ಅತ್ಯಾಚಾರ ಆರೋಪ, ರಾಜಸ್ಥಾನ ಸಚಿವರ ರಾಜೀನಾಮೆ
ಜೈಪುರ, ಸೆ.19 : ತಮ್ಮ ನಿವಾಸದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ರಾಜಸ್ಥಾನದ ಸಚಿವ ಬಾಬು ಲಾಲ್ ನಗರ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದ ಬಾಬು ಲಾಲ್, ಗುರುವಾರ ಮುಖ್ಯಮಂತ್ರಿ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ರಾಜೀನಾಮೆ ನೀಡಿರುವುದಾಗಿ ಬಾಬು ಹೇಳಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯದ ಒತ್ತಡದ ಕಾರಣದಿಂದಾಗಿ ನನ್ನ ಮೇಲೆ ದೂರು ದಾಖಲಾಗಿದೆ ಎಂದು ಲಾಲ್ ನಗರ್ ಹೇಳಿದ್ದಾರೆ. ಮಂಗಳವಾರ ಜೈಪುರ ನ್ಯಾಯಾಲಯ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು.
ಸೆ.11ರಂದು ಮಹಿಳೆಯೊಬ್ಬಳನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ತನ್ನ ಅಧಿಕೃತ ನಿವಾಸಕ್ಕೆ ಕರೆದು, ಬೆದರಿಸಿ, ಥಳಿಸಿ ಅತ್ಯಾಚಾರವೆಸಗಿದ್ದರು ಎಂಬ ಆರೋಪದಲ್ಲಿ ಸಚಿವರು ಸಿಲಿಕಿದ್ದಾರೆ. ಈ ಕುರಿತು ಸಿಐಡಿ ತನಿಖೆ ಆರಂಭವಾಗಿದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಬುಧವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆ ನೀಡಿದ್ದರು. ಇದರ ನಂತರ ಬಾಬು ಲಾಲ್ ನಗರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. (ರಾಜಸ್ಥಾನ ಸಚಿವರ ವಿರುದ್ಧ ರೇಪ್ ಕೇಸ್)
ಬೆದರಿಕೆ ಆರೋಪ : ಸಚಿವರ ಬೆಂಬಲಿಗರು ಮತ್ತು ಪತ್ನಿ ದೂರನ್ನು ವಾಪಸ್ ಪಡೆಯುವಂತೆ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅತ್ಯಾಚಾರಕ್ಕೊಳಕ್ಕಾಗಿ ಮಹಿಳೆ ಆರೋಪಿಸಿದ್ದಾರೆ. ಸಚಿವರ ಬೆಂಬಲಿಗರು ಮತ್ತು ಪತ್ನಿ ದೂರು ವಾಪಸ್ ಪಡೆಯದಿದ್ದರೆ, ತನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸೆ.13ರಂದು ಅತ್ಯಾಚಾರಕ್ಕೊಳಗಾದ ಮಹಿಳೆ ಜಿಲ್ಲಾ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ನೀಡಿದ್ದರು. ಸಚಿವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ದೂರು ದಾಖಲಿಸುವಂತೆ ಆದೇಶಿಸಿತ್ತು.











Click it and Unblock the Notifications