ಜಲ್ಲಿಕಟ್ಟು ಅಖಾಡಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಎಂಟ್ರಿ
ಸಿನಿಮಾವನ್ನು ಅಗಾಧವಾಗಿ ಆರಾಧಿಸುವ ತಮಿಳುನಾಡಿನ ಜನತೆಗೆ ಮತ್ತಷ್ಟು ಬೆಂಬಲ ತಂದಿದೆ ಈ ಸೂಪರ್ ಸ್ಟಾರ್ ಹೇಳಿಕೆ.
ಚೆನ್ನೈ, ಜನವರಿ 20: ತಮಿಳುನಾಡಿನಲ್ಲಿ ಅಗ್ರ ಮಟ್ಟದ ಕಿಚ್ಚು ಹೊತ್ತಿಸಿರುವ ಜಲ್ಲಿಕಟ್ಟು ಹೋರಾಟಕ್ಕೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಕೈ ಜೋಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ್ಲಿಕಟ್ಟು ಕ್ರೀಡೆಗೆ ತಮ್ಮ ಅದಮ್ಯ ಬೆಂಬಲವಿದೆಯೆಂದು ಹೇಳಿರುವುದಲ್ಲದೆ, ಜನರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ.[ಜಲ್ಲಿಕಟ್ಟು ಜಂಗೀ ಕುಸ್ತಿಗೆ ಸಿಕ್ಕಿತು ಎ.ಆರ್. ರಹಮಾನ್ ಬೆಂಬಲ]
ಗುರುವಾರವಷ್ಟೇ, ವಿಶ್ವವಿಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಅವರು, ಜಲ್ಲಿ ಕಟ್ಟು ಕಾನೂನುಬದ್ಧಕ್ಕೆ ಆಗ್ರಹಿಸಿ ಉಪವಾಸ ಆರಂಭಿಸುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ, ಇದೀಗ ರಜನೀಕಾಂತ ಸಹ ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವುದು, ಚಲನಚಿತ್ರಗಳನ್ನು ಅಗಾಧವಾಗಿ ಆರಾಧಿಸುವ ತಮಿಳಿಗರಲ್ಲಿ ಹೊಸ ಸಂಚಲನ ಮೂಡಿಸಿದೆ.[ಜಲ್ಲಿಕಟ್ಟು: ಸದ್ಯದಲ್ಲೇ ಸಿಹಿಸುದ್ದಿ ನಿರೀಕ್ಷಿಸಿ-ಪನ್ನೀರ್ ಸೆಲ್ವಂ]
ಅವರ ಈ ಮಾತುಗಳು, ಕಳೆದ ಮೂರ್ನಾಲ್ಕು ದಿನಗಳಿಂದಲೂ ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿದ ಲಕ್ಷಾಂತರ ಹೋರಾಟಗಾರರಿಗೆ ಹೊಸ ಚೈತನ್ಯ ತುಂಬಿದಂತಾಗಿದೆ.
ಅತ್ತ, ನವದೆಹಲಿಯಲ್ಲಿ ತಮಿಳುನಾಡಿನ ಪ್ರಮುಖ ರಾಜಕಾರಣಿಯಾದ ತಂಬಿದೊರೈ ಅವರು ತಮ್ಮ ಬೆಂಬಲಿಗರೊಂದಿಗೆ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಜಲ್ಲಿ ಕಟ್ಟು ಕ್ರೀಡೆ ಪರವಾಗಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ತರಬೇಕೆಂಬ ಮನವಿ ಸಲ್ಲಿಸಿದರು.