Vande Bharat Express: ಈ ವಂದೇ ಭಾರತ ರೈಲು ಬೋಗಿಗಳ ಸಂಖ್ಯೆ ಕಡಿತ
ಹೈದರಾಬಾದ್, ಫೆಬ್ರವರಿ 16: ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ದೇಶದಲ್ಲಿ ಹಲವು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಬೋಗಿಗಳ ಸಂಖ್ಯೆಯನ್ನು ಭಾರತೀಯ ರೈಲ್ವೆ ಹೆಚ್ಚಳ ಮಾಡುತ್ತಿದೆ. ಆದರೆ ಪ್ರಯಾಣಿಕರ ಕೊರತೆಯ ಕಾರಣ 20 ಬೋಗಿಯ ರೈಲನ್ನು 8 ಬೋಗಿಯ ರೈಲಾಗಿ ಬದಲಾವಣೆ ಮಾಡಲಾಗುತ್ತಿದೆ. ಈಗಲೂ ಪ್ರಯಾಣಿಕರ ಕೊರತೆ ಉಂಟಾದರೆ ಈ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 20101/ 20102 ನಾಗ್ಪುರ-ಸಿಕಂದರಾಬಾದ್-ನಾಗ್ಪುರ ನಡುವೆ ಸಂಚಾರವನ್ನು ನಡೆಸುತ್ತದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ ನಡುವೆ ಸಂಚಾರ ನಡೆಸುವ ಈ ರೈಲಿಗೆ ಪ್ರಯಾಣಿಕರ ಕೊರತೆ ಕಾಡುತ್ತಿದೆ. 20 ಬೋಗಿಯನ್ನು ಹೊಂದಿರುವ ಈ ರೈಲು ಭರ್ತಿಯಾಗುತ್ತಿಲ್ಲ.

ಆದ್ದರಿಂದ ಭಾರತೀಯ ರೈಲ್ವೆ ಈ ರೈಲನ್ನು 8 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಿದೆ. ಅಂಕಿ ಅಂಶಗಳ ಪ್ರಕಾರ 20 ಬೋಗಿಯ ರೈಲಿನಲ್ಲಿ ಶೇ 34ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ. ಈ ರೈಲಿಗೆ ಪ್ರಯಾಣಿಕರನ್ನು ಸೆಳೆಯಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದು, ಅಂತಿಮವಾಗಿ ರೈಲು ಸೇವೆ ನಿಲ್ಲಿಸದೇ ಬೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ತೀರ್ಮಾನವನ್ನು ಮಾಡಲಾಗಿದೆ.
5 ತಿಂಗಳು ಕಾದು ನೋಡಿದ ಇಲಾಖೆ: ಭಾರತೀಯ ರೈಲ್ವೆ ನಾಗ್ಪುರ-ಸಿಕಂದರಾಬಾದ್-ನಾಗ್ಪುರ ವಂದೇ ಭಾರತ್ ರೈಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗಲಿದೆ ಎಂದು ಸುಮಾರು 5 ತಿಂಗಳು ಕಾದು ನೋಡಿದೆ. ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ.
2024ರ ಸೆಪ್ಟೆಂಬರ್ನಿಂದ 2025ರ ಜನವರಿ ತನಕ ನಾಗ್ಪುರ-ಸಿಕಂದರಾಬಾದ್ ನಡುವೆ ಶೇ 33.81ರಷ್ಟು ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಸಿಂಕದರಾಬಾದ್-ನಾಗ್ಪುರ ನಡುವೆ ಶೇ 33.87ರಷ್ಟು ಪ್ರಯಾಣಿಕರ ಸಂಚಾರ ನಡೆಸಿದ್ದಾರೆ. ಆದ್ದರಿಂದ ಈ ಮಾರ್ಗದಲ್ಲಿ 20 ಬೋಗಿ ಹೊಂದಿರುವ ರೈಲು ಓಡಿಸುವುದು ಇಲಾಖೆಗೆ ನಷ್ಟವನ್ನು ಉಂಟು ಮಾಡುತ್ತಿದೆ.
ರೈಲ್ವೆ ಅಧಿಕಾರಿಗಳು ಈ ರೈಲು ಸೇವೆ ರದ್ದುಗೊಳಿಸುವುದಿಲ್ಲ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ 8 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಾಗುತ್ತದೆ. ಅಗತ್ಯವಿದ್ದರೆ ರೈಲು ವೇಳಾಪಟ್ಟಿಯನ್ನು ಸಹ ಬದಲಾವಣೆ ಮಾಡುವ ಕುರಿತು ನಾವು ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
20 ಬೋಗಿಯ ರೈಲನ್ನು 8 ಬೋಗಿ ರೈಲಾಗಿ ಪರಿವರ್ತನೆ ಮಾಡಲಾಗುತ್ತದೆ. ಉಳಿದ ಬೋಗಿಯನ್ನು ಪ್ರಯಾಣಿಕರ ಹೆಚ್ಚಿನ ಬೇಡಿಕೆ ಇರುವ ಮಾರ್ಗದ ವಂದೇ ಭಾರತ್ ರೈಲಿಗೆ ಜೋಡಿಸಲಾಗುತ್ತದೆ. 8 ಬೋಗಿಯ ನಾಗ್ಪುರ-ಸಿಕಂದರಾಬಾದ್-ನಾಗ್ಪುರ ರೈಲಿಗೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಭರವಸೆ ಹೊಂದಿದ್ದಾರೆ.
ಈ ಹಿಂದೆಯೂ ನಾಗ್ಪುರ-ಸಿಕಂದರಾಬಾದ್-ನಾಗ್ಪುರ ವಂದೇ ಭಾರತ್ ರೈಲು ಪ್ರಯಾಣಿಕರ ಕೊರತೆ ಅನುಭವಿಸುತ್ತಿದೆ ಎಂಬ ಸುದ್ದಿಗಳು ಬಂದಿತ್ತು. ಆಗ ಇಲಾಖೆ ಕಾದು ನೋಡುವ ತಂತ್ರವನ್ನು ಅನುಸರಿಸಿತ್ತು. ಆದರೆ ಈಗ ಅಧಿಕ ನಷ್ಟವಾಗುವ ಕಾರಣ ಬೋಗಿಗಳ ಸಂಖ್ಯೆ ಕಡಿತಕ್ಕೆ ಮುಂದಾಗಿದೆ.
2024ರ ಸೆಪ್ಟೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ನಾಗ್ಪುರ-ಸಿಕಂದರಾಬಾದ್-ನಾಗ್ಪುರ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ರೈಲು ಸಂಚಾರ ಪ್ರಾರಂಭವಾದಾಗಿನಿಂದಲೂ ಅದು ಭರ್ತಿಯಾಗುತ್ತಿಲ್ಲ. ಒಂದು ದಿನ ಎಕ್ಸಿಕ್ಯುಟಿವ್ ಕ್ಲಾಸ್ನಲ್ಲಿ ಕೇವಲ 88 ಪ್ರಯಾಣಿಕರು ಇದ್ದರು. 10 ಪ್ರಯಾಣಿಕರು ಮಾತ್ರ ರೈಲಿನಲ್ಲಿ ಸಂಚಾರ ನಡೆಸಲು ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು ಎಂದು ಇಲಾಖೆಯ ವೆಬ್ಸೈಟ್ ಮಾಹಿತಿ ತಿಳಿಸಿತ್ತು.
20 ಬೋಗಿಯ ರೈಲನ್ನು 8 ಬೋಗಿಗೆ ಇಳಿಕೆ ಮಾಡಿದರೆ ಸೀಟುಗಳ ಸಂಖ್ಯೆ ಸುಮಾರು 500 ಕಡಿಮೆಯಾಗಲಿದೆ. ಎರಡು ನಗರದ ನಡುವಿನ ಉತ್ತಮ, ವೇಗದ ಸಂಪರ್ಕಕ್ಕಾಗಿ ರೈಲು ಸೇವೆಯನ್ನು ಮುಂದುವರೆಸಲಾಗುತ್ತದೆ. ಆದರೆ ಬೋಗಿ ಸಂಖ್ಯೆ ಕಡಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ರೈಲು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯವನ್ನು ರಾಮಗುಂಡಂ, ಕಾಜಿಪೇಟ್, ಸಿಕಂದರಾಬಾದ್ ಸಂಪರ್ಕಿಸುತ್ತದೆ. ಸ್ಥಳೀಯ ವ್ಯಾಪಾರ ವಹಿವಾಟು, ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡಲು ರೈಲು ಸೇವೆ ಆರಂಭಿಸಲಾಗಿತ್ತು. 585 ಕಿ. ಮೀ. ದೂರವನ್ನು ರೈಲು 7 ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ.












Click it and Unblock the Notifications