ಬ್ರಾಹ್ಮಣರ ಮತ ಸೆಳೆಯಲು ಪರಶುರಾಮ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಭೇಟಿ
ಭೋಪಾಲ್, ಅಕ್ಟೋಬರ್ 25 : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದಲ್ಲಿ ಬಿಜೆಪಿಯ ಪ್ರಾಬಲ್ಯವಿರುವ ಮಲ್ವಾ-ನಿಮಾರ್ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಹಲವಾರು ದೇಗುಲಗಳಿಗೆ ಭೇಟಿ ನೀಡಲಿದ್ದು, ಮಹಾಕಾಳೇಶ್ವರನ ಆಶೀರ್ವಾದ ಪಡೆಯಲಿದ್ದಾರೆ.
ಅಕ್ಟೋಬರ್ 29ರಿಂದ ಆರಂಭವಾಗಲಿರುವ ಎರಡು ದಿನಗಳ ಭೇಟಿಯಲ್ಲಿ, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವ ಮೊದಲು ರಾಹುಲ್ ಅವರು, ಉಜ್ಜೈನ್ ನಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಈ ನಡುವೆ, ಶೇ.20ಕ್ಕೂ ಹೆಚ್ಚಿರುವ ಮೇಲ್ಜಾತಿಯ ಮತದಾರರು, ಅದರಲ್ಲೂ ಬ್ರಾಹ್ಮಣ ಮತದಾರರ ಒಲಿಸಿಕೊಳ್ಳುವ ಉದ್ದೇಶದಿಂದ ರಾಹುಲ್ ಗಾಂಧಿ ಅವರು, ವಿಷ್ಣುವಿನ ಅವತಾರ ಪರಶುರಾಮನ ಜನ್ಮಸ್ಥಳ ಜನಪಾವ್ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಮಯದಲ್ಲಿ ದಲಿತರ ಮತ ಸೆಳೆಯಲೆಂದು ಅವರು ಭಾರತದ ಸಂವಿಧಾನದ ಕರ್ತೃ ಡಾ. ಭೀಮರಾವ್ ಆರ್ ಅಂಬೇಡ್ಕರ್ ಅವರ ಜನ್ಮಸ್ಥಳ ಮಹೌಗೂ ಭೇಟಿ ನೀಡಲಿರುವುದು ವಿಶೇಷ.
ಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿ
ಈ ಪ್ರದೇಶಕ್ಕೆ ರಾಹುಲ್ ಅವರು ಭೇಟಿ ನೀಡಲೂ ಒಂದು ಪ್ರಮುಖ ಕಾರಣವಿದೆ. ಇದು ಬಿಜೆಪಿಯ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರವಾದರೂ, ಇತ್ತೀಚಿನ ವರ್ಷಗಳಲ್ಲಿ ಜನರು ಕಾಂಗ್ರೆಸ್ ಬಗ್ಗೆ ಒಲವು ತೋರಿಸುತ್ತಿದ್ದಾರೆ ಮತ್ತು ಬಿಜೆಪಿ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ.
ಇಡೀ ಮಧ್ಯಪ್ರದೇಶ ಸುತ್ತಿರುವ ರಾಹುಲ್
ನವೆಂಬರ್ 28ರಂದು ಬುಧವಾರ ಮಧ್ಯ ಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಮಧ್ಯ ಪ್ರದೇಶದಲ್ಲಿ ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೆ ಅವರು, ಮಹಾಕೌಶಾಲ್ ಮತ್ತು ಬುದಂಲ್ ಖಂಡ್ ದಲ್ಲಿ ಚುನಾವಣಾ ಪ್ರಚಾರ ಮುಗಿಸಿದ್ದು, ಗ್ವಾಲಿಯರ್-ಚಂಬಲ್ ಪ್ರದೇಶಗಳಲ್ಲಿ ಎರಡು ಬಾರಿ ಜನರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಮಲ್ವಾ-ನಿಮಾರ್ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಹೆಚ್ಚೂಕಡಿಮೆ ಇಡೀ ಮಧ್ಯ ಪ್ರದೇಶವನ್ನು ರಾಹುಲ್ ಗಾಂಧಿ ಅವರು ಸುತ್ತಿದಂತಾಗುತ್ತದೆ.
ರಾಹುಲ್ ಗಾಂಧಿ- ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಲ್ಲ
ಹಿಂದೂ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ
ಈ ಎಲ್ಲ ಭೇಟಿಗಳಲ್ಲಿಯೂ ರಾಹುಲ್ ಗಾಂಧಿ ಅವರು ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಕಡ್ಡಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ಭಾರತೀಯ ಜನತಾ ಪಕ್ಷಗಳ ನಾಯಕರಿಂದ ಎಷ್ಟೇ ಟೀಕೆಗಳು ತೂರಿಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದ ರಾಹುಲ್ ಅವರು ಟೆಂಪಲ್ ರನ್ ಮುಂದುವರಿಸಿದ್ದಾರೆ. ತಾವು ಹೋದಲ್ಲೆಲ್ಲ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಇಂಥದೇ ಪ್ರಯತ್ನವನ್ನು ರಾಹುಲ್ ಗಾಂಧಿ ಅವರು ಗುಜರಾತ್ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿಯೂ ಮಾಡಿದ್ದರು. ಆದರೆ, ಎರಡೂ ರಾಜ್ಯಗಳಲ್ಲಿ ಜನರ ಮತಗಳು ಅವರಿಗೆ ಅಷ್ಟಾಗಿ ಒಲಿಯಲಿಲ್ಲ.
ಜೇಟ್ಲಿ ಮಗಳ ಖಾತೆಗೆ ಚೋಕ್ಸಿ ಹಣ ಹಾಕಿದ್ದಾರೆ: ರಾಹುಲ್ ಗಂಭೀರ ಆರೋಪ
ಅಧಿಕಾರ ಕಿತ್ತುಕೊಳ್ಳಲೇಬೇಕೆಂಬ ಸಂಕಲ್ಪ
ಕಳೆದ 15 ವರ್ಷಗಳಿಂದ ಅಧಿಕಾರವಿಲ್ಲದೆ ಕಂಗೆಟ್ಟಿರುವ ಕಾಂಗ್ರೆಸ್, ಈ ಬಾರಿಯಾದರೂ ಆಡಳಿತವನ್ನು ಬಿಜೆಪಿಯಿಂದ ಕಿತ್ತುಕೊಳ್ಳಲೇಬೇಕೆಂಬ ಸಂಕಲ್ಪ ಮಾಡಿದ್ದು, ಬಿಜೆಪಿಯೇತರ ಪಕ್ಷಗಳೊಂದಿಗಿನ ಮೈತ್ರಿ ಸೇರಿದಂತೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಬಿಜೆಪಿಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇನ್ನೂ ಪ್ರಬಲವಾಗಿದ್ದು, ಅಧಿಕಾರ ಉಳಿಸಿಕೊಳ್ಳುವು ಹವಣಿಕೆಯಲ್ಲಿದ್ದಾರೆ. ಆದರೆ, ಜ್ಯೋತಿರಾಧಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಉತ್ಸಾಹ ಮತ್ತು ವಿಶ್ವಾಸ ತೋರುತ್ತಿದೆ. ಪಂಜಾಬ್ ವೊಂದನ್ನು ಹೊರತುಪಡಿಸಿದರೆ ಕಾಂಗ್ರೆಸ್ ದೇಶದ ಯಾವ ರಾಜ್ಯದಲ್ಲಿಯೂ ಏಕಾಂಗಿಯಾಗಿ ಆಡಳಿತದ ಚುಕ್ಕಾಣಿ ಹಿಡಿದಿಲ್ಲ.
ಇಲ್ಲಿ ಗೆದ್ದರೆ ಲೋಕಸಭೆಗೆ ಜಯದ ಮುನ್ನುಡಿ
ಮಧ್ಯ ಪ್ರದೇಶದಲ್ಲಿ ಅಧಿಕಾರ ಮತ್ತೆ ಗಳಿಸಲು ರಾಹುಲ್ ಗಾಂಧಿ ಅವರಿಗೆ ಸುವರ್ಣಾವಕಾಶ ಕೂಡಿಬಂದಿದೆ. ಇಲ್ಲಿ ಗೆದ್ದರೆ ಲೋಕಸಭೆ ಚುನಾವಣೆಗೆ ಇದು ಜಯದ ಮುನ್ನುಡಿ ಬರೆಯಲಿದೆ ಎಂಬುದು ಅವರ ವಿಶ್ವಾಸ. ಇದರ ಭಾಗವಾಗಿ, ಉಜ್ಜೈನ್ ನಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶಿವನ ಲಿಂಗಕ್ಕೆ ಅಕ್ಟೋಬರ್ 29ರಂದು ರಾಹುಲ್ ಅವರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಉಜ್ಜೈನ್ ನಲ್ಲಿ ಮಹಾಕಾಶೇಶ್ವರನಿಗೆ ನಮನ ಸಲ್ಲಿಸಿದ ನಂತರ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ. ಅದೇ ದಿನ ಇಂದೋರ್ ನಲ್ಲಿ ರೋಡ್ ಶೋ ಕೂಡ ನಡೆಸಲಿದ್ದಾರೆ.
ಅಂಬೇಡ್ಕರ್ ಜನ್ಮಸ್ಥಳಕ್ಕೆ ರಾಹುಲ್ ಭೇಟಿ
ಇಂದೋರ್ ನಿಂದ ಕೇವಲ 23 ಕಿ.ಮೀ. ದೂರದಲ್ಲಿರುವ, ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಹೌಗೆ ರಾಹುಲ್ ಅವರು ಭೇಟಿ ನೀಡಲಿರುವುದು ದಲಿತರ ಮತ ಗಳಿಕೆಗಾಗಿ ಎಂಬುದು ರಹಸ್ಯವಾಗಿ ಉಳಿದಿಲ್ಲ. ಅಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ, ಗುಡ್ಡಗಾಡು ಜನರು ಹೆಚ್ಚಾಗಿರುವ ಖರೇಗಾಂವ್ ಮತ್ತು ಝಬುವಾ ಪ್ರದೇಶಕ್ಕೆ ಅವರು ಭೇಟಿ ನೀಡಲಿದ್ದು, ಪರಶುರಾಮ ದೇವರ ಹುಟ್ಟಿನ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ. ಮಲ್ವಾ-ನಿಮಾರ್ ಪ್ರದೇಶ ಮಧ್ಯ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಇಂದೋರ್ ಮತ್ತು ಉಜ್ಜೈನ್ ಭಾಗದಲ್ಲಿ ವಿಸ್ತರಿಸಿಕೊಂಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ 66 ಕ್ಷೇತ್ರಗಳಲ್ಲಿ ಬಿಜೆಪಿ 56 ಕ್ಷೇತ್ರಗಳನ್ನು ಕಬಳಿಸಿತ್ತು. ಕಾಂಗ್ರೆಸ್ ಕೇವಲ 9 ಕ್ಷೇತ್ರಗಳಲ್ಲಿ ವಿಜಯಿಯಾಗಿತ್ತು. ಇದನ್ನು ತಿರುವುಮುರುವು ಮಾಡುವ ಉದ್ದೇಶದಿಂದಲೇ 'ಶಿವಭಕ್ತ' ರಾಹುಲ್ ಗಾಂಧಿ ಅವರು ಕಳೆದ ತಿಂಗಳಿನಿಂದಲೇ ಸತ್ನಾ ಜಿಲ್ಲೆಯಲ್ಲಿರುವ ಚಿತ್ರಕೂಟದಿಂದ ಟೆಂಪಲ್ ರನ್ ಆರಂಭಿಸಿದ್ದಾರೆ.