಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ ಅವರು ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿದರು. 'ಈ ಹೇಳಿಕೆ ಮೂಲಕ ಭದ್ರತಾ ಪಡೆಗಳು ಮತ್ತು ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಅವಮಾನ ಮಾಡಲಾಗಿದೆ' ಎಂದು ಅಮಿತ್ ಶಾ ಆರೋಪಿಸಿದ್ದಾರೆ.
'ನಾಚಿಕೆಯಾಗಬೇಕು!' ಪಿತ್ರೋಡಾಗೆ ಮೋದಿ ಅಂಥ ಖಡಕ್ ಉತ್ತರ ನೀಡಿದ್ದೇಕೆ?
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. 'ದಾಳಿಯ ಬಗ್ಗೆ ಶಂಕೆ ವ್ಯಕ್ತಪಡಿಸುವ ಮೂಲಕ ಪಿತ್ರೋಡಾ ಅವರು ಕಾಂಗ್ರೆಸ್ ಪರವಾಗಿ ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಗೆ ಚಾಲನೆ ನೀಡಿದ್ದಾರೆ' ಎಂದು ಟೀಕಿಸಿದ್ದರು....
ಮೋದಿ ಕೆಂಡಾಮಂಡಲವಾಗುವಂತೆ ಸ್ಯಾಮ್ ಪಿತ್ರೋಡಾ ನೀಡಿದ ಹೇಳಿಕೆಯೇನು?
ಅಮಿತ್ ಶಾ ಹೇಳಿಕೆ
'ದೇಶ ಎಲ್ಲವನ್ನು ನೋಡುತ್ತಿದೆ, ಸ್ಯಾಮ್ ಪಿತ್ರೋಡಾ ಅವರು ತಮ್ಮ ಹೇಳಿಕೆ ಮೂಲಕ ಭದ್ರತಾ ಪಡೆಗಳು ಮತ್ತು ಪುಲ್ವಮಾದಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ತಕ್ಷಣದ ದೇಶದ ಜನರ ಕ್ಷಮೆಯನ್ನು ಕೇಳಬೇಕು' ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒತ್ತಾಯಿಸಿದ್ದಾರೆ.
ವೋಟ್ ಬ್ಯಾಂಕ್ ರಾಜಕೀಯ
ಜೆಎನ್ಯು ಕ್ಯಾಂಪಸ್ನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣವನ್ನು ಪ್ರಸ್ತಾಪಿಸಿದ ಅಮಿತ್ ಶಾ ಅವರು, 'ದೇಶ ವಿರೋಧಿ ಘೋಷಣೆ ಕೂಗಿದಾಗ ನೀವು ಅಭಿಪ್ರಾಯ ವ್ಯಕ್ತಪಡಿಸುವ ಸಾತಂತ್ರ ಎಂದು ಹೇಳಿದಿರಿ. ನಿಮ್ಮ ವೋಟ್ ಬ್ಯಾಂಕ್ ರಾಜಕೀಯಕ್ಕೆ ಇದು ಉದಾಹರಣೆ' ಎಂದು ಟೀಕಿಸಿದ್ದಾರೆ.
ರಾಷ್ಟ್ರೀಯ ಹಿತವನ್ನು ಮರೆತಿರಿ
'ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತದೆ. ಇದೇ ಆಸಕ್ತಿ ರಾಷ್ಟ್ರೀಯ ಹಿತದ ವಿಚಾರದಲ್ಲಿ ಅವರಿಗೆ ಇಲ್ಲ. ದೇಶಕ್ಕೆ ರಕ್ಷಣೆ ನೀಡಲು, ಭಯೋತ್ಪಾದನೆಗೆ ತಕ್ಕ ಉತ್ತರ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನಾನು ದೇಶದ ಜನರಿಗೆ ಹೇಳುತ್ತೇನೆ' ಎಂದು ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಿತ್ತು
ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಸ್ಪಷ್ಟನೆಯನ್ನು ನೀಡಿತ್ತು. 'ಹೇಳಿಕೆಯು ಪಿತ್ರೋಡಾ ಅವರ ವೈಯಕ್ತಿಕ ಅಭಿಪ್ರಾಯವೇ ವಿನಾಃ ಪಕ್ಷದ ನಿಲುವಲ್ಲ' ಎಂದು ಹೇಳಿತ್ತು.