ರೋಹಿಂಗ್ಯಾ ಮುಸ್ಲಿಮರಿಂದ ಭಾರತದ ಭದ್ರತೆಗೆ ಅಪಾಯ : ರಾಜನಾಥ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 13: ರೋಹಿಂಗ್ಯಾ ಮುಸ್ಲಿಮರ ಸಮಸ್ಯೆಯನ್ನು ದೃಢ ನಿರ್ಧಾರದಿಂದ ಪರಿಹರಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ರೋಹಿಂಗ್ಯಾ ಜನರು ದೇಶದ ಭದ್ರತೆಗೆ ಅಪಾಯವಾಗಿದ್ದಾರೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ರೋಹಿಂಗ್ಯಾ ಮುಸ್ಲಿಮರು ನೆಲೆ ನಿಂತಿದ್ದಾರೆ. ಇವರನ್ನು ಉಗ್ರ ಸಂಘಟನೆಗಳು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಕಳೆದ ಆಗಸ್ಟ್ ನಲ್ಲಿ ಹೇಳಿತ್ತು. ಮಾತ್ರವಲ್ಲ ರಾಜ್ಯ ಸರಕಾರಗಳು ರೋಹಿಂಗ್ಯಾ ಮುಸ್ಲಿಮರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆಯೂ ಸೂಚನೆ ನೀಡಿತ್ತು.
ಇದಾದ ಬೆನ್ನಿಗೆ ರೋಹಿಂಗ್ಯಾ ಮುಸ್ಲಿಮರ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿತ್ತು. ಈ ವಿಚಾರ ಸುಪ್ರಿಂ ಕೋರ್ಟ್ ಮೆಟ್ಟಿಲನ್ನೂ ಹತ್ತಿತ್ತು.
ಕಳೆದ ತಿಂಗಳು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ದೇಶದಲ್ಲಿ 40 ಸಾವಿರ ರೋಹಿಂಗ್ಯಾ ಮುಸ್ಲಿಮರು ನೆಲೆಸಿದ್ದಾರೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದರು. ಇದರಲ್ಲಿ ಹೆಚ್ಚಿನ ಜನರು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ ನೆಲಿಸಿದ್ದಾರೆ ಎಂದು ಹೇಳಿದ್ದರು.
ದೇಶದ ಸೀಮಿತ ಸಂಪನ್ಮೂಲಗಳನ್ನು ಈ ಜನರು ಬಳಸಿಕೊಳ್ಳುವುದರಿಂದ ದೇಶದ ಜನರಿಗೆ ಅನ್ಯಾಯವಾಗುತ್ತಿದೆ ಎಂದೂ ಕೇಂದ್ರ ಗೃಹ ಇಲಾಖೆ ಈ ಹಿಂದೆ ಹೇಳಿತ್ತು.
ಮಯನ್ಮಾರ್ ನ ರಖಿನೆ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಿರುವ ರೋಗಿಂಗ್ಯಾ ಸಮುದಾಯದವರ ಮೇಲೆ ದಾಳಿಗಳು ನಡೆಯುತ್ತಿದ್ದ, ಈ ಜನರು ವಿಶ್ವದ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿದ್ದಾರೆ. ಇದೇ ರೀತಿ ಭಾರತಕ್ಕೂ ಬಂದಿದ್ದಾರೆ.