ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ; ಶ್ರಮಿಕ್ ರೈಲಿನ ಮಾರ್ಗಸೂಚಿ ಬದಲಾವಣೆ
ನವದೆಹಲಿ, ಮೇ 11 : ಕೇಂದ್ರ ರೈಲ್ವೆ ಸಚಿವಾಲಯ ಶ್ರಮಿಕ್ ವಿಶೇಷ ರೈಲು ಸಂಚಾರಕ್ಕೆ ಇದ್ದ ಮಾರ್ಗಸೂಚಿಯಲ್ಲಿ ಬದಲಾಣೆ ಮಾಡಿದೆ. ಲಾಕ್ ಡೌನ್ ಪರಿಣಾಮ ವಿವಿಧ ರಾಜ್ಯದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳ ಸಂಚಾರಕ್ಕಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.
ಶ್ರಮಿಕ್ ರೈಲು ನಿಗದಿಪಡಿಸಿದ ರಾಜ್ಯದಲ್ಲಿ ಮೂರು ನಿಲ್ದಾಣಗಳಲ್ಲಿ ನಿಲ್ಲಬಹುದು ಎಂದು ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇಷ್ಟು ದಿನ ರೈಲು ಒಂದು ನಿಲ್ದಾಣದಿಂದ ಹೊರಟರೆ ನಿಗದಿಪಡಿಸಿದ ನಿಲ್ದಾಣದಲ್ಲಿ ಮಾತ್ರ ನಿಲ್ಲುತ್ತಿತ್ತು.
ಇಷ್ಟು ದಿನ ರೈಲಿನಲ್ಲಿ ನಿಗದಿತ ಪ್ರಯಾಣಿಕರು ಮಾತ್ರ ಸಂಚಾರ ನಡೆಸಲು ಅನುಮತಿ ಇತ್ತು (1200 ಜನರು). ಆದರೆ, ಈಗ ರೈಲಿನ ಸ್ಲೀಪರ್ ಕೋಚ್ನಲ್ಲಿನ ಸಮ ಪ್ರಮಾಣದ ಪ್ರಯಾಣಿಕರು ಸಂಚಾರ ನಡೆಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಅಂದರೆ 1700 ಪ್ರಯಾಣಿಕರು ಹೋಗಬಹುದು.

ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ತಮ್ಮ ತವರು ರಾಜ್ಯಕ್ಕೆ ತೆರಳಲು ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಈ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಶೇ 85ರಷ್ಟು ಖರ್ಚನ್ನು ನೀಡುತ್ತದೆ. ಉಳಿದಿದ್ದನ್ನು ರಾಜ್ಯ ಭರಿಸಬೇಕು.
ಕಾರ್ಮಿಕರನ್ನು ತಮ್ಮ ತವರಿಗೆ ವಾಪಸ್ ಕಳಿಸಲು ಬಸ್ ಮತ್ತು ಶ್ರಮಿಕ್ ರೈಲಿನ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಮಿಕರು ತವರಿಗೆ ನಡೆದುಕೊಂಡು ಹೋಗದಂತೆ ಎಚ್ಚರ ವಹಿಸಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ.
ಒಂದು ವೇಳೆ ಕಾರ್ಮಿಕರು ನಡೆದುಕೊಂಡು ಹೋಗುವುದು ಕಂಡು ಬಂದರೆ ಅವರನ್ನು ಹತ್ತಿರದಲ್ಲಿಯ ಸ್ಥಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು. ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಬಳಿಕ ವಿಶೇಷ ರೈಲು ಏರಲು ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.












Click it and Unblock the Notifications