ಯುಪಿಎಗೆ ಮುಖಭಂಗ, ಎನ್ ಡಿಎಗೆ 'ರಾಮ' ಬಲ
ಪಾಟ್ನ, ಫೆ.26: ಲೋಕ್ ಜನಶಕ್ತಿ ಪಕ್ಷ(ಎಲ್ ಜೆಪಿ) ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರು ಬುಧವಾರ ಮಧ್ಯಾಹ್ನ 2.45ರ ಸುಮಾರಿಗೆ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ಮೂಲಕ ಎದುರಾಳಿ ಲಾಲೂ ಪ್ರಸಾದ್ ಯಾದವ್ ಅವರ ರಾಷ್ತ್ರೀಯ ಜನತಾ ದಳ(ಆರ್ ಜೆಡಿ) ಹಾಗೂ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಮಾಜಿ ರೈಲ್ವೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷ ಬಿಜೆಪಿ ಬೆಂಬಲದೊಂದಿಗೆ ಬಿಹಾರದ 8 ಕ್ಷೇತ್ರದಲ್ಲಿ ಕಣಕ್ಕಿಳಿಯಲಿದೆ. ಸುಮಾರು 70ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಎನ್ ಡಿಎ ಜತೆ ಮೈತ್ರಿ ಸಾಧಿಸುವ ಬಗ್ಗೆ ಪಾಸ್ವಾನ್ ಗುಟ್ಟು ಬಿಟ್ಟುಕೊಟ್ಟಿಲ್ಲ.
ಬಿಹಾರದಲ್ಲಿ ಮೈತ್ರಿ ಬಗ್ಗೆ ಕಾಂಗ್ರೆಸ್ ಹಾಗೂ ಲಾಲೂ ಏನು ಭರವಸೆ ನೀಡದ ಕಾರಣ ಎನ್ ಡಿಎ ಜತೆ ಪಾಸ್ವಾನ್ ಕೈ ಜೋಡಿಸಿದ್ದಾರೆ. ಗುಜರಾತಿನ ಗೋಧ್ರೋತ್ತರ ಹತ್ಯಾಕಾಂಡ ಪ್ರಕರಣದ ಕಾರಣ ಕೊಟ್ಟು ಎನ್ ಡಿಎ ತೊರೆದಿದ್ದ ಪಾಸ್ವಾನ್ ಅವರು ಯುಪಿಎ ಕೈ ಹಿಡಿದಿದ್ದರು. ಈಗ ಮತ್ತೊಮ್ಮೆ ಎನ್ ಡಿಎ ಜತೆ ಚುನಾವಣೆ ಎದುರು ನೋಡುತ್ತಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಅವರು ತಮ್ಮ ಪುತ್ರ ಚಿರಾಗ್ ಪಾಸ್ವಾನ್ ಮೂಲಕ ರಾಜನಾಥ್ ಸಿಂಗ್ ಅವರ ಭೇಟಿ ಮಾಡಿ ಒಪ್ಪಂದ ಕುದುರಿಸಿದ್ದು, ಚಿರಾಗ್ ಅವರ ರಾಜಕೀಯ ಭವಿಷ್ಯಕ್ಕಾಗಿ ಪಾಸ್ವಾನ್ ಸೂಕ್ತ ವೇದಿಕೆ ನಿರ್ಮಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ರಾಮ್ ವಿಲಾಸ್ ಪಾಸ್ವಾನ್ ಸುದ್ದಿಗೋಷ್ಠಿ ಮುಖ್ಯಾಂಶಗಳು:
* ತೃತೀಯ ರಂಗ ಎಂಬುದಿಲ್ಲ, ನಾವು ಅದರ ಭಾಗವಾಗುವುದಿಲ್ಲ
* ಎನ್ ಡಿಎ ಜತೆ ಮೈತ್ರಿ ಅಧಿಕೃತ ಘೋಷಣೆಗೆ 4 ದಿನಗಳ ಡೆಡ್ ಲೈನ್
* ಈವರೆಗೂ ರಾಷ್ಟ್ರೀಯ ಜನತಾ ದಳ(ಲಾಲೂ) ಜತೆ ಸಖ್ಯ ಇತ್ತೇ ಹೊರತೂ ಕಾಂಗ್ರೆಸ್ ಜತೆಗಲ್ಲ
* ಕಾಂಗ್ರೆಸ್ ನಮ್ಮ ಜತೆ ಮೈತ್ರಿ ಬಯಸಿದ್ದು ನಿಜ ಆದರೆ, ಮಾತುಕತೆ ಮುಂದುವರೆಸಲಿಲ್ಲ. ಗಂಭೀರವಾಗಿ ಪರಿಗಣಿಸಲೇ ಇಲ್ಲ.
* ಲಾಲೂ ಅವರು ಜೈಲಿನಲ್ಲಿದ್ದಾಗ ನನ್ನ ಕಣ್ಣಾಲಿಗಳು ತುಂಬಿ ಬಂದಿತ್ತು. ಆದರೆ, ಅವರು ಮೈತ್ರಿ ಸಾಧ್ಯತೆ ಬಗ್ಗೆ ಸುಮ್ಮನಾಗಿಬಿಟ್ಟರು.
* ಬಿಹಾರದ ಹಾಜಿಪುರ, ಸಮಸ್ಟಿಪುರ, ಜಾಮೈ, ವೈಶಾಲಿ, ಖಾಗರಿಯಾ ಸೇರಿದಂತೆ 7-8ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಮೈತ್ರಿಗೆ ಒಪ್ಪಂದ
* ಲೋಕ್ ಜನಶಕ್ತಿ ಪಕ್ಷ (ಎಲ್ ಜೆಪಿ) ಜತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೈತ್ರಿಗೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸಮ್ಮತಿಸಿದ್ದಾರೆ.











Click it and Unblock the Notifications