ಅಸಾರಾಂಗೆ ಛೀಮಾರಿ ಹಾಕಿದ ರವಿಶಂಕರ್ ಗುರೂಜಿ
ಅಹಮದಾಬಾದ್, ಅ.22: ಸ್ವಯಂಘೋಷಿತ ದೇವಮಾನವ ದೇವಮಾನವ ಅಸಾರಾಂ ಬಾಪು ಹಾಗೂ ಅವರ ಪುತ್ರ ನಾರಾಯಣ ಸಾಯಿ ವಿರುದ್ಧ ಪ್ರಪ್ರಥಮ ಬಾರಿಗೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ರವಿಶಂಕರ್ ಗುರೂಜಿ ಹೇಳಿಕೆ ನೀಡಿದ್ದಾರೆ.
ವಿವಾದಿತ ದೇವಮಾನವ ಅಸಾರಾಂ ಬಾಪು ಹಾಗೂ ಅವರ ಪುತ್ರನ ಕೃತ್ಯವನ್ನು ಖಂಡಿಸಿ ನಾಚಿಕೆಗೇಡಿನ ವಿಷಯ ಎಂದು ಛೀಮಾರಿ ಹಾಕಿದ್ದಾರೆ. ಕಾನೂನಿನ ಕಣ್ಣು ತಪ್ಪಿಸಿ ಕಣ್ಣಾಮುಚ್ಚಾಲೆ ಆಟವಾಡುವುದರಿಂದ ನಾರಾಯಣ ಸಾಯಿಗೆ ಏನು ಸಿಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಿ ಶರಣಾಗತರಾಗಬೇಕು ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.
ಇಡೀ ಪ್ರಕರಣದಿಂದ ಸಂತ ಸಮಾಜ ತಲೆತಗ್ಗಿಸುವಂತಾಗಿದೆ. ಗುರುಗಳಿಗೆ ನಮ್ಮ ಸಮಾಜದಲ್ಲಿ ಒಳ್ಳೆ ಗೌರವವಿದೆ ಆದರೆ, ಇಂಥವರಿಗೆ ಸಮಾಜದಲ್ಲಿ ನಂಬಿಕೆ ಕದಡುತ್ತದೆ ಎಂದು ರವಿಶಂಕರ್ ಹೇಳಿದ್ದರು.

ಅಸಾರಾಂ ಅರ್ಜಿ ವಜಾ: ಅಸಾರಾಮ್ ಅವರಿಗೆ ಸಂಬಂಧಪಟ್ಟಿರುವ ಪ್ರಕರಣಗಳ ವರದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಡೆ ಹಾಕಬೇಕು ಎಂದು ಬಾಪು ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ನನ್ನ ಮತ್ತು ಪುತ್ರ ಸಾಯಿ ವಿರುದ್ಧವಾಗಿ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಹೀಗಾಗಿ ಸಮಾಜದಲ್ಲಿನ ನಮ್ಮ ಘನತೆಗೆ ದಕ್ಕೆಯಾಗುತ್ತಿದೆ ಎಂದು ಆರೋಪಿಸಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು ಎಂದು ಬಾಪು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.
ಜೋಧ್ ಪುರದಲ್ಲಿ ಅಸಾರಾಮ್ ಟ್ರಸ್ಟ್ ನಡೆಸುತ್ತಿರುವ ಹಾಸ್ಟೆಲ್ ನಲ್ಲಿರುವ 15 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಧಾರ್ಮಿಕ ಗುರು ಅಸಾರಾಮ್ ಬಾಪು ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಳು. ರಾಜಸ್ಥಾನದಲ್ಲಿ ಜೀವ ಭಯವಿದ್ದುದ್ದರಿಂದ ಇಲ್ಲಿಗೆ ಬರಬೇಕಾಯಿತು ಎಂದು ಆಕೆಯ ತಂದೆ ಹೇಳಿದ್ದರು. ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಪ್ರಕರಣವನ್ನು ರಾಜಸ್ಥಾನಕ್ಕೆ ವರ್ಗಾಯಿಸಿದ್ದರು.












Click it and Unblock the Notifications