ಶಬರಿಮಲೆ: ಹೆಸರು ಬದಲಾವಣೆ ಹಿಂದಿನ ಪ್ರಮುಖ ಕಾರಣ ಇದು
ಶಬರಿಮಲೆ ಶ್ರೀ ಧರ್ಮಶಾಸ್ತ ದೇವಸ್ಥಾನವನ್ನು ಇನ್ನು ಮುಂದೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಎಂದು ಸಂಬೋಧಿಸುವುದೇ ಉಚಿತ ಎಂದು ಟ್ರಾವಂಕೂರ್ ದೇವಸ್ವಂ ಮಂಡಳಿ ತೀರ್ಮಾನಿಸಿದೆ.
ತಿರುವನಂತಪುರಂ, ನವೆಂಬರ್, 22: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಕೇರಳದ ಶಬರಿಮಲೆ ಶ್ರೀ ಧರ್ಮಶಾಸ್ತ ದೇವಸ್ಥಾನವೂ ಸಹ ಒಂದು. ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಹರಕೆ ತೀರಿಸಿಕೊಳ್ಳುತ್ತಾರೆ.
ಕೇರಳದ ಪಠಣಮಿತ್ರ ಜಿಲ್ಲೆಯಲ್ಲಿರುವ ಶ್ರೀ ಧರ್ಮಶಾಸ್ತ ದೇವಸ್ಥಾನವನ್ನು ಇನ್ನು ಮುಂದೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎಂಬ ಹೆಸರಿನಿಂದ ಸಂಬೋಧಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ.[ಬೆಂಗಳೂರಿನಿಂದ ಶಬರಿಮಲೆಗೆ ರಾಜಹಂಸ ಬಸ್ ಸಂಚಾರ]
ಟ್ರಾವಂಕೂರ್ ದೇವಸ್ವಂ ಮಂಡಳಿಯು ಹೆಸರು ಬದಲಾವಣೆ ಮಾಡುವ ತೀರ್ಮಾನ ತೆಗೆದುಕೊಂಡಿದೆ, ಶಬರಿಮಲೆ ಶ್ರೀ ಧರ್ಮಶಾಸ್ತ ದೇವಸ್ಥಾನವನ್ನು, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎಂದು ಮರುನಾಮಕರಣ ಮಾಡಿರುವುದರ ಹಿಂದೆ ರೋಚಕ ಕತೆ ಇದೆ.
ಟ್ರವಾಂಕೂರ್ ದೇವಸ್ವಂ ಮಂಡಳಿಯು ಹಲವು ಧರ್ಮಶಾಸ್ತ ದೇವಸ್ಥಾನಗಳ ನಿರ್ವಹಣೆ ಹೊಣೆ ಹೊತ್ತುಕೊಂಡಿದೆ. ಆದರೆ ಶಬರಿಮಲೆ ಶ್ರೀ ಅಯಪ್ಪ ಸ್ವಾಮಿ ದೇವಸ್ಥಾನ ಮಾತ್ರ ಅಯಪ್ಪ ಸ್ವಾಮಿಯನ್ನು ಆರಾಧಿಸುವ ಎಕೈಕ ಪುಣ್ಯಕ್ಷೇತ್ರವಾಗಿದೆ.
ಹಲವು ಶತಮಾನಗಳ ಹಿಂದೆ (ಸುಮಾರು ಕ್ರಿ.ಶ 8ನೇ ಶತಮಾನದಲ್ಲಿ) ಅಯಪ್ಪಸ್ವಾಮಿಯು ಭಕ್ತರ ಉದ್ಧಾರಕ್ಕಾಗಿ ಶಬರಿಮಲೆ ಕ್ಷೇತ್ರದಲ್ಲಿ ನೆಲೆಗೊಂಡಿರುವುದಾಗಿ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅಷ್ಟೇ ಅಲ್ಲದೆ ಶಬರಿಮಲೆ ಕ್ಷೇತ್ರವನ್ನು ಇತರೆ ಧರ್ಮಶಾಸ್ತ ದೇವಸ್ಥಾನಗಳಿಗೆ ಸಮಾನವಾಗಿ ಸ್ವಾಮಿಯ ಅನುಗ್ರಹದಿಂದ ಅನುಸಂಧಾನ ಮಾಡಲಾಗಿದೆ.
ಈ ಕಾರಣಕ್ಕಾಗಿಯೇ ಶಬರಿಮಲೆ ಕ್ಷೇತ್ರ ಧರ್ಮಶಾಸ್ತ ದೇವಸ್ಥಾನವಾಗಿದ್ದರೂ ಸಹ ಅಯ್ಯಪ್ಪ ಸ್ವಾಮಿಗಾಗಿ ಇರುವ ಏಕೈಕ ಪ್ರಸಿದ್ಧ ದೇಗುಲವಾಗಿರುವುದರಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎಂದು ಕರೆಯುವುದು ಉಚಿತ ಎಂಬುದು ಟ್ರಾವಂಕೂರ್ ದೇವಸ್ವಂ ಮಂಡಳಿಯ ಅಭಿಪ್ರಾಯ.
ಅಷ್ಟೇ ಅಲ್ಲದೆ 1950ರಲ್ಲಿ ಈ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಈ ಮೊದಲು ಇಲ್ಲಿದ್ದ ಧರ್ಮಶಾಸ್ತ ದೈವ ವಿಗ್ರಹದ ಸ್ಥಾನದಲ್ಲಿ ಅಯ್ಯಪ್ಪಸ್ವಾಮಿಯ ಮೂರ್ತಿಯ ಪಂಚಲೋಹದ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಚಿನ್ನ, ಬೆಳ್ಳಿ, ತವರ, ತಾಮ್ರ, ಮತ್ತು ಹಿತ್ತಾಳೆ ಲೋಹಗಳನ್ನು ಮಿಶ್ರಲೋಹಗಳಾಗಿ ಬಳಸಿ ದೈವ ವಿಗ್ರಹಗಳನ್ನು ತಯಾರುಮಾಡಲಾಗುತ್ತದೆ. ಇಂತಹ ವಿಶಿಷ್ಟ ಮೂರ್ತಿಯಿರುವ ಏಕೈಕ ದೇವಸ್ಥಾನ ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನವಾಗಿದೆ.