ಕೇವಲ 15 ದಿನಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹರಿದು ಬಂದ ದೇಣಿಗೆ ಮೊತ್ತದ ಲೆಕ್ಕ ಹೀಗಿದೆ
ಉಡುಪಿ, ಫೆ 4: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಕರ ಸಂಕ್ರಾಂತಿಯ ಮರುದಿನವಾದ ಜನವರಿ ಹದಿನೈದರಿಂದ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾಗಿದೆ.
ನಿರೀಕ್ಷೆಯಂತೆ ಸಾರ್ವಜನಿಕರು ಉತ್ತಮವಾಗಿ ನಿಧಿ ಅಭಿಯಾನಕ್ಕೆ ಸ್ಪಂದಿಸುತ್ತಿದ್ದು, ಜಾತ್ಯಾತೀತವಾಗಿ ದೇಣಿಗೆಯನ್ನು ನೀಡುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಿಧಿ ಸಂಗ್ರಹ ನಡೆಯುತ್ತಿದೆ.
ರಾಮಜನ್ಮಭೂಮಿ ಟ್ರಸ್ಟಿನ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ನಾಲ್ಕು ರಾಜ್ಯಗಳಲ್ಲಿನ ಕೆಲವು ಕೇಂದ್ರಗಳಿಗೆ ಭೇಟಿ ನೀಡಿ ಖುದ್ದಾಗಿ ನಿಧಿ ಸಂಗ್ರಹಣೆ ಮಾಡುತ್ತಿದ್ದಾರೆ.
ಸುಮಾರು 1,100 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದುವರೆಗೆ ಸಂಗ್ರಹವಾದ ಮೊತ್ತದ ಬಗ್ಗೆ ಪೇಜಾವರ ಶ್ರೀಗಳು ವಿವರಣೆಯನ್ನು ನೀಡಿದ್ದಾರೆ.

ರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭ
"ನಮ್ಮ ರಾಷ್ಟ್ರದ ಸಂಸ್ಕೃತಿಯ ಪ್ರತೀಕವಾದ ರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಮಂದಿರ ನಿರ್ಮಾಣಕ್ಕೆ ತಮ್ಮತಮ್ಮ ಕಾಣಿಕೆಯನ್ನು ಸಮರ್ಪಿಸಬೇಕು ಎಂದು ಭಕ್ತರು ಬಹಳ ಉತ್ಸಾಹವನ್ನು ತೋರುತ್ತಿದ್ದಾರೆ"ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ಇದುವರೆಗೆ ಸುಮಾರು 524 ಕೋಟಿ ರಾಪಾಯಿ ಸಂಗ್ರಹ
"ಮಕರ ಸಂಕ್ರಮಣದ ಮರುದಿನದಂದು ಮೊದಲುಗೊಂಡು ಜಗದೆಲ್ಲಡೆ ಈ ಅಭಿಯಾನ ಆರಂಭವಾಗಿದೆ. ಈ ತನಕ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳದ ಕೆಲವು ಕೇಂದ್ರಗಳಲ್ಲಿ ಈ ಕುರಿತಾದ ಅಭಿಯಾನದಲ್ಲಿ ಪಾಲ್ಗೊಂಡಿದ್ದೇವೆ. ಇದುವರೆಗೆ ಸುಮಾರು 524 ಕೋಟಿ ರಾಪಾಯಿ ಸಂಗ್ರಹವಾಗಿದೆ"ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ದಲಿತ ಕೇರಿಗಳಿಗೆ ಪೇಜಾವರ ಶ್ರೀಗಳು ಭೇಟಿ
ಕೆಲವು ದಿನಗಳ ಹಿಂದೆ ಬಳ್ಳಾರಿ ಮತ್ತು ತುಮಕೂರಿನ ದಲಿತ ಕೇರಿಗಳಿಗೆ ಪೇಜಾವರ ಶ್ರೀಗಳು ಭೇಟಿ ನೀಡಿದ್ದಾಗ, ಅಭೂತಪೂರ್ವ ಸ್ವಾಗತವನ್ನು ಅವರಿಗೆ ಕೋರಲಾಗಿತ್ತು. ಖುದ್ದಾಗಿ ಶ್ರೀಗಳೇ ಈ ಪ್ರದೇಶದಲ್ಲಿ ನಿಧಿ ಸಂಗ್ರಹದಲ್ಲಿ ಪಾಲ್ಗೊಂಡಿದ್ದರು.

ಕಂಚಿ ಕಾಮಕೋಟಿ ಮಠಕ್ಕೆ ಪೇಜಾವರ ಶ್ರೀ ಭೇಟಿ
ಎರಡು ದಿನಗಳ ಹಿಂದೆ ಪೇಜಾವರ ಶ್ರೀಗಳು ಕಂಚಿ ಕಾಮಕೋಟಿ ಮಠಕ್ಕೆ ಭೇಟಿ ನೀಡಿದ್ದರು. ಆ ವೇಳೆ ಮಠದ ಭಕ್ತ, ಉದ್ಯಮಿಯೂ ಆಗಿರುವ ಮೋಹನ್ ಎನ್ನುವವರು ಐದು ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದರು. ಜೊತೆಗೆ ಕಂಚಿ ಮಠವೂ ಒಂದು ಕೋಟಿ ರೂಪಾಯಿ ನೀಡಿತ್ತು.












Click it and Unblock the Notifications