ಮೋದಿ-ಅದಾನಿ ಸಂಬಂಧ ಗುಜರಾತಿನಿಂದಲೇ ಆರಂಭ: ಫೋಟೊ ತೋರಿಸಿದ ರಾಹುಲ್- ಕೆರಳಿದ ಬಿಜೆಪಿ ನಾಯಕರು
ಬಿಲಿಯನೇರ್ ಗೌತಮ್ ಅದಾನಿ ಜತೆಗಿನ ಪ್ರಧಾನಿ ನರೇಂದ್ರ ಮೋದಿ ಸಂಬಂಧದ ಕುರಿತು ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಅವರು ಕುತೂಹಲಕರ ಫೋಟೊವೊಂದನ್ನು ಪಾರ್ಲಿಮೆಂಟ್ನಲ್ಲಿ ಪ್ರದರ್ಶನ ಮಾಡಿದ್ದಾರೆ. ಇಲ್ಲಿ ನೋಡಿ.
ನವದೆಹಲಿ, ಫೆಬ್ರವರಿ 07: ಸ್ಟಾಕ್ ಮ್ಯಾನಿಪುಲೇಷನ್ ಮತ್ತು ಅಕೌಂಟಿಂಗ್ ವಂಚನೆ ಆರೋಪದ ನಂತರ ಜಗತ್ತಿನ ಗಮನ ಸೆಳೆದಿರುವ ಬಿಲಿಯನೇರ್ ಗೌತಮ್ ಅದಾನಿ ಜತೆಗಿನ ಪ್ರಧಾನಿ ನರೇಂದ್ರ ಮೋದಿ ಸಂಬಂಧದ ಕುರಿತು ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಇತ್ತೀಚೆಗೆ 3,500-ಕಿಮೀ ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಗೊಳಿಸಿದ ಕಾಂಗ್ರೆಸ್ ನಾಯಕ, ಗೌತಮ್ ಅದಾನಿ ಅವರ ವ್ಯಾಪಾರ ಸಾಮ್ರಾಜ್ಯಕ್ಕೆ ಪ್ರಧಾನಿ ಮೋದಿ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಆರೋಪಗಳಿಗೆ ಆಡಳಿತಾರೂಢ ಬಿಜೆಪಿಯಿಂದ ಬಲವಾದ ವಿರೋಧ ವ್ಯಕ್ತವಾಯಿತು. ರಾಹುಲ್ ಗಾಂಧಿ ಅವರ ಆರೋಪಗಳು ಅಜಾಗರೂಕತೆಯಿಂದ ಕೂಡಿವೆ ಎಂದು ಬಿಜೆಪಿ ನಾಯಕರು ಹರಿಹಾಯ್ದರು.
'ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಅದಾನಿ ಅನೇಕ ಕ್ಷೇತ್ರಗಳಲ್ಲಿ ಅಂತಹ ಯಶಸ್ಸನ್ನು ಹೇಗೆ ಪಡೆದರೆಂದು ಜನರು ನನ್ನನ್ನು ಪ್ರಶ್ನಿಸಿದರು. ಪ್ರಧಾನಿಯೊಂದಿಗೆ ಅವರ ಸಂಬಂಧವೇನು ಎಂದೂ ಸಹ ನನಗೆ ಕೇಳಿದರು' ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಹೇಳಿದರು.
ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಲ್ಲಿ ಉದ್ಯಮಿ ಅದಾನಿ ಗುತ್ತಿಗೆ ಪಡೆದಿದ್ದಾರೆ ಎಂದೂ ರಾಹುಲ್ ಗಾಂಧಿ ಆರೋಪಿಸಿದರು.

'2014 ಮತ್ತು 2022 ರ ನಡುವೆ ಅದಾನಿ ನಿವ್ವಳ ಮೌಲ್ಯವು 8 ಬಿಲಿಯನ್ ಡಾಲರ್ಗಳಿಂದ 140 ಬಿಲಿಯನ್ಗೆ ಹೇಗೆ ಹೆಚ್ಚಾಯಿತು ಎಂದು ಜನರು ನನ್ನನ್ನು ಕೇಳಿದರು' ಎಂಬುದಾಗಿ ಕಾಂಗ್ರೆಸ್ ನಾಯಕ ತಿಳಿಸಿದರು.
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದಾನಿ ಶ್ರೀಮಂತರ ಪಟ್ಟಿಯಲ್ಲಿ '600 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ' ಬಂದಿದ್ದಾರೆ ಎಂದು ರಾಹುಲ್ ಹೇಳಿದರು.
ಅದಾನಿ ಗ್ರೂಪ್ಗೆ ಆರು ಏರ್ಪೋರ್ಟ್ ಗುತ್ತಿಗೆಗಳನ್ನು ಪಡೆದುಕೊಳ್ಳಲು ಮೋದಿ ಸರ್ಕಾರ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ಅವರು ಆರೋಪಿಸಿದರು.

ಸುಮ್ಮನೇ ಆರೋಪ ಮಾಡಬೇಡಿ, ಪುರಾವೆ ನೀಡಿ ಎಂದು ಕಾನೂನು ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದರು.
'ನೀವು ಈಗ ಹಿರಿಯ ಸಂಸದರಾಗಿದ್ದೀರಿ. ನೀವು ಜವಾಬ್ದಾರಿಯಿಂದ ಮಾತನಾಡಬೇಕು. ಸಂಸತ್ತಿನಲ್ಲಿ ನೀವು ಗಂಭೀರವಾಗಿರುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ. ನೀವು ಹೊರಗೆ ಏನು ಬೇಕಾದರೂ ಹೇಳಬಹುದು' ಎಂದು ರಿಜಿಜು ಹೇಳಿದರು.
ಜಿವಿಕೆ ಗ್ರೂಪ್ ಮತ್ತು ದಾಲ್ಮಿಯಾಗೆ ವಿಮಾನ ನಿಲ್ದಾಣ ಗುತ್ತಿಗೆಯನ್ನು ಕಾಂಗ್ರೆಸ್ ನೀಡಿದೆ ಎಂದು ಬಿಜೆಪಿ ಸಂಸದರು ಕಿಡಿಕಾರಿದರು. ಕಳೆದ ವರ್ಷ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ನಡೆದ 'ಇನ್ವೆಸ್ಟ್ ರಾಜಸ್ಥಾನ ಶೃಂಗಸಭೆ'ಯಲ್ಲಿ ಅದಾನಿ ₹ 65,000 ಕೋಟಿ ವಾಗ್ದಾನ ಮಾಡಿದ್ದನ್ನು ಬಿಜೆಪಿ ನಾಯಕರು ಉಲ್ಲೇಖಿಸಿದರು. 'ಅಶೋಕ್ ಗೆಹ್ಲೋಟ್-ಅದಾನಿ ಸಂಬಂಧಗಳ' ಬಗ್ಗೆ ರಾಹುಲ್ ಗಾಂಧಿ ಮಾತನಾಡಬೇಕು ಎಂದು ಅವರು ಟೀಕಿಸಿದರು.
ಸಾರ್ವಜನಿಕ ವಲಯದ ಕಂಪನಿಗಳಾದ ಎಲ್ಐಸಿ (ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಮತ್ತು ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಹೂಡಿಕೆ ಮಾಡಿರುವುದರಿಂದ ಅದಾನಿ ಗ್ರೂಪ್ ಷೇರುಗಳ ಇತ್ತೀಚಿನ ಕುಸಿತವು ಸಾರ್ವಜನಿಕ ಹಣವನ್ನು ಒಳಗೊಂಡಿರುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಎಲ್ಲಾ ಕಾನೂನುಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳನ್ನು ಅನುಸರಿಸಲಾಗಿದೆ ಎಂದು ಅದಾನಿ ಸಮೂಹವು ಎಂದು ಹೇಳಿದೆ.
ಹಿಂಡೆನ್ಬರ್ಗ್-ಅದಾನಿ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಗಳಿಂದಾಗಿ ಸಂಸತ್ತಿನ ಎರಡೂ ಸದನಗಳು ಪದೇ ಪದೇ ಅಸ್ತವ್ಯಸ್ತಗೊಂಡಿವೆ.












Click it and Unblock the Notifications