ಆರ್ ಬಿಐನಿಂದ ಕೇಂದ್ರ ಸರಕಾರಕ್ಕೆ 28 ಸಾವಿರ ಕೋಟಿ ಮಧ್ಯಂತರ ಲಾಭಾಂಶ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸೋಮವಾರದಂದು ಮಧ್ಯಂತರ ಲಾಭಾಂಶವಾಗಿ ಕೇಂದ್ರ ಸರಕಾರಕ್ಕೆ 28 ಸಾವಿರ ಕೋಟಿ ಘೋಷಣೆ ಮಾಡಿದೆ. ಹಣಕಾಸು ಸಚಿವಾಲಯದ ಜತೆಗೆ ಬಜೆಟ್ ನಂತರ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. 2018-19ರಲ್ಲಿ ಒಟ್ಟಾರೆಯಾಗಿ ಸರಕಾರಕ್ಕೆ ವರ್ಗಾವಣೆ ಮಾಡಿರುವ ಮೊತ್ತ 68 ಸಾವಿರ ಕೋಟಿ ರುಪಾಯಿ ಆಗಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ಮಧ್ಯಂತರ ಲಾಭಾಂಶದ ಬಗ್ಗೆ ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದಿದ್ದರು. ಆರ್ ಬಿಐನ ಕೇಂದ್ರೀಯ ಮಂಡಳಿಯಿಂದ ಅಲ್ಲ, ಸಮಿತಿಯು ಮಧ್ಯಂತರ ಲಾಭಾಂಶ ವಿತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದರು.
ಸಭೆಯಲ್ಲಿ ಕೇಂದ್ರ ಬಜೆಟ್ ನ ಮುಖ್ಯಾಂಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಸರಕಾರಕ್ಕೆ 2018-19ರ ಆರ್ಥಿಕ ವರ್ಷದಲ್ಲಿ ಆರ್ ಬಿಐ ನಲವತ್ತು ಸಾವಿರ ಕೋಟಿ ನೀಡಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಈ ತಿಂಗಳ ಆರಂಭದಲ್ಲಿ ಈ ಬಗ್ಗೆ ಹೇಳಿದ್ದರು. ಫೆಬ್ರವರಿ ಒಂದರಂದು ಕೇಂದ್ರ ಮಧ್ಯಂತರ ಬಜೆಟ್ ಆದ ನಂತರದ ಮೊದಲ ಭೇಟಿ ಇದಾಗಿದೆ.

ಜುಲೈನಿಂದ ಜೂನ್ ತನಕ ಕೇಂದ್ರ ಬ್ಯಾಂಕ್ ನ ಆರ್ಥಿಕ ವರ್ಷ. ಮೊದಲ ಆರು ತಿಂಗಳ ಅವಧಿಯ ಲೆಕ್ಕ ಪರಿಶೋಧನೆ ವರದಿ ಬಂದ ನಂತರ ಅಂತಿಮವಾಗಿ ಮಧ್ಯಂತರ ಲಾಭಾಂಶ ಎಷ್ಟು ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಗಿದೆ. ಮೊದಲ ಅರ್ದ ವರ್ಷ ದಿಸೆಂಬರ್ 31, 2018ರ ಅಂತ್ಯಕ್ಕೆ ಕೊನೆಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಜೂನ್ 2017ರ ಅಂತ್ಯಕ್ಕೆ 30,659 ಕೋಟಿ ರುಪಾಯಿ ಲಾಭಾಂಶ ನೀಡಲಾಗಿತ್ತು. ಈ ಮೊತ್ತ ಅದಕ್ಕೂ ಹಿಂದಿನ ಆರ್ಥಿಕ ವರ್ಷಕ್ಕಿಂತ 63% ಹೆಚ್ಚಾಗಿತ್ತು (2016-17). ಏಪ್ರಿಲ್- ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚೆ ಆರ್ಥಿಕ ಸ್ಥಿತಿಗೆ ಚೈತನ್ಯ ತುಂಬುವುದಕ್ಕೆ ಇದರಿಂದ ಅನುಕೂಲ ಆಗುತ್ತದೆ.
ಸರಕಾರವು 3.4 ಪರ್ಸೆಂಟ್ ವಿತ್ತೀಯ ಕೊರತೆ 2019-20ರ ಅವಧಿಗೆ ಆಗಬಹುದು ಎಂದು ಮಧ್ಯಂತರ ಬಜೆಟ್ ನಲ್ಲಿ ಅಂದಾಜು ಮಾಡಲಾಗಿದೆ (2019-20). ಕೇಂದ್ರ ಬ್ಯಾಂಕ್ ಬಳಿ ಇರುವ ಮೀಸಲು ನಿಧಿ ವರ್ಗಾವಣೆ ವಿಚಾರವಾಗಿ ತಿಕ್ಕಾಟ ಎದುರಾಗಿತ್ತು. ದೇಶವು ಎದುರಿಸಬಹುದಾದ ಅರ್ಥಿಕ ಸಮಸ್ಯೆಗಳಿಗೆ ಸಜ್ಜಾಗಿರಲು ಬೇಕಾದ ಮೊತ್ತಕ್ಕಿಂತ ಹೆಚ್ಚು ತನ್ನ ಬಳಿ ಇರಿಸಿಕೊಂಡಿದೆ ಎಂಬುದು ಕೇಂದ್ರದ ಅಭಿಪ್ರಾಯ ಆಗಿತ್ತು.
ಆರ್ ಬಿಐನ ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದಲ್ಲಿ ರಚಿಸಿದ ಸಮಿತಿಯು ಮೀಸಲು ನಿಧಿ ವರ್ಗಾವಣೆಗೆ ಸಂಬಂಧಿಸಿದಂತೆ ರೂಪಿಸಬಹುದಾದ ನಿಯಮಗಳನ್ನು ಪರಿಶೀಲಿಸುತ್ತಿದೆ.












Click it and Unblock the Notifications