ರಾಜ್ಯಸಭೆಯಲ್ಲಿ ಕಾಶ್ಮೀರ ಪುನರ್ ರಚನೆ ವಿಧೇಯಕ ಅಂಗೀಕಾರ
ನವದೆಹಲಿ, ಆಗಸ್ಟ್ 05: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಇನ್ಮುಂದೆ ರಾಜ್ಯವಾಗಿರುವುದಿಲ್ಲ. ವಿಶೇಷ ಸ್ಥಾನಮಾನ ನೀಡುವ ಸಂವಿಧಾನ ಪರಿಚ್ಛೇದ 370 ರದ್ದು ಸೇರಿದಂತೆ ಮೋದಿ ಸರ್ಕಾರ ಇಂದು ತೆಗೆದುಕೊಂಡಿರುವ ಐತಿಹಾಸಿಕ ವಿಧೇಯಕಕ್ಕೆ ರಾಜ್ಯಸಭೆಯಲ್ಲಿಂದು(ಆಗಸ್ಟ್ 05) ಅಂಗೀಕಾರ ಸಿಕ್ಕಿದೆ. ಈ ಮೂಲಕ ಭಾರತದ ಮುಕುಟವನ್ನು ಕಾಪಾಡುವ ಜವಾಬ್ದಾರಿ ಸಂಪೂರ್ಣವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಿಕ್ಕಿದೆ.
ಕಾಶ್ಮೀರ ಪುನರ್ ರಚನೆ ವಿಧೇಯಕ 2019 ರಾಜ್ಯಸಭೆಯಲ್ಲಿಂದು ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದರು. ಈ ಬಗ್ಗೆ ಭಾರಿ ಗದ್ದಲ, ಗೊಂದಲ, ಪ್ರತಿಭಟನೆ ಎದುರಾಯಿತು. ಸಂಜೆ ವೇಳೆಗೆ ಕೊನೆಗೂ ಮತದಾನ ಪ್ರಕ್ರಿಯೆಗೆ ಸ್ಪೀಕರ್ ಎಂ ವೆಂಕಯ್ಯ ನಾಯ್ಡು ಸೂಚಿಸಿದರು.
ಅಮಿತ್ ಶಾ ಮಂಡಿಸಿದ ವಿಧೇಯಕಗಳ ಪರ 125 ಹಾಗೂ ವಿರೋಧವಾಗಿ 61 ಧ್ವನಿ ಮತಗಳು ಬಿದ್ದವು. ಜಮ್ಮು ಮತ್ತು ಕಾಶ್ಮೀರ, ಲಡಾಕ್ ಪ್ರತ್ಯೇಕ ಕೇಂದ್ರಾಡಳಿತ ವಿಧೇಯಕ, ಕಾಶ್ಮೀರದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10ರಷ್ಟು ಮೀಸಲಾತಿ ನೀಡುವ Jammu and Kashmir Reservation Bill, 2019 ಬಿಲ್ ಕೂಡಾ ಪಾಸ್ ಆಗಿದೆ.

ಜಮ್ಮುಮತ್ತು ಕಾಶ್ಮೀರ ಹೊಸ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದಲಿದೆ, ಲಡಾಕ್ ಹೊಸ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪುದುಚೇರಿಯಂತೆ ಚುನಾವಣೆ ಎದುರಿಸಿ ಜನಾದೇಶ ಪಡೆದ ಸರ್ಕಾರ ರಚನೆಯಾಗಿ ಹೊಸ ಮುಖ್ಯಮಂತ್ರಿ ಹೊಂದಬಹುದು. ಆದರೆ, ಲಡಾಕ್ ಮಾತ್ರ ಅಂಡಮಾನ್ ಮತ್ತು ನಿಕೋಬಾರ್ ಇನ್ನಿತರ ಕೇಂದ್ರಾಡಳಿತ ಪ್ರದೇಶಗಳಂತೆ ಉಳಿಯಲಿದೆ.












Click it and Unblock the Notifications