ವಿಐಪಿ ದರ್ಶನ: ತಿರುಪತಿಯಲ್ಲಿ ಆಗದೇ ಇದ್ದದ್ದು ಶಬರಿಮಲೆಯಲ್ಲಿ ಸಾಧ್ಯವಾಯಿತು
ಕೊಚ್ಚಿ (ಕೇರಳ) ಡಿಸೆಂಬರ್ 7: ಭಾರತ ಅತ್ಯಂತ ಸುಪ್ರಸಿದ್ಧ ದೇವಸ್ಥಾನಗಳನ್ನು ಹೊಂದಿದೆ. ಅವುಗಳಲ್ಲಿ ಆಂಧ್ರಪ್ರದೇಶದ ತಿರುಮಲ ಹಾಗೂ ಕೇರಳದ ಶಬರಿಮಲೆ ಕೂಡ ಸೇರಿವೆ. ಈ ಧಾರ್ಮಿಕ ಕ್ಷೇತ್ರಗಳಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸರತಿ ಸಾಲಿನಲ್ಲಿ ನಿಂತು ಗಂಟೆಗಳವರೆಗೆ ಕಾದು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಆದರೆ ಕೆಲವರಿಗೆ ದೇವಸ್ಥಾನಗಳಲ್ಲಿ ವಿಶೇಷ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇದನ್ನು ಗಮನಿಸಿದ ಕೇರಳ ಹೈಕೋರ್ಟ್ ಆದೇಶವೊಂದನ್ನು ಹೊರಡಿಸಿದೆ.
ಅದೇನೆಂದರೆ, ದೇವರ ಮುಂದೆ ಎಲ್ಲರೂ ಒಂದೇ. ಹೀಗಾಗಿ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಜನರಿಗೆ ಹೆಲಿಕಾಪ್ಟರ್ ಅಥವಾ ವಿಐಪಿ ದರ್ಶನ ನೀಡಬಾರದು ಎಂದು ಕೇರಳ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ದೇವಸ್ಥಾನದಲ್ಲಿ ಯಾರಿಗೂ ವಿಶೇಷ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ಆದೇಶವನ್ನು ಜನಸಾಮಾನ್ಯರೂ ಒಪ್ಪಿಕೊಂಡಿದ್ದಾರೆ.
ದೇವಸ್ಥಾನಗಳಿಗೆ ಭೇಟಿ ನೀಡುವ ಎಲ್ಲಾ ಭಕ್ತರು ಒಂದೇ. ಯಾರಿಗೂ ವಿಶೇಷ ದರ್ಶನದ ಅವಕಾಶ ನೀಡುವ ಅವಶ್ಯಕತೆ ಇಲ್ಲ ಎನ್ನುವ ಆದೇಶ ಅಥವಾ ನಿಯಮವನ್ನು ಕೇರಳ ಸರ್ಕಾರ ಮಾಡಬಹುದಾಗಿತ್ತು. ಆದರೆ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲೊಂದಾಗಿರುವ ಶಬರಿಮಲೆಯದಲ್ಲಿ ಅದಾಗಲಿಲ್ಲ. ಇತ್ತ ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ದೇವಾಲಯವಾದ ತಿರುಪತಿಯಲ್ಲಿಯೂ ಇಂತಹ ಯಾವುದೇ ನಿಯಮವನ್ನೂ ಆಂಧ್ರಪ್ರದೇಶ ಸರ್ಕಾರ ಹೊರಡಿಸಿಲ್ಲ. ಆದರೆ ಸರ್ಕಾರದ ಆದೇಶಕ್ಕೂ ಮುನ್ನ ನ್ಯಾಯಾಲಯವೇ ಶಬರಿಮಲೆಯಲ್ಲಿ ವಿಐಪಿ ದರ್ಶನಕ್ಕೆ ನಿರ್ಬಂಧ ಹೇರಿದೆ. ಈ ಆದೇಶವನ್ನು ಜನಸಾಮಾನ್ಯರೂ ಸ್ವೀಕರಿಸಿದ್ದಾರೆ.
ಅಳುವ ಮಕ್ಕಳ ಕಿರಿಕಿರಿ ತಪ್ಪಿಸಲು ಕೇರಳ ಚಿತ್ರಮಂದಿರಗಳಲ್ಲಿ 'ಕ್ರೈ ರೂಮ್'
ಶಬರಿಮಲೆ ಯಾತ್ರಾರ್ಥಿಗಳಿಗೆ ಖಾಸಗಿ ಏಜೆನ್ಸಿಯೊಂದು ಹೆಲಿಕಾಪ್ಟರ್ ಸೇವಾ ಪ್ಯಾಕೇಜ್ಗಳ ಬಗ್ಗೆ ಜಾಹೀರಾತು ನೀಡಿತ್ತು. ಈ ವಿಚಾರವನ್ನು ಕಳೆದ ತಿಂಗಳು ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ತೆಗೆದುಕೊಂಡು ಈ ಆದೇಶ ನೀಡಿದೆ.
ಎನ್ಹಾನ್ಸ್ ಏವಿಯೇಷನ್ ಸರ್ವಿಸಸ್ ಲಿಮಿಟೆಡ್, ಶಬರಿಮಲೆ ಯಾತ್ರಾರ್ಥಿಗಳಿಗೆ ವಿಶೇಷ ಹೆಲಿಕಾಪ್ಟರ್ ಸೇವೆಗಳನ್ನು ನೀಡುತ್ತಿದೆ ಎಂದು ಅದರ ವೆಬ್ಸೈಟ್ 'helikerala.com' ನಲ್ಲಿ ಹಂಚಿಕೊಂಡಿತ್ತು. ಕೆಲ ದಿನಗಳ ಹಿಂದೆ ಎರ್ನಾಕುಲಂನಿಂದ ಶಬರಿಮಲೆಗೆ ಹೆಲಿಕಾಪ್ಟರ್ ಸೇವೆ ನೀಡುವ ವಾಣಿಜ್ಯ ಜಾಹೀರಾತನ್ನು 'ಎನ್ಹಾನ್ಸ್ ಏವಿಯೇಷನ್' ಪ್ರಕಟಿಸಿತ್ತು. ಜಾಹೀರಾತು ಸುದ್ದಿಯಾದ ನಂತರ, ನ್ಯಾಯಾಲಯವು ಅದರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ತೆಗೆದುಕೊಂಡಿತು. ಈ ಕುರಿತು ವಿಮಾನಯಾನ ಸಂಸ್ಥೆ ಹಾಗೂ ಸರ್ಕಾರದಿಂದ ವಿವರಣೆ ಕೇಳಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ.
ಮಂಗಳವಾರದ ತನ್ನ ಆದೇಶದಲ್ಲಿ, ಸನ್ನಿಧಾನದಲ್ಲಿ ಯಾವುದೇ ವ್ಯಕ್ತಿಗೆ ವಿಶೇಷ ಸ್ಥಾನಮಾನ ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ. "ಪ್ರತಿಯೊಬ್ಬ ಯಾತ್ರಾರ್ಥಿಯು ನಿಲಕ್ಕಲ್ ತಲುಪಿದ ನಂತರ ಒಬ್ಬ ಸಾಮಾನ್ಯ ಅಯಪ್ಪನ ಭಕ್ತನಾಗುತ್ತಾನೆ. ಅವರು ಯಾವುದೇ ವಿಐಪಿ ವಿಶೇಷ ದರ್ಶನವನ್ನೂ ಪಡೆಯುದಿಲ್ಲ"ಎಂದು ನ್ಯಾಯಾಲಯ ಹೇಳಿದೆ.
ಶಬರಿಮಲೆಯಲ್ಲಿ ವಿಐಪಿಗಳಿಗೆ ನಿರ್ಬಂಧ ಹೇರಿರುವ ಆದೇಶ, ತಿರುಪತಿಯಲ್ಲಿಯೂ ಅನುಷ್ಠಾನಗೊಳ್ಳಬೇಕೆಂಬುದು ಸಾಮಾನ್ಯರ ಬೇಡಿಕೆಯಾಗಿದೆ. ಕೇರಳ ಹೈಕೋರ್ಟ್ನ ಈ ತೀರ್ಪು, ದೇಶದ ದೇವಾಲಯಗಳಲ್ಲಿನ ವಿಐಪಿ ದರ್ಶನದ ನಿರ್ಬಂಧಕ್ಕೆ ಮುನ್ನುಡಿ ಬರೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಪ್ರಮುಖವಾಗಿ, ಅತಿ ಹೆಚ್ಚು ಭಕ್ತರನ್ನು ಹೊಂದಿರುವ ತಿರುಪತಿ ದೇವಸ್ಥಾನದಲ್ಲಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಶ್ರೀಮಂತರು, ಸ್ಟಾರ್ ಆಟಗಾರರಿಗೆ ವಿಐಪಿ ದರ್ಶನದ ಅವಕಾಶವನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆಯಿಂದ ಸಾಮಾನ್ಯ ಭಕ್ತರು ದಿನಗಟ್ಟಲೇ ಕಾದು ದೇವರ ದರ್ಶನ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಐಪಿ ದರ್ಶನಕ್ಕೆ ನಿರ್ಬಂಧ ಹೇರಬೇಕೆಂಬುದು ಸಾಮಾನ್ಯ ಭಕ್ತರ ಒತ್ತಾಯವಾಗಿದೆ. ಇದನ್ನು ಆಂದ್ರ ಪ್ರದೇಶ ಸರ್ಕಾರವು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬ ಮಾತುಗಳೂ ಕೇಳಿಬಂದಿವೆ.