ಇತಿಹಾಸವನ್ನು ಹೊಸದಾಗಿ ಬರೆಯಿರಿ, ಕೇಂದ್ರ ಸರ್ಕಾರ ನಿಮಗೆ ಬೆಂಬಲಿಸುತ್ತದೆ: ಚರಿತ್ರಕಾರರಿಗೆ ಅಮಿತ್ ಶಾ ಭರವಸೆ
ನವದೆಹಲಿ, ನವೆಂಬರ್ 25: ಭಾರತೀಯ ಮನೋಧರ್ಮದ ಮೂಲಕ ನೋಡುವ ಇತಿಹಾಸವನ್ನು ಹೊಸದಾಗಿ ಬರೆಯಿರಿ. ಕೇಂದ್ರ ಸರ್ಕಾರ ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚರಿತ್ರಕಾರರಿಗೆ ತಿಳಿಸಿದರು.
17ನೇ ಶತಮಾನದ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 400ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ಭೂಪೇಂದ್ರ ಪಟೇಲ್ ಗುಜರಾತ್ ಸಿಎಂ ಅಭ್ಯರ್ಥಿ: ಕೇಂದ್ರ ಸಚಿವ ಅಮಿತ್ ಶಾ
'ನಾನು ಇತಿಹಾಸದ ವಿದ್ಯಾರ್ಥಿಯಾಗಿದ್ದವನು. ನಮ್ಮ ಇತಿಹಾಸವನ್ನು ಸರಿಯಾಗಿ ಪ್ರಸ್ತುತಪಡಿಸಲಾಗಿಲ್ಲ. ಚರಿತ್ರೆಯನ್ನು ತಿರುಚಲಾಗಿದೆ ಎಂದು ನಾನು ಬಹಳಷ್ಟು ಬಾರಿ ಕೇಳುದ್ದೇನೆ. ಇದು ಸರಿಯಾಗಿಬೇಕಿದೆ. ಅದನ್ನು ನಾವು ಸರಿ ಮಾಡಬೇಕಿದೆ' ಎಂದು ಅಸ್ಸಾಂ ಸರ್ಕಾರದ ಸಮಾರಂಭದಲ್ಲಿ ಹೇಳಿದರು.
ಚರಿತ್ರೆಯ ವೈಭವಗಳ ಬಗ್ಗೆ ಬರೆಯಿರಿ
ನಮ್ಮ ಇತಿಹಾಸವನ್ನು ಸರಿಯಾಗಿ ಪ್ರಸ್ತುತಪಡಿಸಿರಿ. ವೈಭವಯುತವಾಗಿ ಬರೆಯಿರಿ. ಇದನ್ನು ಯಾರು ತಡೆಯುತ್ತಿದ್ದಾರೆಂದು ನಾನು ನಿಮ್ಮನ್ನು ಕೇಳುತ್ತೇನೆ ಎಂಬುದಾಗಿ ಶಾ ತಿಳಿಸಿದರು.
ಇಲ್ಲಿ ಕುಳಿತಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಈಗಿನ ಇತಿಹಾಸ ಸರಿಯಿಲ್ಲ ಎಂಬುದನ್ನು ಅರಿಯಬೇಕು. ಈಗಿನ ಇತಿಹಾಸದ ನಿರೂಪಣೆಗಳನ್ನು ನೀವು ಬದಲಿಸಬೇಕೆಂದು ವಿನಂತಿಸುತ್ತೇನೆ ಎಂದು ಶಾ ಹೇಳಿದರು.
ದೇಶದಲ್ಲಿ 150 ವರ್ಷಗಳ ಕಾಲ ಆಳಿದ 30 ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಗಣ್ಯ ವ್ಯಕ್ತಿಗಳ ಬಗ್ಗೆ ಸಂಶೋಧನೆ ಮಾಡಲು ಪ್ರಯತ್ನಿಸಿ ಎಂದೂ ಅವರು ತಿಳಿಸಿದರು.
ಇದನ್ನು ನೀವು ಒಮ್ಮೆ ಬರೆದರೆ ಸಾಕು. ಆ ನಂತರ ಯಾವುದೇ ಸುಳ್ಳು ನಿರೂಪಣೆಗಳಿಗೆ ಅವಕಾಶ ಇರುವುದಿಲ್ಲವೆಂದು ಹೇಳಿದರು.
ಕೇಂದ್ರ ಸರ್ಕಾರ ಬೆಂಬಲ ನೀಡುತ್ತದೆ
ಇಲ್ಲಿ ಹಾಜರಿರುವ ಇತಿಹಾಸಕಾರರು ಮತ್ತು ವಿದ್ಯಾರ್ಥಿಗಳ ಸಂಶೋಧನೆಗೆ ಕೇಂದ್ರ ಸರ್ಕಾರವು ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.
'ಮುಂದೆ ಬನ್ನಿ, ಸಂಶೋಧನೆ ಮಾಡಿ ಮತ್ತು ಇತಿಹಾಸವನ್ನು ಮತ್ತೆ ಬರೆಯಿರಿ. ಈ ರೀತಿಯಾಗಿ ನಾವು ಭವಿಷ್ಯದ ಪೀಳಿಗೆಗೂ ಸ್ಫೂರ್ತಿ ನೀಡಬಹುದು' ಎಂದು ಅವರು ಹೇಳಿದರು.
ನಮ್ಮ ಇತಿಹಾಸ ನಮ್ಮದೇ ಜನರಿಗೆ ಹೆಚ್ಚು ಪ್ರಯೋಜನ ನೀಡಬೇಕು. ಈಗ ಇತಿಹಾಸದ ಹಾದಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ತಿಳಿಸಿದರು.
ಅಹೋಮ್ ಜನರಲ್ ಲಚಿತ್ ಬರ್ಫುಕನ್ ಪಾತ್ರ ದೊಡ್ಡದು
ಮೊಘಲ್ ಸಾಮ್ರಾಜ್ಯ ವಿಸ್ತರಣೆಯನ್ನು ತಡೆಯುವಲ್ಲಿ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಪಾತ್ರ ದೊಡ್ಡದು ಎಂದು ಅಮಿತ್ ಶಾ ಹೇಳಿದರು. ಸರಿಘಾಟ್ ಯುದ್ಧದ ಸಮಯದಲ್ಲಿ ಅನಾರೋಗ್ಯದ ಹೊರತಾಗಿಯೂ ಮೊಘಲರನ್ನು ಸೋಲಿಸಿದರು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ಮತ್ತು ಭಾರತದ ಉಳಿದ ಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡಿದ್ದಾರೆ. ಸರ್ಕಾರದ ಪ್ರಯತ್ನದಿಂದ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸಿದೆ ಎಂದರು.
ಲಚಿತ್ ಬರ್ಫುಕನ್ ಕುರಿತಾದ ಪುಸ್ತಕಗಳನ್ನು ಕನಿಷ್ಠ 10 ಭಾಷೆಗಳಲ್ಲಿ ಅನುವಾದಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಶಾ ಒತ್ತಾಯಿಸಿದರು. ಲಚಿತ್ ಅವರ ಶೌರ್ಯದ ಬಗ್ಗೆ ದೇಶದ ಜನರು ತಿಳಿದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಲಚಿತ್ ಕುರಿತ ಸಾಕ್ಷ್ಯಚಿತ್ರವನ್ನು ಉದ್ಘಾಟಿಸಿದರು.
ಹಿಂದಿ ದೇಶ ಭಾಷೆಯಾಗಬೇಕು ಎಂದಿದ್ದ ಅಮಿತ್ ಶಾ
ಹಿಂದಿ ದೇಶ ಭಾಷೆಯಾಗಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾ ಈ ಹಿಂದೆ ಹೇಳಿದ್ದರು. ಭಾರತವನ್ನು ಪ್ರತಿನಿಧಿಸಲು ಒಂದು ಭಾಷೆಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಹಿಂದಿಯನ್ನು ಪ್ರಾಥಮಿಕ ಭಾಷೆಯನ್ನಾಗಿ ಮಾಡಬೇಕಿದೆ. ಮಹಾತ್ಮ ಗಾಂಧಿ ಹಾಗೂ ಸರ್ದಾರ್ ಪಟೇಲರು ಹಿಂದಿ ಬಗ್ಗೆ ಕನಸು ಕಂಡಿದ್ದರು. ಅವರ ಕನಸನ್ನು ನನಸು ಮಾಡಬೇಕಿದೆ ಎಂದು ಶಾ ತಿಳಿಸಿದ್ದರು. ಇದು ದೇಶದಲ್ಲಿ ವಿವಾದವನ್ನು ಹುಟ್ಟುಹಾಕಿತ್ತು. ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ತೆಲಂಗಾಣ ಸರ್ಕಾರಗಳು ಅಮಿತ್ ಶಾ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದವು. ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಅಭಿಯಾನವನ್ನೇ ಹಮ್ಮಿಕೊಳ್ಳಲಾಗಿತ್ತು.