650 ಕೋಟಿ ರು. ಮರೆ ಮಾಚಿದರೇ 'ಕಾಫಿ ಡೇ' ಸಿದ್ದಾರ್ಥ್?
ನವದೆಹಲಿ, ಸೆಪ್ಟೆಂಬರ್ 25: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಹಾಗೂ ಕಾಫಿ ಡೇ ಕಂಪನಿಯ ಮಾಲೀಕರಾದ ಸಿದ್ದಾರ್ಥ್ ಅವರ ವಿವಿಧ ಕಚೇರಿಗಳು, ನಿವಾಸಗಳ ಮೇಲೆ ಮೂರು ದಿನಗಳ ಹಿಂದೆ ನಡೆದಿದ್ದ ಐಟಿ ರೈಡ್ ಸೋಮವಾರ ಮುಕ್ತಾಯಗೊಂಡಿದೆ. ಈ ವೇಳೆ, ಸಿದ್ದಾರ್ಥ್ ಅವರು ಘೋಷಿಸಿಕೊಂಡಿರುವ ಆದಾಯಕ್ಕಿಂತ ಹೆಚ್ಚುವರಿಯಾಗಿ 650 ಕೋಟಿ ರು. ಆದಾಯವನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಗುರುವಾರ (ಸೆ. 21) ಮುಂಜಾನೆ, ಬೆಂಗಳೂರಿನಲ್ಲಿರುವ ಕಾಫಿ ಡೇ ಮುಖ್ಯ ಕಚೇರಿ ಸೇರಿದಂತೆ ಚಿಕ್ಕಮಗಳೂರು, ಚೆನ್ನೈ, ಹಾಸನ, ಮುಂಬೈಗಳಲ್ಲಿರುವ ಕಾಫಿ ಡೇ ಸಂಸ್ಥೆಯ ಎಲ್ಲಾ ಕಚೇರಿಗಳ ಮೇಲೆ ಹಾಗೂ ಬೆಂಗಳೂರಿನಲ್ಲಿರುವ ಸಿದ್ದಾರ್ಥ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆಸಲಾಗಿತ್ತು.

ಇತ್ತೀಚೆಗೆ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ನಡೆದಿದ್ದ ಐಟಿ ದಾಳಿಗೆ ಸಂಬಂಧಿಸಿದಂತೆ ಅವರ ಸ್ನೇಹಿತ ನಿರಂಜನ್ ಮೇಲೆ ನಡೆಸಲಾಗಿದ್ದ ಐಟಿ ದಾಳಿಯ ಮುಂದಿನ ಭಾಗವೇ ಸಿದ್ದಾರ್ಥ್ ಅವರ ವ್ಯವಹಾರಗಳ ಮೇಲಿನ ದಾಳಿ ಎಂದು ಹೇಳಲಾಗಿದೆ.
ತಮ್ಮ ವಿರುದ್ಧ ಆಗಿರುವ ಐಟಿ ದಾಳಿಯ ಬಗ್ಗೆ ಸಿದ್ದಾರ್ಥ್ ಅವರಾಗಲೀ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಾಗಲೀ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications