ಕರುಣಾನಿಧಿ, ಯಡಿಯೂರಪ್ಪ ಚಿನ್ನತಂಬಿ, ಪೆರಿಯತಂಬಿ ಆದ ವೃತ್ತಾಂತ
Recommended Video

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಇಂದು (ಆ 7) ವಿಧಿವಶರಾಗಿದ್ದಾರೆ. ಆ ಮೂಲಕ, ದೇಶದ ಸೀಸನ್ ಪೊಲಿಟಿಸಿಯನ್ಸ್ ಒಬ್ಬರ ಯುಗಾಂತ್ಯವಾಗಿದೆ. ಅಸಂಖ್ಯಾತ ಅಭಿಮಾನಿಗಳು, ಕಾರ್ಯಕರ್ತರು ಕಂಬನಿ ಮಿಡಿಯುತ್ತಿದ್ದಾರೆ.
ಕರ್ನಾಟಕದೊಂದಿಗೆ ಮತ್ತು ಇಲ್ಲಿನ ರಾಜಕಾರಣಿಗಳೊಂದಿಗೆ ಕರುಣಾನಿಧಿಯವರ ಸಂಬಂಧ ಹೇಗಿತ್ತು ಎಂದು ಅವಲೋಕನ ಮಾಡುವುದಾದರೆ, ದಿವಂಗತ ಜಯಲಲಿತಾ ಅವರ ಅವಧಿಯಲ್ಲಿದ್ದಷ್ಟು ಟೆನ್ಸನ್ ಎರಡು ರಾಜ್ಯಗಳ ನಡುವೆ ಅಷ್ಟಾಗಿ ಇರಲಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ದಕ್ಷಿಣಭಾರತದಲ್ಲಿ ಮೊತ್ತ ಮೊದಲಬಾರಿಗೆ ಅಧಿಕಾರಕ್ಕೆ ಬಂದ ಸಮಯವದು, ಕಾವೇರಿ ಮತ್ತು ಹೊಗೇನಕಲ್ ವಿಚಾರದಲ್ಲಿ ತಮಿಳರ ರಗಳೆ ವಿಪರೀತವಾಗಿತ್ತು. ಕನ್ನಡಪರ ಸಂಘಟನೆಗಳು ಇಲ್ಲಿ, ತಮಿಳು ಸಂಘಟನೆಗಳು ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದವು.
ಆ ವೇಳೆ, ಪ್ರತಿಮೆ ಅನಾವರಣ ಕಾರ್ಯಕ್ರಮವೊಂದು ಉಭಯ ರಾಜ್ಯಗಳ ನಡುವಣ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯಿತು. ಖುದ್ದು, ಅಂದಿನ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ಇಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರನ್ನು 'ಚಿನ್ನತಂಬಿ' ಎಂದು ಕರೆದು ತಮಿಳು-ಕನ್ನಡಿಗರ ನಡುವೆ ಸೌಹಾರ್ದತೆಯಿರಲಿ ಎಂದು ಸಾರಿದ್ದರು.
ಈ ಘಟನೆ, ಎರಡು ರಾಜ್ಯಗಳ ಕಟ್ಟಾ ಭಾಷಾಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದರೂ, ರಾಷ್ಟ್ರಮಟ್ಟದಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಪ್ರಶಂಸೆಗೊಳಗಾಗಿತ್ತು. ಎರಡು ರಾಜ್ಯಗಳ ಸಿನಿಮಾ ರಂಗವೂ ಇದಕ್ಕೆ ಜೈ ಅಂದಿತ್ತು.

ಸರ್ವಜ್ಞ ಮತ್ತು ತಿರುವಳ್ಳುವರ್
ರಾಷ್ಟಕಂಡ ಮಹಾಕವಿಗಳಾದ ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರು ಮತ್ತು ಚೆನ್ನೈನಲ್ಲಿ ಅನಾವರಣ ಮಾಡಲು ಕರ್ನಾಟಕ ಮತ್ತು ತಮಿಳುನಾಡು ಸರಕಾರ ನಿರ್ಧರಿಸಿತ್ತು. ಇದನ್ನು ಎರಡು ರಾಜ್ಯಗಳ ನಡುವಣ ಆಡಳಿತಾತ್ಮಕ ಪ್ರಕ್ರಿಯೆ ಎಂದು ಹೇಳಬಹುದಾಗಿದ್ದರೂ, ಕರುಣಾನಿಧಿ ಮತ್ತು ಯಡಿಯೂರಪ್ಪ ಅಂದಿನ ಪ್ರತಿಮೆ ಅನಾವರಣ ಕಾರ್ಯಕ್ರಮಗಳಲ್ಲಿ ಇನ್ನೂ ಹೆಜ್ಜೆ ಮುಂದೆ ಹೋಗಿದ್ದರು. ಪ್ರತಿಮೆ ಅನಾವರಣಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಇದೇ.

ಹದಿನಾರನೇ ಶತಮಾನದ ದಾರ್ಶನಿಕ, ಕವಿ ಸರ್ವಜ್ಞ
ಹದಿನಾರನೇ ಶತಮಾನದ ದಾರ್ಶನಿಕ, ಕವಿ ಸರ್ವಜ್ಞ ಅವರ ಪ್ರತಿಮೆಯನ್ನು ಆಗಸ್ಟ್ 14, 2009ರಲ್ಲಿ ಯಡಿಯೂರಪ್ಪ ಮತ್ತು ಕರುಣಾನಿಧಿ ಜಂಟಿಯಾಗಿ ಚೆನ್ನೈನಲ್ಲಿ ಅನಾವರಣಗೊಳಿಸಿದ್ದರು. ಇದಕ್ಕೆ ಐದು ದಿನ ಮೊದಲು ಬೆಂಗಳೂರಿನ ಹಲಸೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.

ಕವಿಗಳ ವಚನಗಳನ್ನು ನಾವು ಜೀವನದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ
ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಾಹಿತಿಯೂ ಆಗಿರುವ ಕರುಣಾನಿಧಿ, ಈ ಇಬ್ಬರು ಮಹಾನ್ ಕವಿಗಳ ವಚನಗಳನ್ನು ನಾವು ನಮ್ಮನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ. ಉಭಯ ರಾಜ್ಯಗಳು ಒಂದೊಳ್ಳೆ ಕೆಲಸಕ್ಕೆ ಮುಂದಾಗಿದೆ, ನೀವು (ಯಡಿಯೂರಪ್ಪನವರತ್ತ ಬೊಟ್ಟುಮಾಡಿ) ನನ್ನ ಚಿನ್ನತಂಬಿ ಇದ್ದಹಾಗೇ ಎಂದು ಹೇಳಿದ್ದರು.

ನೀವು ನನ್ನ ಪೆರಿಯಣ್ಣ, ಯಡಿಯೂರಪ್ಪ
ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬೆಂಗಳೂರಿಗೆ ಬಂದಿದ್ದಕ್ಕೆ ನಿಮಗೆ ಧನ್ಯವಾದಗಳು. ಸರ್ವಜ್ಞ ಮತ್ತು ತಿರುವಳ್ಳುವರ್ ಈ ನಾಡು ಕಂಡ ಅಪ್ರತಿಮ ದಾರ್ಶನಿಕರು. ನೀವು ನನ್ನನ್ನು ಚಿನ್ನತಂಬಿ ಎಂದು ಕರೆದಿದ್ದಕ್ಕೆ ನನ್ನ ಹೃದಯ ತುಂಬಿಬಂದಿದೆ. ನೀವು ನನ್ನ ಪೆರಿಯಣ್ಣ ಎಂದು ಹೇಳಿದ್ದರು.

ಕಿಡಿಕಾರಿದ್ದ ವಾಟಾಳ್ ನಾಗರಾಜ್
ಕನ್ನಡಿಗರ ಸ್ವಾಭಿಮಾನದ ಜೊತೆ ಆಟವಾಡುತ್ತಿರುವ ಚಿನ್ನತಂಬಿ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅನರ್ಹರು. ಮುಖ್ಯಮಂತ್ರಿ ಅವರನ್ನು ಇನ್ನು ಮುಂದೆ ಯಡಿಯೂರಪ್ಪ ಎಂದು ಕರೆಯುವುದಿಲ್ಲ ಬದಲಾಗಿ 'ಚಿನ್ನತಂಬಿ' ಎಂದು ಕರೆಯುತ್ತೇನೆ. ಚಿನ್ನತಂಬಿ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ತಮಿಳುನಾಡಿನ ಉಪ ಮುಖ್ಯಮಂತ್ರಿಯೋ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications