Rahul Gandhi: ಸದನದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ- ಸಿಡಿಮಿಡಿಗೊಂಡ ಸ್ಮೃತಿ ಇರಾನಿ
ನವದೆಹಲಿ, ಆಗಸ್ಟ್ 09: ಸಂಸದರಾಗಿ ಮರು ಸೇರ್ಪಡೆಗೊಂಡ ನಂತರ ಸಂಸತ್ತಿನಲ್ಲಿ ಮೊದಲ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವ್ಯಾಪಕ ವಾಗ್ದಾಳಿ ನಡೆಸಿದರು. ಇದೇ ವೇಳೆ, ಬಿಜೆಪಿ ಸಂಸದರು ಕುಳಿತ ದಿಕ್ಕಿನಲ್ಲಿ ಫ್ಲೈಯಿಂಗ್ ಕಿಸ್ ನೀಡಿದರು. ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಡಿಮಿಡಿಗೊಂಡರು.
ಮಣಿಪುರ ವಿಚಾರವಾಗಿ ಉಗ್ರ ಭಾಷಣ ಮಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

'ಮಣಿಪುರದಲ್ಲಿ ಎರಡು ಮಣಿಪುರಗಳನ್ನು ನೀವು ( ಬಿಜೆಪಿ ನಾಯಕರು ) ಹುಟ್ಟುಹಾಕಿದ್ದೀರಿ. ನೀವು ಭಾರತಕ್ಕೆ ಬೆಂಕಿ ಹಚ್ಚುವ ಮೂಲಕ ಭಾರತ ಮಾತೆಯ ಹಂತಕರಾಗಿದ್ದೀರಿ' ಎಂದು ಹರಿಹಾಯ್ದರು.
ಇದೇ ವೇಳೆ, ಕವಿ ರೂಮಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, 'ಇಂದು ನಾನು ಹೃದಯದಿಂದ ಮಾತನಾಡುತ್ತೇನೆಯೇ ಹೊರತು ತಲೆಯಿಂದಲ್ಲ' ಎಂದು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, 'ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಏಕೆಂದರೆ ಅವರಿಗೆ ಮಣಿಪುರ ಭಾರತದಲ್ಲಿಲ್ಲ. ನಾನು ಮಣಿಪುರದ ಕುರಿತು ಮಾತನಾಡುತ್ತಿದ್ದೇನೆ. ಸತ್ಯವೆಂದರೆ ಮಣಿಪುರದಲ್ಲಿ ಮಣಿಪುರವೇ ಉಳಿದಿಲ್ಲ. ನೀವು ಮಣಿಪುರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದೀರಿ' ಎಂದು ರಾಹುಲ್ ಗಾಂಧಿ ಹೇಳಿದರು.

'ನೀವು ಮಣಿಪುರದಲ್ಲಿ ಭಾರತಮಾತೆಯನ್ನು ಕೊಂದಿದ್ದೀರಿ. ನನ್ನ ಒಬ್ಬ ತಾಯಿ ಇಲ್ಲಿ ಕುಳಿತಿದ್ದಾರೆ. ಇನ್ನೊಬ್ಬ ತಾಯಿ ಮಣಿಪುರದಲ್ಲಿ ( ಭಾರತ ಮಾತೆ ) ಕೊಲ್ಲಲ್ಪಟ್ಟಿದ್ದಾಳೆ. ಭಾರತೀಯ ಸೇನೆಯು ಮಣಿಪುರದಲ್ಲಿ ಒಂದೇ ದಿನದಲ್ಲಿ ಶಾಂತಿಯನ್ನು ತರಬಹುದು. ಆದರೆ, ಸೇನೆಯನ್ನು ಬಳಸಿಕೊಳ್ಳುತ್ತಿಲ್ಲ. ನಮ್ಮ ಸೈನಿಕರು ಸಾಯಬೇಕೆಂದು ನೀವು ಬಯಸುತ್ತೀರಿ. ಪ್ರಧಾನಿ ಮೋದಿ ಅವರು ಭಾರತದ ಹೃದಯವನ್ನು ಕೇಳುತ್ತಿಲ್ಲ. ಅವರು ಯಾರ ಧ್ವನಿಯನ್ನು ಕೇಳುತ್ತಾರೆ?' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ತಮ್ಮ ಭಾಷಣವನ್ನು ಮುಗಿಸಿ ಸಂಸತ್ನಿಂದ ಹೊರನಡೆಯುತ್ತಿದ್ದಾಗ ರಾಹುಲ್ ಗಾಂಧಿ ಅವರು ಬಿಜೆಪಿ ಸಂಸದರ ಕುಳಿತ ಕಡೆಗೆ ತಿರುಗಿ ಫ್ಲೈಯಿಂಗ್ ಕಿಸ್ ನೀಡಿದರು. ಈ ವೇಳೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಭಾಷಣ ಮಾಡುತ್ತಿದ್ದರು.
ಫ್ಲೈಯಿಂಗ್ ಕಿಸ್ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಮೃತಿ ಇರಾನಿ, 'ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆಂದೂ ಕಂಡಿರಲಿಲ್ಲ. ಇದು ಅವರ ನಡವಳಿಕೆಯನ್ನು ತೋರಿಸುತ್ತದೆ. ಇದು ಅಶ್ಲೀಲವಾಗಿದೆ' ಎಂದು ಹೇಳಿದರು.

ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಫ್ಲೈಯಿಂಗ್ ಕಿಸ್ ಕುರಿತು ಕಾಂಗ್ರೆಸ್ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಲೋಕಸಭೆ ಸ್ಪೀಕರ್ಗೆ ದೂರು ಸಲ್ಲಿಸಿದರು. ಗಾಂಧಿಯವರ ನಡವಳಿಕೆಯನ್ನು 'ಅನುಚಿತ' ಎಂದು ಕರೆದರು.
2018ರಲ್ಲಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಆಸನದ ಬಳಿಗೆ ತೆರಳಿ ಆಲಿಂಗನ ಮಾಡಿದ್ದರು. ಆ ಬಳಿಕ ರಾಹುಲ್ ಗಾಂಧಿ ಅವರು ಕಣ್ಣು ಹೊಡೆದಿದ್ದರು. ಇದು ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿತ್ತು.












Click it and Unblock the Notifications