ಉಗ್ರ ಆರಿಫ್ ಅರ್ಜಿ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್
ನವದೆಹಲಿ, ಜನವರಿ 19 : ನವದೆಹಲಿಯ ಕೆಂಪು ಕೋಟೆ ಮೇಲಿನ ಉಗ್ರರ ದಾಳಿಯ ರೂವಾರಿ ಮೊಹಮದ್ ಆರೀಫ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಉಗ್ರರ ದಾಳಿ ಪ್ರಕರಣದಲ್ಲಿ ಆರಿಫ್ಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ಅದನ್ನು ಪ್ರಶ್ನಿಸಿ ಆತ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ.
2000 ಇಸವಿಯಲ್ಲಿ ಕೆಂಪುಕೋಟೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 25, 2000ದಲ್ಲಿ ಆರಿಫ್ನನ್ನು ಬಂಧಿಸಲಾಗಿತ್ತು. 2005ರ ಅಕ್ಟೋಬರ್ 24ರಂದು ಕೆಳಹಂತದ ನ್ಯಾಯಾಲಯ ಆರಿಫ್ಗೆ ಗಲ್ಲು ಶಿಕ್ಷೆ ವಿಧಿಸಿತು. [ಗಣರಾಜ್ಯೋತ್ಸವಕ್ಕಾಗಿ ಶ್ವಾನಗಳ ತಾಲೀಮು : ಚಿತ್ರಗಳು]

ಇದನ್ನು ಪ್ರಶ್ನಿಸಿ ಆರಿಫ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ. 2007ರ ಡಿಸೆಂಬರ್ 13ರಂದು ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಕಾನೂನು ಹೋರಾಟ ಮುಂದುವರೆಸಿದ ಆರಿಫ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ. [ಜನವರಿ ಅಂತ್ಯಕ್ಕೆ ಭಾರತ-ಪಾಕ್ ಶಾಂತಿ ಮಾತುಕತೆ?]
2011 ಆಗಸ್ಟ್ 10ರಂದು ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತು. ಪುನಃ ಸುಪ್ರೀಂಕೋರ್ಟ್ ಮೊರೆ ಹೋದ ಆರಿಫ್ ನಾನು 13 ವರ್ಷದ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದೇನೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಎಂದು ಅರ್ಜಿ ಸಲ್ಲಿಸಿದ.
ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ 2014ರಲ್ಲಿ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿತು. ಈಗ ಪುನಃ ಕೋರ್ಟ್ ಆರಿಫ್ ಅರ್ಜಿಯ ವಿಚಾರಣೆಯನ್ನು ನಡೆಸಲು ಒಪ್ಪಿಗೆ ನೀಡಿದೆ. ಪ್ರತಿದಿನ ನಡೆಯುವ ಕಲಾಪದ ಜೊತೆಯೇ ಆರಿಫ್ ಅರ್ಜಿಯ ವಿಚಾರಣೆ ನಡೆಯಲಿದೆ.












Click it and Unblock the Notifications