ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ಉತ್ತರಕ್ಕೆ ಮಳೆ ಹೊಡೆತ
ನವದೆಹಲಿ, ಆಗಸ್ಟ್.21: ವರುಣನ ಅಬ್ಬರಕ್ಕೆ ಉತ್ತರ ಭಾರತದ ಬಹುತೇಕ ರಾಜ್ಯಗಳು ತತ್ತರಿಸಿ ಹೋಗಿವೆ. ನವದೆಹಲಿ ಮತ್ತು ಎನ್ ಸಿಆರ್ ಪ್ರದೇಶಗಳಲ್ಲಿ ಮಳೆಯ ಹೊಡೆತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನವದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲ ನದಿಗಳಾಗಿ ಪರಿವರ್ತನೆಯಾಗಿ ಬಿಟ್ಟಿವೆ. ಮುಂದಿನ ಎರಡು ಗಂಟೆಗಳಲ್ಲಿ ನವದೆಹಲಿ, ಗುರುಗ್ರಾಮ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.
ನವದೆಹಲಿಯಲ್ಲಿ ನಿರಂತರ ಮಳೆಯಿಂದ ರಸ್ತೆಗಳಲ್ಲೇ ನದಿಗಳು!
ಈಗಾಗಲೇ ಸುರಿದ ಮಳೆಯು ರಾಷ್ಟ್ರ ರಾಜಧಾನಿಯಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ದೆಹಲಿ ಗುರುಗ್ರಾಮ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡಿದರು.
ಬಂಗಾಳಕೊಲ್ಲಿ ವಾಯುಭಾರ ಕುಸಿತ:
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಮಳೆಯ ಅಬ್ಬರ ಜೋರಾಗುತ್ತಿದೆ. ಹರಿಯಾಣ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದೆ.
ಹರಿಯಾಣದಲ್ಲೂ ರಸ್ತೆಗಳು ಜಲಾವೃತ:
ನವದೆಹಲಿಯಷ್ಟೇ ಅಲ್ಲದೇ ಹರಿಯಾಣದಲ್ಲೂ ಮಳೆರಾಯ ಬಿಡುವು ಕೊಡದೇ ಸುರಿಯುತ್ತಿದ್ದಾನೆ. ವರುಣನ ಅಟ್ಟಹಾಸಕ್ಕೆ ಹರಿಯಾಣದ ಪಲ್ವಾಲ್ ಪ್ರದೇಶದ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ನಿರಂತರ ಮಳೆಯಿಂದಾಗಿ ಜನರು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.