ಲೋಕಸಭೆ ಕದನಕ್ಕೆ ರಾಹುಲ್ ಗೆ ರಣವೀಳ್ಯ, ಬಿಜೆಪಿ ಹಣಿಯಲು ಹೊಸ ತಂತ್ರ
ಈ ವರ್ಷದ ಅಕ್ಟೋಬರ್ ಹೊತ್ತಿಗೆ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಟ್ಟ ಕಟ್ಟಿ, ಮುಂದಿನ ಲೋಕಸಭಾ ಚುನಾವಣೆಯನ್ನು ಅವರ ನಾಯಕತ್ವದಲ್ಲೇ ಎದುರಿಸಲಾಗುವುದು ಎಂದು ಪಕ್ಷದ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ರಣತಂತ್ರ ಹೆಣೆಯುತ್ತಿದೆ. ಈ ಹಿಂದೆ ಎನ್ ಡಿಎ ಹೇಗೆ ಸೋಲನ್ನು ಅನುಭವಿಸಿತ್ತೋ ಅದೇ ಮಾದರಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕೂಡ ನೆಲ ಕಚ್ಚುತ್ತದೆ. ಆಗ 'ಭಾರತ ಪ್ರಕಾಶಿಸುತ್ತಿದೆ' ಎಂಬ ಘೋಷವಾಕ್ಯ ಕೂಡ ಅವರ ನೆರವಿಗೆ ಬರಲಿಲ್ಲ ಎಂದು ಸಿಂಧಿಯಾ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅವರೇ ಮುನ್ನಡೆಸಲಿದ್ದಾರೆ ಎಂದು ಐಎಎನ್ಎಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರತಿಪಕ್ಷಗಳೆಲ್ಲದರ ನಾಯಕರಾಗಿ ರಾಹುಲ್ ಹೊರಹೊಮ್ಮುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಧಿಯಾ, ನಾನು ಖಂಡಿತಾ ಹಾಗೇ ಯೋಚಿಸುತ್ತೀನಿ. ವಿಪಕ್ಷಗಳೆಲ್ಲ ಒಟ್ಟಾಗಿ ರಾಹುಲ್ ಗಾಂಧಿಯವರನ್ನು ಬೆಂಬಲಿಸುತ್ತವೆ. ಪ್ರತಿಪಕ್ಷದ ನೇತೃತ್ವವನ್ನು ಅವರು ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ ನಲ್ಲಿ ರಾಹುಲ್ ಪಟ್ಟಾಭಿಷೇಕ
ಕಾಂಗ್ರೆಸ್ ಎಂಬ ದೊಡ್ಡ ಹಡಗಿನ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸುತ್ತಾರೆ. ಪಕ್ಷದ ಆಂತರಿಕ ಚುನಾವಣೆಗಳೆಲ್ಲ ನಡೆದ ನಂತರ, ಅಂದರೆ ಅಕ್ಟೋಬರ್ ನಲ್ಲಿ ರಾಹುಲ್ ಪಟ್ಟಾಭಿಷೇಕದ ಸುಳಿವು ಕೊಟ್ಟಿದ್ದಾರೆ ಸಿಂಧಿಯಾ.

ಸೋನಿಯಾರಿಂದ ಅಧಿಕಾರ ಹಸ್ತಾಂತರ
ಸದ್ಯಕ್ಕೆ ಕಾಂಗ್ರೆಸ್ ನ ಅಧ್ಯಕ್ಷೆ ಆಗಿರುವ, ಸುದೀರ್ಘ ಕಾಲ ಕಾಂಗ್ರೆಸ್ ಪಕ್ಷ ಮುನ್ನಡೆಸಿದ ಅಗ್ಗಳಿಕೆ ಇರುವ ಸೋನಿಯಾ ಗಾಂಧಿ ಅವರಿಂದ ರಾಹುಲ್ ಗಾಂಧಿಗೆ ಜವಾಬ್ದಾರಿ ವರ್ಗಾವಣೆ ಆಗುವ ಬಗ್ಗೆ ಈಗಾಗಲೇ ಹಲವು ನಾಯಕರು ಹೇಳಿದ್ದಾರೆ.

ಮಾತು ಜಾಸ್ತಿ, ಕೆಲಸ ಕಡಿಮೆ
ಮೋದಿ ನೇತೃತ್ವದ ಸರಕಾರದ್ದು ಮಾತು ಜಾಸ್ತಿ, ಕೆಲಸ ಕಡಿಮೆ. ಈ ಹಿಂದೆ ಭಾರತ ಪ್ರಕಾಶಿಸುತ್ತಿದೆ ಎಂಬ ಅಭಿಯಾನ ಆರಂಭಿಸಿ ಹೇಗೆ ನಿಂತ ನೆಲ ಕುಸಿಯಿತೋ ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಸೋಲುತ್ತದೆ ಎಂದಿದ್ದಾರೆ ಜ್ಯೋತಿರಾದಿತ್ಯ.

ಪಂಜಾಬ್ ನಲ್ಲಿ ಮಾತ್ರ ಪ್ರಮುಖ ಗೆಲುವು
ಆದರೆ, ಮುಂದಿನ ಲೋಕಸಭೆ ಚುನಾವಣೆವರೆಗೆ ಇರುವ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಬೇಕು. ಅದರ ಜತೆಜತೆಗೆ ಲೋಕಸಭೆ ಚುನಾವಣೆಗೆ ತಂತ್ರ ಹೆಣೆಯಬೇಕು. ಕಳೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ಪಂಜಾಬ್ ಹೊರತುಪಡಿಸಿಯಾವುದೇ ಪ್ರಮುಖ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಯಾವುದೇ ಪಕ್ಷವು ಇಂಥ ಸಂಕಷ್ಟದ ಸಮಯವನ್ನು ಎದುರಿಸುತ್ತದೆ ಎಂದಿದ್ದಾರೆ ಸಿಂಧಿಯಾ.

ಜನರ ವಿಶ್ವಾಸ ಗಳಿಸಲು ಸೋಲುತ್ತಿದ್ದೇವೆ
ಹಲವು ಕಾರಣಗಳಿಂದಾಗಿ ನಾವು ಜನರ ವಿಶ್ವಾಸ ಗಳಿಸಲು ಸೋಲುತ್ತಿದ್ದೇವೆ. ಆದ್ದರಿಂದ ಹೊಸ ರಣತಂತ್ರ ಅಳವಡಿಸಿಕೊಳ್ಳಬೇಕಿದೆ. ಲೋಕಸಭೆ ಚುನಾವಣೆ ಮುಗಿದು ಮೂರು ವರ್ಷ ಕಳೆದಿದೆ. ಹೊಸದಾಗಿ ತಂತ್ರಗಾರಿಕೆ ಹೆಣೆಯಲು ಸರಿಯಾದ ಸಮಯವಿದು ಎಂಬ ವಿಮರ್ಶೆ ಮಾಡಿದ್ದಾರೆ ಸಿಂಧಿಯಾ.

ಮೋದಿ ಕೇಂದ್ರಿತ ಟೀಕೆಯಲ್ಲ
ವಿದೇಶಾಂಗ ನೀತಿ, ಆಂತರಿಕ ಭದ್ರತೆ, ಕೃಷಿ, ಉದ್ಯೋಗ, ರಕ್ಷಣೆ- ಹೀಗೆ ನಾನಾ ವಿಚಾರಗಳಲ್ಲಿ ವೈಫಲ್ಯ ಕಾಣುತ್ತಿರುವ ಕೇಂದ್ರ ಸರಕಾರದ ಓರೆ-ಕೋರೆಗಳನ್ನು ಜನರ ಮುಂದಿಡುತ್ತದೆ ಕಾಂಗ್ರೆಸ್. ನಮ್ಮ ಟೀಕೆ ಮೋದಿ ಕೇಂದ್ರಿತವಲ್ಲ ಎಂಬ ಸಮರ್ಥನೆ ಕೂಡ ನೀಡಿದ್ದಾರೆ ಜ್ಯೋತಿರಾದಿತ್ಯ ಸಿಂಧಿಯಾ.












Click it and Unblock the Notifications