ಧಾರ್ಮಿಕ ವಾಹಿನಿಗಳ ಮೇಲೆ ಹೆಚ್ಚಿನ ತೆರಿಗೆ, ಕೇಂದ್ರದ ವಿರುದ್ಧ ರಾಮ್ ದೇವ್ ಗರಂ
ನವದೆಹಲಿ, ಜನವರಿ 17: ಧಾರ್ಮಿಕ ಚಾನಲ್ ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಸಂಬಂಧ ಕೇಂದ್ರ ಸರಕಾರದ ವಿರುದ್ಧ ಯೋಗ ಗುರು ಬಾಬಾ ರಾಮ್ ದೇವ್ ವಾಗ್ದಾಳಿ ನಡೆಸಿದ್ದಾರೆ.
ಆಸ್ಥಾ, ಅರಿಹಂತ್ ಮತ್ತು ವೇದಿಕ್ ನಂಥ ಚಾನಲ್ ಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರ ವಿರುದ್ಧ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸರಕಾರ ನಮ್ಮ ಬಳಿ ಒಂದು ದಿನಕ್ಕೆ ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದೆ. ಇದಕ್ಕಾಗಿ ನಾವು ಸಾಧುಗಳು ಮತ್ತು ಸನ್ಯಾಸಿಗಳ ಮೇಲೆ ತೆರಿಗೆ ವಿಧಿಸಬೇಡಿ ಎಂದು ಕೇಳಿಕೊಂಡಿದ್ದೇವೆ. ನೀವು ಧಾರ್ಮಿಕ ವ್ಯಕ್ತಿಗಳನ್ನು, ನೀವು ದೇಶವನ್ನು ಪ್ರೀತಿಸುತ್ತೀರಿ, ನೀವು ಧರ್ಮವನ್ನು ಪಾಲಿಸುತ್ತೀರಿ, ಹೀಗಾಗಿ ನೀವು ನಮ್ಮಿಂದ ಕಾರ್ಯಕ್ರಮಗಳನ್ನು ಉಚಿತವಾಗಿ ವೀಕ್ಷಿಸಲು ಬಯಸುತ್ತೀರಿ ಎಂದು ಭಾವಿಸಿದ್ದೇವೆ. ಬಾಬಾಗಳ ಉಪದೇಶವನ್ನು ನೇರವಾಗಿ ನೋಡಲು, ಕೇಳಲು ನೀವು ಬಯಸಿದಲ್ಲಿ ದಿನಕ್ಕೆ ಬಾಬಾಗಳು ತಮ್ಮ ಕಿಸೆಯಿಂದ 1 ಲಕ್ಷ ರೂಪಾಯಿ ಪಾವತಿ ಮಾಡಬೇಕು. ಬಾಬಾಗಳು ಇಷ್ಟೊಂದು ಹಣವನ್ನು ಪಾವತಿ ಮಾಡಲು ಸಾಧ್ಯವಿಲ್ಲ. ಆಸ್ಥಾ ಮತ್ತು ವೇದಿಕ್ ನಂಥ ಚಾನಲ್ ಗಳನ್ನು ತೋರಿಸಲು ಸರಕಾರ ನಮ್ಮಿಂದ ರೂ. 32 ಕೋಟಿ ರೂಪಾಯಿಗಳನ್ನು ಕೇಳುತ್ತಿದೆ," ಎಂದು ರಾಮ್ ದೇವ್ ಹೇಳಿದ್ದಾರೆ.
"ನಂಬಿಕೆಯ ಹೆಸರಿನಲ್ಲಿಯೂ ನಾವು ಹಣವನ್ನು ಕೊಡಬೇಕಾದರೆ ಅದು ನಿಜವಾಗಿಯೂ ಅವಮಾನ. ಇಂತಹ ವರ್ತನೆಯನ್ನು ಈ ಸರ್ಕಾರದಿಂದ ನಾನು ಎಂದಿಗೂ ನಿರೀಕ್ಷಿಸಲಿಲ್ಲ," ಎಂದು ಪತಂಜಲಿ ಆಯುರ್ವೇದ ಸಂಸ್ಥೆಯ ಸಂಸ್ಥಾಪಕರಾದ ಬಾಬಾ ರಾಮ್ ದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ಆಸ್ಥಾ ಮೊಬೈಲ್ ಆ್ಯಪ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಆಸ್ಥಾ, ಅರಿಹಂತ್, ವೇದಿಕ್ ಚಾನಲ್ ಗಳ ಜತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಈ ಆ್ಯಪ್ ಸಹಾಯಕವಾಗಿದೆ. ಇದು ಈ ರೀತಿಯ ಧಾರ್ಮಿಕ ಮಾದರಿಯ ಕಾರ್ಯಕ್ರಮ ವೀಕ್ಷಿಸಲು ಇರುವ ಮೊದಲ ಆ್ಯಪ್ ಎಂದು ಪ್ರತಿಪಾದಿಸಲಾಗಿದೆ. ಈ ಆ್ಯಪ್ ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಬಾಂಗ್ಲಾ, ಮರಾಠಿಯಂಥ ಪ್ರಾದೇಶಿಕ ಬಾಷೆಗಳಲ್ಲೂ ಲಭ್ಯವಾಗಲಿದೆ. ಸದ್ಯದಲ್ಲೇ ಆಸ್ಥಾ ಚಾನಲ್ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ಪ್ರಸಾರ ಆರಂಭಿಸಲಿದೆ.











Click it and Unblock the Notifications